ಮಹಾನಗರ ಪಾಲಿಕೆಯಿಂದ 250.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಅಭಿವೃದ್ಧಿಗೆ ಆದ್ಯತೆ- ಮೂಲಸೌಕರ್ಯಕ್ಕೂ ಒತ್ತು

77

Get real time updates directly on you device, subscribe now.

ತುಮಕೂರು: ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ 2021-22ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ 250.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.
ಬಜೆಟ್ ಮಂಡಿಸಿದ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಳೀನ ಇಂದ್ರಕುಮಾರ್ ಪಾಲಿಕೆಯು ತನ್ನ ಆರ್ಥಿಕ ಇತಿ-ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ ವ್ಯಯ ಅಂದಾಜನ್ನು ತಯಾರಿಸಿದೆ. ಈ ಆಯ ವ್ಯಯದನ್ವಯ ಒಟ್ಟು ಆರಂಭಿಕ ಶಿಲ್ಕು 2091.45 ಲಕ್ಷ ರೂ. ಸೇರಿ 22996.10ಲಕ್ಷ ರೂ.ಗಳ ಒಟ್ಟು ಅಂದಾಜು ಸ್ವೀಕೃತಿ ಹಣದಲ್ಲಿ 2021- 22ನೇ ಸಾಲಿಗಾಗಿ 22745.44 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 250.66ಲಕ್ಷ ರೂ. ಮಿಗತೆಯಲ್ಲಿದೆ ಎಂದು ತಿಳಿಸಿದರು.
ಆರ್ಥಿಕ ಇತಿ ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತುಮಕೂರು ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ ಎಂದು ಹೇಳಿದರು.
ಈ ವರ್ಷದ ಆಯ ವ್ಯಯದಲ್ಲಿ ನಗರದ ಜನತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ, ವ್ಯವಸ್ಥಿತವಾದ ಪಾರ್ಕಿಂಗ್, ಸುಸಜ್ಜಿತ ಗ್ರಂಥಾಲಯ ಕಟ್ಟಡ, ಸ್ಮಾರ್ಟ್ ಲಾಂಜ್ ನಿರ್ಮಾಣ, ಪಾರ್ಕ್ ಮತ್ತು ರಸ್ತೆ ನಿರ್ಮಾಣ, ಮಹಾತ್ಮ ಗಾಂಧಿ ಕ್ರೀಡಾಂಗಣ ನವೀಕರಣದೊಂದಿಗೆ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಛ ತುಮಕೂರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿ, ಮತ್ತಿತರ ಸಾರ್ವಜನಿಕ ಸಹಭಾಗಿತ್ವದ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಹಣಕಾಸು ನಿರ್ವಹಣೆ
ಪ್ರಸಕ್ತ ಸಾಲಿನಲ್ಲಿ ಪಾಲಿಕೆಯಿಂದ ಒಟ್ಟು 20904.65 ಲಕ್ಷಗಳ ಸ್ವೀಕೃತಿ ನಿರೀಕ್ಷಿಸಲಾಗಿದ್ದು, ಈ ಪೈಕಿ ಸ್ವಂತ ಸಂಪನ್ಮೂಲಗಳಿಂದ 6049.65ಲಕ್ಷ ರೂ. ಹಾಗೂ ಸರ್ಕಾರದ ಅನುದಾನಗಳಿಂದ 14855 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಆಸ್ತಿ ತೆರಿಗೆಯು ಪಾಲಿಕೆಯ ಪ್ರಮುಖ ಆದಾಯ ಮೂಲವಾಗಿದ್ದು, ಕಟ್ಟಡ ಮತ್ತು ಭೂಮಿ ಮೇಲಿನ ಆಸ್ತಿ ತೆರಿಗೆಯಿಂದ 3200 ಲಕ್ಷ ರೂ. ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ ಮೇಲಿನ ದಂಡದ ರೂಪದಲ್ಲಿ 200 ಲಕ್ಷ ರೂ.ಗಳನ್ನು ಸಂಗ್ರಹಿಸಲು ಅಂದಾಜಿಸಲಾಗಿದೆ. ಆಸ್ತಿ ಹಕ್ಕು ಬದಲಾವಣೆಗೆ 100 ಲಕ್ಷ ಹಾಗೂ ಆಸ್ತಿ ನಕಲು ಶುಲ್ಕ 5 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ. ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ನೈರ್ಮಲ್ಯ ಉಪಕರದಿಂದ 200ಲಕ್ಷ ರೂ., ಕುಡಿಯುವ ನೀರಿನ ಶುಲ್ಕ 1200 ಲಕ್ಷ ರೂ., ಹೊಸ ಕೊಳಾಯಿ ಜೋಡಣಾ ಶುಲ್ಕ 30ಲಕ್ಷ ರೂ., ಅನಧಿಕೃತ ಕೊಳಾಯಿಗಳ ಸಕ್ರಮೀಕರಣದಿಂದ 20ಲಕ್ಷ ರೂ., ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಮಾರಾಟದಿಂದ 56ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ.
ಒಳಚರಂಡಿ ಶುಲ್ಕ 100 ಲಕ್ಷ ರೂ., ಒಳಚರಂಡಿ ಸಂಪರ್ಕದಿಂದ 100ಲಕ್ಷ ರೂ., ಹಾಗೂ ಅನಧಿಕೃತ ಒಳಚರಂಡಿ ಸಂಪರ್ಕ ಸಕ್ರಮದಿಂದ 20ಲಕ್ಷ ರೂ.ಗಳ ಆದಾಯ, ಅಂಗಡಿ ಮಳಿಗೆಗಳ ಬಾಡಿಗೆಯಿಂದ 158ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ ವಸೂಲಿಯಿಂದ 100ಲಕ್ಷ ರೂ. ಕೆರೆಗಳ ಪುನರುಜ್ಜೀವನ ಶುಲ್ಕ ವಸೂಲಾತಿಯಿಂದ 20ಲಕ್ಷ ರೂ.; ಉದ್ದಿಮೆ ಪರವಾನಗಿ ಶುಲ್ಕದಿಂದ 15ಲಕ್ಷ ರೂ.; ಜಾಹೀರಾತು ತೆರಿಗೆ ರೂಪದಲ್ಲಿ 15ಲಕ್ಷ ರೂ.; ಅಧಿಭಾರ ಶುಲ್ಕದಿಂದ 50ಲಕ್ಷ ರೂ.; ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕದಿಂದ 15ಲಕ್ಷ ರೂ.; ರಸ್ತೆ ಕಡಿತ ಶುಲ್ಕದಿಂದ 100 ಲಕ್ಷ ರೂ.; ವಿವಿಧ ಬ್ಯಾಂಕ್ಗಳಲ್ಲಿ ಪಾಲಿಕೆ ಹೊಂದಿರುವ ಖಾತೆಗಳಲ್ಲಿ ನಿರ್ವಹಿಸಿದ ಹಣದ ಮೇಲೆ 100ಲಕ್ಷ ರೂ.ಗಳ ಬಡ್ಡಿ; ವಾಹನ ನಿಲುಗಡೆ ಶುಲ್ಕದಿಂದ 10ಲಕ್ಷ ರೂ.; ಮಾರುಕಟ್ಟೆ ಶುಲ್ಕದಿಂದ 6ಲಕ್ಷ ರೂ.; ಬಸ್ ನಿಲುವಳಿ ಶುಲ್ಕ 20ಲಕ್ಷ ರೂ. ಜನನ-ಮರಣ ಪ್ರಮಾಣ ಪತ್ರ, ಟೆಂಡರ್ ಫಾರಂ ವಿತರಣೆ, ಘನತ್ಯಾಜ್ಯ ಸಂಸ್ಕರಣಾ ಮಾರಾಟ, ಅನುಪಯುಕ್ತ ವಸ್ತುಗಳ ವಿಲೇವಾರಿ, ಮತ್ತಿತರ ದಂಡಗಳಿಂದ 74.65ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆಗೆ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿವಿಧ ಅನುದಾನ ನಿರೀಕ್ಷಿಸಲಾಗಿದ್ದು, ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ವೇತನ ಮತ್ತಿತರೆ ಸೌಲಭ್ಯಗಳ ಎಸ್.ಎಫ್.ಸಿ ವೇತನದಡಿ 1800 ಲಕ್ಷ ರೂ., ನಗರದ ಅಭಿವೃದ್ಧಿಗಾಗಿ ಎಸ್.ಎಫ್.ಸಿ ಮುಕ್ತ ನಿಧಿಯಡಿ 500 ಲಕ್ಷ ರೂ.; ಎಸ್.ಎಫ್.ಸಿ ವಿಶೇಷ ಅನುದಾನವಾಗಿ 1,000 ಲಕ್ಷ ರೂ. ನಿರೀಕ್ಷಿಸಲಾಗಿದ್ದು, ಬಿಡುಗಡೆಯಾಗುವ ಅನುದಾನವನ್ನು ಸರ್ಕಾರದ ಮಾರ್ಗಸೂಚಿಗಳಂತೆ ಒಳಚರಂಡಿ, ರಸ್ತೆ, ತೆರೆದ ಚರಂಡಿ, ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ, ಬೀದಿದೀಪ, ಉದ್ಯಾನವನಗಳ ಅಭಿವೃದ್ಧಿ, ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿನ ನೀರು ಸರಬರಾಜು ಸ್ಥಾವರ, ಬೀದಿ ದೀಪ, ಒಳಚರಂಡಿ ಶುದ್ಧೀಕರಣ ಘಟಕಗಳ ವಿದ್ಯುತ್ ಶುಲ್ಕ ಪಾವತಿಗಾಗಿ 3,000 ಲಕ್ಷ ರೂ.; ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ಪೂರ್ಣಗೊಳಿಸಲು 840ಲಕ್ಷ ಹಾಗೂ ಸ್ವಚ್ಛ ಭಾರತ ಮಿಷನ್ ಜಾಗೃತಿ ಮತ್ತು ಅರಿವು ಮೂಡಿಸಲು 20 ಲಕ್ಷ ರೂ.; ಜನಗಣತಿ ಕಾರ್ಯಕ್ಕಾಗಿ ಸರ್ಕಾರದಿಂದ 50ಲಕ್ಷ ರೂ.; ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ 300 ಲಕ್ಷ ರೂ.; ಪಾಲಿಕೆ ವ್ಯಾಪ್ತಿಯ ಬಡಜನರ ಸಬಲೀಕರಣಕ್ಕಾಗಿ ಡೇ ನಲ್ಮ್ ಯೋಜನೆಯಡಿ 50 ಲಕ್ಷ ರೂ.; 15ನೇ ಹಣಕಾಸು ಆಯೋಗದಡಿ 1600 ಲಕ್ಷ ರೂ.ಗಳ ಕಾರ್ಯಾಧಾರಿತ ಅನುದಾನವನ್ನು ನಿರೀಕ್ಷಿಸಲಾಗಿದೆ.
ಸ್ಥಳೀಯ ಶಾಸಕರ ಮತ್ತು ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ 25ಲಕ್ಷ ರೂ.; ಪೌರಕಾರ್ಮಿಕರ ಮನೆಗಳ ನಿರ್ಮಾಣಕ್ಕಾಗಿ 155.48ಲಕ್ಷ ರೂ.ಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ರಸಕ್ತ ಸಾಲಿಗೆ 150 ಲಕ್ಷ ರೂ.ಗಳ ಅನುದಾನವನ್ನು ನಿರೀಕ್ಷಿಸಲಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಸ್ತೆ ನಿರ್ಮಾಣ ಹಾಗೂ ಅಗಲೀಕರಣ, ಫುಟ್ಪಾತ್, ಬೀದಿದೀಪ, ನೀರು ಸರಬರಾಜು ವ್ಯವಸ್ಥೆ, ಒಳಚರಂಡಿ ನಿರ್ಮಾಣ, ಮಳೆ ನೀರು ಚರಂಡಿ ನಿರ್ಮಾಣ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳಿಗಾಗಿ 4200 ಲಕ್ಷ ರೂ., ಬರ ಪರಿಹಾರ, ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 50 ಲಕ್ಷ ರೂ.ಗಳ ಅನುದಾನವನ್ನು ನಿರೀಕ್ಷಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆಗಾಗಿ 50ಲಕ್ಷ ರೂ., ಪಾಲಿಕೆ ವತಿಯಿಂದ ಭರಿಸಲಾಗುವ ಕೆಲವೊಂದು ಅನಿರೀಕ್ಷಿತ ವೆಚ್ಚಗಳಿಗೆ ಸಂಬಂಧಿಸಿದಂತೆ 210 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಪಾಲಿಕೆಯು 2021-22ನೇ ಸಾಲಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಭತ್ಯೆ ಪಾವತಿಗಾಗಿ 1800 ಲಕ್ಷ ರೂ.; ಹೊರಗುತ್ತಿಗೆ ಮಾನವ ಸಂಪನ್ಮೂಲಕ್ಕಾಗಿ 80ಲಕ್ಷ ರೂ.; ರಾಷ್ಟ್ರೀಯ ಹಬ್ಬ, ನಾಡಹಬ್ಬ, ಕಲೆ, ಕ್ರೀಡೆ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಗಾಗಿ 15ಲಕ್ಷ ರೂ. ಮತ್ತು ಸಿಹಿ ತಿಂಡಿ ಹಂಚಿಕೆಗೆ 5 ಲಕ್ಷ ರೂ.; ಕಾಯಿದೆ ವೆಚ್ಚಕ್ಕಾಗಿ 25ಲಕ್ಷ ರೂ.; ಪ್ರಕೃತಿ ವಿಕೋಪದಡಿ ಗಾಳಿ, ಮಳೆ, ಬೆಂಕಿ ಆಕಸ್ಮಿಕಗಳಿಂದ ಆಸ್ತಿಪಾಸ್ತಿ ಹಾಗೂ ಪ್ರಾಣ ಹಾನಿಗಾಗಿ 50ಲಕ್ಷ ರೂ.ಗಳ ಸಹಾಯಧನ; ವಿಪತ್ತು ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುವವರಿಗಾಗಿ 10ಲಕ್ಷ ರೂ., ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ 200ಲಕ್ಷ ರೂ. ಕಾಯ್ದಿರಿಸಲಾಗಿದೆ; ನಗರದ ಅಭಿವೃದ್ಧಿಯಲ್ಲಿ ಜನರ ನೇರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಾರ್ಡ್ ಕಮಿಟಿ ರಚನೆಗಾಗಿ 10ಲಕ್ಷ ರೂ.; ಕೌನ್ಸಿಲ್ ಶಾಖೆ ವೆಚ್ಚಕ್ಕಾಗಿ 65ಲಕ್ಷ ರೂ.; ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ 20ಲಕ್ಷ ರೂ.; ಜನಗಣತಿ ವೆಚ್ಚಕ್ಕಾಗಿ 50ಲಕ್ಷ ರೂ.; ರಸ್ತೆ, ಚರಂಡಿ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ವೃತ್ತಗಳ ಅಭಿವೃದ್ಧಿಗಾಗಿ 4,216 ಲಕ್ಷ ರೂ. ಹಾಗೂ ಪ್ರಸಕ್ತ ವರ್ಷದಲ್ಲಿ ತುಮಕೂರು ನಗರಕ್ಕೆ ಶಿರಾ ಕಡೆಯಿಂದ ಹೆಬ್ಬಾಗಿಲು ಆಗಿರುವ ಸಂಗೊಳ್ಳಿರಾಯಣ್ಣ ವೃತ್ತ ಅಭಿವೃದ್ಧಿಗೆ 40 ಲಕ್ಷ ರೂ.; ಮಹಾಪೌರರ ಮತ್ತು ಉಪಮಹಾಪೌರರ ವಿವೇಚಾನುದಾನದಡಿ 150 ಲಕ್ಷ ರೂ.; ಸಾರ್ವಜನಿಕ ಬೀದಿ ದೀಪ ವ್ಯವಸ್ಥೆಗಾಗಿ 2187 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮೂಲದಲ್ಲಿಯೇ ಕಸ ಬೇರ್ಪಡಿಸಲು ನಾಗರೀಕರಲ್ಲಿ ಅರಿವು ಮೂಡಿಸಲು 50 ಲಕ್ಷ ರೂ., ಬೀಡಾಡಿ ಪ್ರಾಣಿಗಳ ಸ್ಥಳಾಂತರಕ್ಕಾಗಿ 80ಲಕ್ಷ ರೂ., ಅನಾಥ ಶವ ಸಂಸ್ಕಾರಕ್ಕಾಗಿ 3ಲಕ್ಷ ರೂ. ಮತ್ತಿತರ ವೆಚ್ಚ ಸೇರಿದಂತೆ ಒಟ್ಟು 134ಲಕ್ಷ ರೂ., ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ 100 ಲಕ್ಷ ರೂ.; ಸಾರ್ವಜನಿಕ ಸ್ಮಶಾನ ಅಭಿವೃದ್ಧಿಗಾಗಿ 140ಲಕ್ಷ ರೂ.; ವೈಜ್ಞಾನಿಕ ಕಸ ವಿಲೇವಾರಿಗಾಗಿ 3935 ಲಕ್ಷ ರೂ.; ಕುಡಿಯುವ ನೀರು ಪೂರೈಕೆಗಾಗಿ 3476.50 ಲಕ್ಷ ರೂ.; ಮಾದರಿ ಉದ್ಯಾನವನ ನಿರ್ಮಾಣ ಹಾಗೂ ಅಭಿವೃದ್ಧಿಪಡಿಸಲು 100 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಸಾರ್ವಜನಿಕ ಮೂಲಭೂತ ಆಸ್ತಿಗಳ ನಿರ್ಮಾಣ ಹಾಗೂ ನಿರ್ವಹಣೆಯಡಿ ಪಾಲಿಕೆಯ ಕಟ್ಟಡ ನಿರ್ವಹಣೆ ಹಾಗೂ ಮತ್ತಿತರ ನಿರ್ವಹಣೆಗಾಗಿ 100ಲಕ್ಷ ರೂ., ನೂತನ ಆಡಳಿತ ಕಛೇರಿ ಕಟ್ಟಡ ನಿರ್ಮಾಣ ಹಾಗೂ ಮತ್ತಿತರ ಕಾಮಗಾರಿಗಳಿಗಾಗಿ 300 ಲಕ್ಷ ರೂ. ಹಾಗೂ ಮಳೆ ನೀರು ಚರಂಡಿ ಮತ್ತು ಸಣ್ಣ ಸೇತುವೆ ನಿರ್ಮಾಣಕ್ಕಾಗಿ 500 ಲಕ್ಷ ರೂ. ಸೇರಿದಂತೆ 800 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿರುವುದರಿಂದ ಸಾರ್ವಜನಿಕ ಮೂಲಭೂತ ಆಸ್ತಿ ನಿರ್ಮಾಣ ಮತ್ತು ನಿರ್ವಹಣೆಗಾಗಿ ಒಟ್ಟು 900 ಲಕ್ಷ ರೂ. ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 50ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.
ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಡಿ ವಿದ್ಯಾರ್ಥಿ ವೇತನ, ಲ್ಯಾಪ್ಟಾಪ್ ಖರೀದಿಗೆ ಸಹಾಯಧನ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ಸೇರಿದಂತೆ ಪ.ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ 847.91ಲಕ್ಷ ರೂ.; ದಿವ್ಯಾಂಗ ಚೇತನರ ಕಲ್ಯಾಣಕ್ಕಾಗಿ 58.69ಲಕ್ಷ ರೂ.; ಕ್ರೀಡಾ ಚಟುವಟಿಕೆಗೆ 6.74 ಲಕ್ಷ ರೂ.,; ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ದಿಬ್ಬೂರು ಬಳಿಯ 2 ಎಕರೆ ಪ್ರದೇಶದಲ್ಲಿ ಜಿ+2 ಮಾದರಿಯ ಮನೆಗಳ ನಿರ್ಮಾಣಕ್ಕಾಗಿ 150ಲಕ್ಷ ರೂ.; ದೀನ್ದಯಾಳ್ ಅಂತ್ಯೋದಯ ಡೇ-ನಲ್ಮ್ ಯೋಜನೆಯಡಿ 50ಲಕ್ಷ ರೂ.; ಗಣಕೀಕೃತ ಮತ್ತು ಕಾಗದ ರಹಿತ ಕಚೇರಿಗಾಗಿ 50ಲಕ್ಷ ರೂ.; ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಗೆ 20.50 ಲಕ್ಷ ರೂ. ಹಾಗೂ ಈ ಮೊತ್ತದಲ್ಲಿ 10 ಲಕ್ಷ ರೂ.ಗಳನ್ನು ಮೇಯರ್ ಕಪ್ ಕ್ರೀಡಾಕೂಟಕ್ಕೆ ಮೀಸಲಿಡಲಾಗಿದೆ. ಪಾಲಿಕೆ ಸದಸ್ಯರುಗಳ ಜ್ಞಾನಾರ್ಜನೆ ಅಧ್ಯಯನ ಪ್ರವಾಸಕ್ಕಾಗಿ 20 ಲಕ್ಷ ರೂ.ಗಳನ್ನು, ವಾಣಿಜ್ಯ ಸಂಕೀರ್ಣ ಮತ್ತು ನಿರ್ವಹಣೆಗಾಗಿ 20 ಲಕ್ಷ ರೂ., ಪಾಲಿಕೆಯ ಪೌರಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರು ಹಾಗೂ ಪತ್ರಕರ್ತರಿಗಾಗಿ ಆರೋಗ್ಯ ಕೇಂದ್ರ ಸ್ಥಾಪನೆಗಾಗಿ 15 ಲಕ್ಷ ರೂ., ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆಗಾಗಿ 1190.50 ಲಕ್ಷ ರೂ., ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 34.05 ಲಕ್ಷ ರೂ., ಮಹಿಳಾ ಸಬಲೀಕರಣ ಉತ್ತೇಜನಕ್ಕಾಗಿ 10 ಲಕ್ಷ ರೂ., ಅಂಗನವಾಡಿ ಕೇಂದ್ರಗಳ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ 25 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.
ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಆಯುವ್ಯಯ ಸಭೆಯಲ್ಲಿ ಉಪಮಹಾಪೌರರಾದ ನಾಜಿಮಾಭೀ, ಪಾಲಿಕೆ ಆಯುಕ್ತೆ ರೇಣುಕಾ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪಾಲಿಕೆ ಎಲ್ಲಾ ವಾರ್ಡ್ಗಳ ಸದಸ್ಯರು ಮತ್ತು ಅಧಿಕಾರಿಗಳು ಹಾಜರಿದ್ದರು.

ಉಳಿತಾಯಕ್ಕೆ ಆದ್ಯತೆ ನೀಡಿ: ಜಿ.ಎಸ್.ಬಿ
ಪಾಲಿಕೆಯ 2021-22ನೇ ವರ್ಷದ ಬಜೆಟ್ ಅನ್ನು ಇತಿ ಮಿತಿಯಲ್ಲಿ ಖರ್ಚು ಮಾಡಿ ಉಳಿತಾಯಕ್ಕೆ ಆದ್ಯತೆ ಕೊಡಬೇಕು, ಪಾಲಿಕೆಗೆ ಬರುವ ಅನುದಾನವನ್ನು ಸಮರ್ಪಕವಾಗಿ ಖರ್ಚು ಮಾಡಬೇಕು ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.
ಪಾಲಿಕೆ ಬಜೆಟ್ ಮಂಡನೆಗೂ ಮುನ್ನ ಮಾತನಾಡಿ, ಎಲ್ಲಾ ಸದಸ್ಯರು ಸ್ಫರ್ದಾತ್ಮಕವಾಗಿ ತಮ್ಮ ವಾರ್ಡ್ನಲ್ಲಿ ಸಸಿಗಳನ್ನು ಬೆಳೆಸಿ ತುಮಕೂರು ನಗರವನ್ನು ಹಸಿರೀಕರಣ ಮಾಡಬೇಕು, ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶವು ಬೃಹತ್ತಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ, ಮುಂದಿನ ದಿನಗಳಲ್ಲಿ ಅಮೆರಿಕಾದ ವಿದ್ಯುತ್ ಚಾಲಿತ ಕಾರು ನಿರ್ಮಾಣ ಕಂಪನಿ ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!