ಲಾರಿ ಅಂಡರ್ ಪಾಸ್ ಗೆ ನುಗ್ಗಿ ಅವಾಂತರ

93

Get real time updates directly on you device, subscribe now.


ತುಮಕೂರು: ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ನಲ್ಲಿ ಎತ್ತರದ ಕ್ಯಾಂಟರ್ ಚಲಿಸಿದ ಪರಿಣಾಮ ಅಂಡರ್ ಪಾಸ್ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿಯೊಂದು ಮುರಿದು ಬಿದ್ದಿರುವ ಘಟನೆ ನಡೆದಿದೆ.
ಶೆಟ್ಟಿಹಳ್ಳಿಗೇಟ್ ಅಂಡರ್ ಪಾಸ್ ನಲ್ಲಿ ಭಾರಿ ವಾಹನಗಳು ಹಾಗೂ ಎತ್ತರದ ವಾಹನಗಳು ಚಲಿಸದಂತೆ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ, ಆದರೆ ಕ್ಯಾಂಟರ್ ಚಾಲಕ ಇದನ್ನು ಗಮನಿಸದೆ ಕ್ಯಾಂಟರ್ ಚಲಾಯಿಸಿದ್ದಾನೆ, ಈ ಪರಿಣಾಮ ಅಂಡರ್ ಪಾಸ್ ಮೇಲ್ಭಾಗದಲ್ಲಿ ಅಳವಡಿಲಾಗಿದ್ದ ದಪ್ಪನೆಯ ಕಬ್ಬಿಣದ ಕಂಬಿಯ ಒಂದು ತುದಿ ಕೆಳಗೆ ಬಿದ್ದಿದೆ, ಅದೇ ವೇಳೆ ದ್ವಿಚಕ್ರ ವಾಹನವೊಂದು ಹಾದು ಹೋಗಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.
ರಾಘವೇಂದ್ರ ಸ್ವಾಮಿ ಮಠದ ಕಡೆಯಿಂದ ಬಂದಿರುವ ಕ್ಯಾಂಟರ್ ವಾಹನ ಅಂಡರ್ ಪಾಸ್ ತುದಿಯಲ್ಲೇ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿಗೆ ತಗುಲಿದೆ, ಇದರಿಂದ ಕಂಬಿ ಮುರಿದು ಬಿದ್ದಿದ್ದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ಕೆಲಕಾಲ ವಾಹನಗಳ ಸವಾರರು ಪರದಾಡುವಂತಾಯಿತು.

ಬೆಳಗ್ಗೆ 9.10 ಗಂಟೆ ಸಮಯದಲ್ಲಿ ಒಂದು ಕುಟುಂಬದವರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹಾದು ಹೋಗುತ್ತಿದ್ದರು, ಅದೃಷ್ಟವಶಾತ್ ಕಬ್ಬಿಣದ ಕಂಬಿಯಿಂದ ಪಾರಾಗಿದ್ದಾರೆ, ಈ ಅಂಡರ್ ಪಾಸ್ ನಲ್ಲಿ 5 ಬಾರಿ ಕಬ್ಬಿಣದ ಕಂಬಿ ಕಳಚಿಕೊಂಡು ಕೆಳಗೆ ಬಿದ್ದಿದೆ, ಅದೃಷ್ಟವಶಾತ್ ಪ್ರಾಣಹಾನಿ ಆಗುವುದು ತಪ್ಪಿದೆ, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಅಳವಡಿಸಿರುವ ಕಬ್ಬಿಣದ ರಾಡ್ ನ್ನು ಇನ್ನು ಮೇಲ್ಭಾಗಕ್ಕೆ ಅಳವಡಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತ್ಯಕ್ಷದರ್ಶಿ ಗಣೇಶ್ ಜಿ. ಪ್ರಸಾದ್ ಒತ್ತಾಯಿಸಿದ್ದಾರೆ.
ಅಂಡರ್ ಪಾಸ್ ನಲ್ಲಿ ಕೆಳಗೆ ಬಿದ್ದಿದ್ದ ಕಬ್ಬಿಣದ ರಾಡ್ ನ್ನು ಘಟನೆ ನಡೆದ ಸುಮಾರು 3 ಗಂಟೆಗಳ ಬಳಿಕ ಕ್ರೇನ್ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸಂಚಾರಿ ಠಾಣೆ ಪಿ ಎಸ್ ಐ ಮಂಗಳ ಗೌರಮ್ಮ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಈ ಭಾಗದಲ್ಲಿ ಉಂಟಾಗಿದ್ದ ಟ್ರಾಫಿಕ್ ಸಮಸ್ಯೆ ನಿವಾರಣೆಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆಅನುವು ಮಾಡಿಕೊಟ್ಟರು.
ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!