ಸರಕಾರಿ ಬಸ್ ಗೆ ಪರ್ಯಾಯವಾಗಿ 1585 ಖಾಸಗಿ ಬಸ್ ವ್ಯವಸ್ಥೆ

594

Get real time updates directly on you device, subscribe now.

ಕೊರಟಗೆರೆ: ಕಲ್ಪತರು ಜಿಲ್ಲೆಯ 10 ತಾಲೂಕಿನ ಸುಗಮ ಸಂಚಾರಕ್ಕಾಗಿ ಸರಕಾರಿ ಬಸ್ಗಳಿಗೆ ಪರ್ಯಾಯವಾಗಿ 1585ಕ್ಕೂ ಖಾಸಗಿ ವಾಹನಗಳ ಬಳಕೆಯಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದರು.
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಗೆ ದಿಡೀರ್ ಭೇಟಿ ನೀಡಿದ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಖಾಸಗಿ ಬಸ್ಗಳ ನಿರ್ವಹಕ ಮತ್ತು ಮಾಲೀಕರಿಗೆ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯದಂತೆ ಈಗಾಗಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕ ಸಭೆ, ಜಾತ್ರೆ, ನಾಟಕ ಮತ್ತು ಸಮಾರಂಭ ಸಂಪೂರ್ಣ ರದ್ದು ಪಡಿಸಲಾಗಿದೆ, ಸಾರ್ವಜನಿಕರು ಅವಶ್ಯಕತೆ ಇದ್ದರೆ ಮಾತ್ರ ಪ್ರಯಾಣಿಸಿ ಇಲ್ಲವಾದರೆ ಆರೋಗ್ಯವಾಗಿ ಮನೆಯಲ್ಲಿ ಇರಬೇಕು ಎಂದು ಮನವಿ ಮಾಡಿದರು.
ಎತ್ತಿನಹೊಳೆ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ, ರೈತರು ಈಗಾಗಲೇ ಸ್ವಇಚ್ಚೆಯಿಂದ ಪೈಪ್ಲೈನ್ ಕಾಮಗಾರಿಗೆ ಭೂಮಿ ನೀಡಿದ್ದಾರೆ, ಅಂತಹ ರೈತರನ್ನು ಗುರುತಿಸಿ ಸರಕಾರದಿಂದ ಪರಿಹಾರ ನೀಡುತ್ತೇವೆ, ಕಾಮಗಾರಿಗೆ ಭೂಮಿ ನೀಡಿರುವ ರೈತರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುವಂತೆ ತುಮಕೂರಿನ ಭೂಸ್ವಾಧೀನ ಅಧಿಕಾರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕೊರಟಗೆರೆ ಪಟ್ಟಣದಲ್ಲಿ ಮುಖ್ಯರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಪರಿಣಾಮ ಜನರಿಗೆ ಸಂಚರಿಸಲು ಸಮಸ್ಯೆ ಎದುರಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಈಗಾಗಲೇ ಪಿಡ್ಲ್ಯೂಡಿ ಎಇಇಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೊರಟಗೆರೆ ಪಟ್ಟಣದ ಜನತೆಯ ಅನುಕೂಲಕ್ಕಾಗಿ ಸ್ಮಶಾನಕ್ಕೆ ಜಮೀನು ಗುರುತಿಸಲು ತಹಶೀಲ್ದಾರ್ಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಗೋವಿಂದರಾಜು, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಶಿರಸ್ತೇದಾರ್ ಚಂದ್ರಪ್ಪ, ಕಂದಾಯ ಅಧಿಕಾರಿಗಳಾದ ಪ್ರತಾಪ್, ಬಸವರಾಜು, ಚಿಕ್ಕರಾಜು, ಸುಧಾಕರ್, ಸೌಮ್ಯ, ನಾರಾಯಣನಾಯ್ಕ, ನಕುಲ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!