ಅಂಬೇಡ್ಕರ್ ಜ್ಞಾನ ಯುವ ಪೀಳಿಗೆಗೆ ಆದರ್ಶವಾಗಲಿ

70

Get real time updates directly on you device, subscribe now.


ತುಮಕೂರು: ಇಂದಿನ ಯುವ ಪೀಳಿಗೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನ ಆದರ್ಶವಾಗಬೇಕು, ಅವರ ಸಮಗ್ರ ಕೃತಿಗಳನ್ನು ಓದುವುದರ ಮೂಲಕ ಜ್ಞಾನ, ವ್ಯಕ್ತಿತ್ವ ವೃದ್ಧಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಹೀದಾ ಜಮ್ ಜಮ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವ ವಿದ್ಯಾಲಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿರಂತರ ಅಧ್ಯಯನ, ಏಕಾಗ್ರತೆ, ಸ್ವ ಅರಿವು, ಶಿಸ್ತು, ದೃಢ ಸಂಕಲ್ಪ ಇವೆಲ್ಲವನ್ನು ಮೈಗೂಡಿಸಿಕೊಂಡ ಕಾರಣದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ ಪ್ರಸಿದ್ಧಿ ಪಡೆದು ಈ ದೇಶದ ಶೋಷಿತರ ಮತ್ತು ಮಹಿಳೆಯರ ಬೆಳಕಾಗಿ ಇಂದಿಗೂ ಸಾಧನೆಯ ಶಿಖರವಾಗಿದ್ದಾರೆ, ಇಂದಿನ ವಿದ್ಯಾರ್ಥಿಗಳು ಮೌಢ್ಯತೆಗೆ ಮಾರು ಹೋಗದೆ ವೈಚಾರಿಕ ಮನೋಭಾವದಿಂದ ದೇಶ ಕಟ್ಟಲು ಅನೇಕ ರೀತಿಯ ಬರಹ ಭಾಷಣ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಪ್ರೊ.ಬಿ.ರಮೇಶ್ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೆ ಅತ್ಯಗತ್ಯವಾಗಿ ಬೇಕಾಗಿದೆ, ಇಂದಿನ ಸಮಾಜವು ಆಧುನಿಕತೆಯ ಮಾರ್ಗದಲ್ಲಿ ಸಾಗುತ್ತಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಕೋಮುವಾದ, ಅಸಮಾನತೆ, ಬಂಡವಾಳ ಶಾಹಿ ವ್ಯವಸ್ಥೆ ಇವೆಲ್ಲವು ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿವೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಾಗ ಸಂವಿಧಾನದ ನೈಜ ಆಶಯ ಅರ್ಥವಾಗುತ್ತವೆ, ಸಮಾಜವು ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ ಧಾರೆಗಳು ಜೀವಪರ ಮಾನವೀಯತೆಯ ನೆಲೆಗಟ್ಟಿನಿಂದ ಕೂಡಿದ್ದು, ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಜಾತ್ಯಾತೀತತೆ ಮುಂತಾದ ಅಂಶಗಳು ಈ ದೇಶಕ್ಕೆ ಅನಿವಾರ್ಯವಾಗಿದ್ದು ಇವುಗಳನ್ನು ಕಾಯ್ದುಕೊಳ್ಳಲು ಇಂದಿನ ಯುವಕರು ಸದಾ ಸನ್ನದ್ಧರಾಗಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಸುರೇಶ್ ಕುಮಾರ್ ಮಾತನಾಡಿ, ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖೇನ ಪ್ರತಿವರ್ಷವು ವಿಶೇಷ ಘಟಕ ಯೋಜನೆಯಡಿ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ, ಈ ಕಾರ್ಯಕ್ರಮ ಪ್ರತಿ ವರ್ಷವು ತುಮಕೂರು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ನಡೆಸಲಾಗುತ್ತಿದೆ, ಇಂದಿನ ಕಾರ್ಯಕ್ರಮ ಈ ವರ್ಷದ ಪ್ರಥಮ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಡಿ ಕಾಲೇಜು ಮಕ್ಕಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಜೀವನ, ಸಾಧನೆ, ಬರಹ, ಭಾಷಣ ಕುರಿತಂತೆ ಪ್ರಬಂಧ, ಆಶುಭಾಷಣ, ಚರ್ಚಾ ಸ್ಪರ್ಧೆ, ಕವನ ವಾಚನ ಮೊದಲಾದ ವಿಷಯಗಳಿಗೆ ಸ್ಪರ್ಧೆ ಏರ್ಪಡಿಸಲಾಗುತ್ತದೆ, ಅದರಲ್ಲಿ ವಿಜೇತ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತರನಮ್ ನಿಖತ್.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ದೊಡ್ಡ ದುರ್ಗಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕ ಹಾಗೂ ಉಪನ್ಯಾಸಕ ಸಿ.ಆರ್.ಮನೋಜ್, ತುಮಕೂರು ವಿವಿ ವಿಶೇಷ ಘಟಕ ಯೋಜನೆ ಸಂಚಾಲಕ ಡಾ.ಕೆ.ಮಹಾಲಿಂಗ, ಸಂಯೋಜಕ ಡಾ.ಚಿಕ್ಕಣ್ಣ, ಡಾ.ಕೆ.ಎನ್.ಲಕ್ಷ್ಮಿರಂಗಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!