ಹಸಿದವರಿಗೆ ಅನ್ನ, ನೀರು ನೀಡುವುದು ಧರ್ಮ

103

Get real time updates directly on you device, subscribe now.


ತುಮಕೂರು: ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ನೀಡುವುದು ಭಾರತೀಯ ಸನಾತನ ಧರ್ಮದ ಪ್ರಮುಖ ಧ್ಯೇಯ ಎಂದು ಪಾವಗಡದ ರಾಮಕೃಷ್ಣ ಆಶ್ರಮದ ಡಾ.ಜಪಾನಂದ ಜೀ ತಿಳಿಸಿದ್ದಾರೆ.
ನಗರದ ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಡೀ ದೇಶದಲ್ಲಿಯೇ ವಿಶ್ವ ವಿದ್ಯಾಲಯವೊಂದು ತನ್ನಲ್ಲಿ ಕಲಿಯುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವುದು ತುಮಕೂರು ವಿಶ್ವವಿದ್ಯಾಲಯ ಮಾತ್ರ, ಇತ್ತೀಚೆಗೆ ಲಂಡನ್ ವಿಶ್ವ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಭಾರತೀಯ ಮಕ್ಕಳಿಗಾಗಿ ಇಸ್ಕಾನ್ ಸಂಸ್ಥೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ್ದು, ಇದು ಕೂಡ ಭಾರತೀಯ ಸನಾತನ ಧರ್ಮದ ದ್ಯೋತಕವಾಗಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಬರ ಆರಂಭಗೊಂಡಿದೆ, ನಗರದ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಗ್ರಾಮೀಣ ಭಾಗದಿಂದ ಸಾವಿರಾರು ಮಕ್ಕಳು ಬರುತ್ತಾರೆ, ಅವರಿಗೂ ಸಹ ಸಾರ್ವಜನಿಕರು ಮತ್ತು ದಾನಿಗಳ ಸಹಾಯದಿಂದ ಮಧ್ಯಾಹ್ನದ ಬಿಸಿಯೂಟ ನೀಡಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅದು ಸಹ ಉದ್ಘಾಟನೆಗೊಳ್ಳಲಿದೆ, ಇದರಿಂದ ಸುಮಾರು 2000 ಮಕ್ಕಳಿಗೆ ಅನುಕೂಲವಾಗಲಿದೆ ಎಂದ ಸ್ವಾಮೀಜಿ, ಸುಮಾರು 1500 ಮಕ್ಕಳು ಕಲಿಯುತ್ತಿರುವ ತುಮಕೂರು ವಿವಿ ಕಲಾ ಕಾಲೇಜಿನ ಮಕ್ಕಳಿಗಾಗಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟ ಶಾಸಕ ಜೋತಿಗಣೇಶ್ ಅವರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ, ಕುಡಿಯುವ ನೀರು ಅತ್ಯಮೂಲ್ಯವಾದ ವಸ್ತು, ಹಾಗಾಗಿ ಅದನ್ನು ಎಂದಿಗೂ ಪೋಲು ಮಾಡಬೇಡಿ, ಕುಡಿಯಲಷ್ಟೆ ಬಳಸಿ, ಕೈತೊಳೆಯಲು, ನಿಮ್ಮ ತಿಂಡಿ ಡಬ್ಬಿ ತೊಳೆಯಲು ಬೇರೆ ನೀರಿದೆ, ಅದನ್ನು ಬಳಕೆ ಮಾಡಿ, ವಿಶ್ವವಿದ್ಯಾಲಯ ನೀಡಿರುವ ಈ ಸವಲತ್ತು ಬಳಕೆ ಮಾಡಿಕೊಂಡು ಸತ್ಪ್ರಜೆಗಳಾಗಿ ರೂಪಗೊಳ್ಳಿ ಎಂದು ಸ್ವಾಮೀಜಿ ಸಲಹೆ ನೀಡಿದರು.

ರೆಡ್ ಕ್ರಾಸ್ ದೆಹಲಿ ಪ್ರತಿನಿಧಿ ಎಸ್.ನಾಗಣ್ಣ ಮಾತನಾಡಿ, ಸರಕಾರದ ನೀಡಬೇಕಾದ ಸವಲತ್ತನ್ನು ದಾನಿಗಳ ಸಹಕಾರದಿಂದ ನಿಮಗೆ ಸ್ವಾಮೀಜಿಯವರು ಒದಗಿಸಿದ್ದಾರೆ, ಹೆಚ್ಚು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ್ತಿಯತ್ತ ಮುನ್ನಡೆಯುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, 1500 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ಅಷ್ಟು ಸುಲಭದ ಮಾತಲ್ಲ, ರುಚಿ, ಶುಚಿಯ ಜೊತೆಗೆ ಗುಣಮಟ್ಟದ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ, ಇದುವರೆಗೂ ಕುಡಿಯುವ ನೀರಿನ ಕೊರತೆ ಇದ್ದು, ಅದು ಕೂಡ ಇಂದು ನಿವಾರಣೆಯಾಗಿದೆ, ಇದರಿಂದ ಮಕ್ಕಳಿಗೆ ಆಹಾರದ ಜೊತೆಗೆ ಶುದ್ಧ ಕುಡಿಯುವ ನೀರು ನೀಡಿದ ತೃಪ್ತಿ ನಮಗಿದೆ, ಈ ರೀತಿಯ ಯೋಜನೆ ಇಲ್ಲ, ನಾನು ಆರಂಭದಲ್ಲಿ ಕುಲಪತಿಯಾಗಿ ಬಂದಾಗ ಇಲ್ಲಿನ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿವಿಯ ಭೌತಿಕ ಮತ್ತು ಭೌದ್ಧಿಕ ಬೆಳೆವಣಿಗೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೆ, ಅದರ ಫಲವಾಗಿ ಒಂದೊಂದೆ ಸವಲತ್ತು ತಲುಪತ್ತಿವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ಸಿಗಲಿವೆ ಎಂಬ ವಿಶ್ವಾಸ ನಮಗಿದೆ ಎಂದರು.

ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಕರಿಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ತುಮಕೂರು ವಿವಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿರುವ ವಿವಿಯ ಕ್ಯಾಂಪಸ್ ನಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆರೆಯುವ ಇಚ್ಚೆ ಇತ್ತು, ಆ ಹೊತ್ತಿಗೆ ಜಪಾನಂದಜೀ ಅವರ ಮಾರ್ಗದರ್ಶನದಲ್ಲಿ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ ಆರಂಭವಾಯಿತು, ಕುಡಿಯುವ ನೀರಿನ ಸಮಸ್ಯೆಗೆ ಇಂದು ಮುಕ್ತಿ ಹಾಡಲಾಗಿದೆ, ಗಂಟೆಗೆ ಒಂದು ಸಾವಿರ ಲೀಟರ್ ಶುದ್ಧ ಕುಡಿಯುವ ನೀರು ನೀಡುವ ಈ ಘಟಕದಿಂದ ಬಿಸಿಯೂಟದ ಮಕ್ಕಳಿಗೆ ಹಾಗೂ ಕಾಲೇಜಿಗೆ ಸಾಕಾಗಲಿದೆ, ಭವಿಷ್ಯದಲ್ಲಿ ಒಂದು ದೊಡ್ಡ ಗ್ರಂಥಾಲಯ, ಕಲಾಭವನ ಹಾಗೂ ವೆಕೇಷನಲ್ ಸೆಂಟರ್ ತೆರೆಯಬೇಕೆಂಬ ಇಚ್ಚೆ ಇದೆ, ಇದರ ಜೊತೆಗೆ ಪ್ರತ್ಯೇಕವಾಗಿ ಕಾರ್ಮಸ್ ವಿಭಾಗದ ಕಟ್ಟಡ ನಿರ್ಮಾಣ ಮಾಡಲು ವಿವಿ ಮುಂದಾಗಿರುವುದು ಸಂತೋಷದ ವಿಚಾರ ಎಂದರು.

ವೇದಿಕೆಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ತುಮಕೂರು ವಿವಿ ಕುಲಸಚಿವೆ ನಾಯಿದಾ ಜಂ ಜಂ, ಅನ್ನಪೂರ್ಣೆಶ್ವರಿ ಮಧ್ಯಾಹ್ನದ ಬಿಸಿಯೂಟ ಸಮಿತಿ ಸದಸ್ಯರಾದ ಆರ್.ಎಲ್.ರಮೇಶ್ಬಾಬು, ಹೆಚ್.ಜಿ.ಚಂದ್ರಶೇಖರ್, ನಟರಾಜಶೆಟ್ಟಿ, ಗುತ್ತಿಗೆದಾರರಾದ ವಿರೂಪಾಕ್ಷಪ್ಪ, ಕಲಾ ಕಾಲೇಜಿನ ಉಪನ್ಯಾಸಕರು, ಅಧ್ಯಾಪಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!