ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ಪ್ರತಿಭಟನೆ

82

Get real time updates directly on you device, subscribe now.


ಕುಣಿಗಲ್: ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ಕೆಆರ್ಎಸ್ ಪಕ್ಷದ ನೇತೃತ್ವದಲ್ಲಿ ಸಿದ್ದೇಮಣ್ಣಿನ ಪಾಳ್ಯ ಸಮೀಪದ ಕರೆಮೂಲೆ ಗ್ರಾಮದ ಗ್ರಾಮಸ್ಥರು ಬೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಕೆಆರ್ಎಸ್ ಪಕ್ಷದ ಅಧ್ಯಕ್ಷ ಜಾಣಗೆರೆ ರಘು ಮಾತನಾಡಿ, ದೈನಂದಿನ ಜೀವನದಲ್ಲಿ ವಿದ್ಯುತ್ ಅತ್ಯಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ, ತಾಲೂಕಿನ ಶಾಸಕರು ಜನತಾ ದರ್ಶನ, ಗ್ರಾಮ ಸಂಪರ್ಕ ಎಂದು ವಾಸ್ತವ್ಯ ಮಾಡುವುದು ಮುಖ್ಯವಲ್ಲ, ಪ್ರಮುಖ ಮೂಲಭುತ ಸೌಕರ್ಯಗಳಲ್ಲಿ ಅಗತ್ಯವಾದ ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರ ಸಮಸ್ಯೆ ಪರಿಹರಿಸಬೇಕಿದೆ, ಕೇವಲ ತಮ್ಮ ಹಿಂಬಾಲಕರ, ತಮಗೆ ಮತ ಹಾಕಿದವರ ಸಮಸ್ಯೆ ಬಗೆಹರಿಸಿದರೆ ಮಾತ್ರ ಸಾಲದು, ಸಾಮಾನ್ಯ ಜನರ ಸಮಸ್ಯೆ ಆಲಿಸಬೇಕಿದೆ, ಸದರಿ ಗ್ರಾಮಕ್ಕೆ ಬೋರ್ ಲೈನ್ ಸಂಪರ್ಕ ಇದ್ದು ಕೇವಲ ಮೂರು ತಾಸು ವಿದ್ಯುತ್ ಇದೆ, ನಿರಂತರ ಜ್ಯೋತಿ ಸಂಪರ್ಕ ಇಲ್ಲವಾಗಿದೆ, ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಕಳೆದ ಹತ್ತುವರ್ಷಗಳಿಂದ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮನಸು ಮಾಡಿಲ್ಲ ಎಂದರು.

ಈ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಇಲ್ಲದೆ ಪರದಾಡುವ ಜೊತೆಯಲ್ಲಿ ಗ್ರಾಮದ ಮಹಿಳೆಯರು ಪರದಾಡುವಂತಾಗಿದೆ, ಬೆಸ್ಕಾಂ ಅಧಿಕಾರಿಗಳು ಮಾನವೀಯತೆ ಹಿನ್ನೆಲೆಯಲ್ಲಾದರೂ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪದಾಧಿಕಾರಿಗಳಾದ ನಾಗರಾಜು, ಚನ್ನಯ್ಯ, ಮಂಜುನಾಥ, ನಾಗೇಂದ್ರ, ಚಂದ್ರು, ಮಹದೇವ, ಮಾರಪ್ಪ, ಗ್ರಾಮಸ್ಥರಾದ ರಮೇಶ, ಶಿವಣ್ಣ, ವೆಂಕಟೇಶಯ್ಯ, ಸುಲೋಚನ, ಮಂಜುಳ, ದಿವ್ಯ, ರಂಗಸ್ವಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!