ಸರ್ಕಾರ ಉಪನ್ಯಾಸಕರ ಬೇಡಿಕೆ ಈಡೇರಿಸಲಿ

42

Get real time updates directly on you device, subscribe now.


ತುಮಕೂರು: ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಒತ್ತಾಯಿಸಿದರು.
ಕಳೆದ 13 ದಿನಗಳಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಗುಂಡೂರಾವ್ ಅವರು ಮುಖ್ಯ ಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಖಾಯಂ ಮಾಡಿದ್ದರು, ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯನವರು ಸಿಆರ್ಎಲ್ ತಿದ್ದುಪಡಿ ಮಾಡುವ ಮೂಲಕ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಬಹುದು ಎಂದು ತಿಳಿಸಿದ್ದರು, ಇಂದು ಅವರದೇ ಸರ್ಕಾರದಲ್ಲಿ ಅವರೇ ಮುಖ್ಯ ಮಂತ್ರಿಯಾಗಿದ್ದಾರೆ, ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸುವ ಧೈರ್ಯ ಮಾಡಲಿ ಎಂದ ಅವರು ಉಪನ್ಯಾಸಕ ವೃಂದದವರು ಬೀದಿ ಬದಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಈ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುನಿಲ್ ಮಾತನಾಡಿ, ಅತಿಥಿ ಉಪನ್ಯಾಸಕರು ಎಂಬ ಕಾರಣಕ್ಕೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇವರನ್ನು ನೋಂದಾಯಿಸಿಕೊಳ್ಳದೆ ವಂಚಿತರನ್ನಾಗಿ ಮಾಡಿದ್ದಾರೆ, ಇಷ್ಟು ವರ್ಷಗಳು ಅತಿಥಿ ಉಪನ್ಯಾಸಕರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಈ ವರ್ಷ ಅತಿಥಿ ಉಪನ್ಯಾಸಕರು ಎಂಬ ಕಾರಣಕ್ಕೆ ನಿಮ್ಮನ್ನು ಕೈಬಿಟ್ಟಿರುವುದು ಅಧಿಕಾರಿಗಳು ಮತದಾನದ ಹಕ್ಕಿನಿಂದ ನಿಮ್ಮ ದೂರ ಇಟ್ಟಿದ್ದಾರೆ, ಇದು ಸರಿಯಲ್ಲ, ಅಧಿಕಾರಿಗಳು ಕೂಡಲೇ ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
ವಕೀಲ ಶಿವಣ್ಣ ಮಾತನಾಡಿ, ನನಗೆ ಪಾಠ ಮಾಡಿದ ಉಪನ್ಯಾಸಕರು ಕೂಡ ಇಂದು ಬೀದಿ ಬದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿದರೆ ಅತಿಥಿ ಉಪನ್ಯಾಸಕರ ಜೀವನದ ಪರಿಸ್ಥಿತಿ ನಮಗೆ ತಿಳಿಯುತ್ತದೆ, ಸರ್ಕಾರ ಉಪನ್ಯಾಸಕರನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ, ನಿಮ್ಮ ಬೇಡಿಕೆ ಈಡೇರುವ ವರೆಗೂ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದರು.

ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ್ ಮಾತನಾಡಿ, ತುಮಕೂರು ಜಿಲ್ಲೆಯಿಂದ ಎಲ್ಲಾ ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ಅಧಿವೇಶನದ ಸುವರ್ಣಸೌಧದ ಮುಂದೆ ಅತಿಥಿ ಉಪನ್ಯಾಸಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರೈಲು ಮತ್ತು ಬಸ್ಗಳಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ಸಿದ್ಧತೆ ಮಾಡಿಕೊಂಡಿದ್ದು, 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತುಮಕೂರು ಜಿಲ್ಲೆಯಿಂದ ಬೆಳಗಾವಿ ವಿಧಾನ ಸೌಧದ ಮುಂದೆ ಪ್ರತಿಭಟಿಸಲು ತೆರಳುತ್ತಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಶಿವಣ್ಣ ತಿಮ್ಮಲಾಪುರ, ಎಂ.ಟಿ .ಮಲ್ಲಿಕಾರ್ಜುನ್, ಹೇಮಾವತಿ, ಶ್ವೇತ , ಶಂಕರ್ ಹಾರೋಗೆರೆ, ನಾಗೇಂದ್ರ, ಮನು, ಕಾಂತರಾಜ್, ಮಾದೇವಯ್ಯ, ಮಲ್ಲಿಕಾರ್ಜುನ್, ಜಯರಾಮ್, ಸೌಮ್ಯ, ಸವಿತಾ, ಡಾ.ಶಿವಯ್ಯ ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!