ತುಮಕೂರು ವಿವಿ ಯಲ್ಲಿ ಬೃಹತ್ ಯೋಗ ಶಿಬಿರ

111

Get real time updates directly on you device, subscribe now.


ತುಮಕೂರು: ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ದೂರ ಮಾಡಿ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಲು ಯೋಗ ಸಹಕಾರಿಯಾಗಲಿದೆ ಎಂದು ಯೋಗ ಗುರು ಅನಂತ್ ಜೀ ಹೇಳಿದರು.
ಯೋಗ ವಿಸ್ಮಯ ಟ್ರಸ್ಟ್, ತುಮಕೂರು ವಿಶ್ವ ವಿದ್ಯಾಲಯ ಮತ್ತು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಡಿ.10 ರಿಂದ 17ರ ವರೆಗೆ ತುಮಕೂರು ವಿವಿ ಆವರಣದಲ್ಲಿ ನಡೆಯಲಿರುವ ಉಚಿತ ಬೃಹತ್ಯೋಗ ಶಿಬಿರದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಆಯುರ್ವೇದದಿಂದ ಆರೋಗ್ಯ ಎಂಬಂತೆ ಯಾವುದೇ ಔಷಧಿ, ಮಾತ್ರೆಗಳಿಲ್ಲದೆ ಕೇವಲ ಆಹಾರ ಶೈಲಿ, ಜೀವನ ಶೈಲಿ ಹಾಗೂ ನಿರ್ದಿಷ್ಟ ಯೋಗಾಸನ ಮತ್ತು ಪ್ರಾಣಾಯಾಮಗಳ ಮೂಲಕ ಮನೆಯಲ್ಲಿಯೇ ಶೇ.99 ರಷ್ಟು ಕಾಯಿಲೆ ಗುಣಪಡಿಸಿಕೊಳ್ಳಬಹುದು, ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಯೋಗ ಸಹಕಾರಿಯಾಗಲಿದೆ, 65 ಬಗೆಯಆಹಾರ ಪಥ್ಯ ಅನುಸರಿಸಿ ಆರೋಗ್ಯ ವೃದ್ಧಿಯ ಮಾರ್ಗವನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುವುದು ಎಂದರು.

ಹೃದಯ ಸಂಬಂಧಿ ಖಾಯಿಲೆಗಳಿಗೆ, ಬಿಪಿ, ಡಯಾಬಿಟೀಸ್, ಕೊಲೆಸ್ಟ್ರಾಲ್, ಮಲಬದ್ಧತೆ, ಗ್ಯಾಸ್ಟ್ರೈಟಿಸ್, ಥೈರಾಯ್ಡ್, ಇರೆಗ್ಯುಲರ್ ಪಿರಿಯಡ್ಸ್, ಮೆನೋಪಾಸ್ ಡಿ ಸಾರ್ಡರ್, ಮಾನಸಿಕ ಖಿನ್ನತೆ, ಆಂಗ್ಸೈಟಿ, ಅಧಿಕತೂಕ, ಅಸ್ತಮ, ಬ್ರಾಂಕೈಟೀಸ್, ಸೈನಸ್, ಡಸ್ಟ್ ಅಲರ್ಜಿ, ಮುಂತಾದ ದೀರ್ಘಾವಧಿ ಮತ್ತು ಅಲ್ಪಾವಧಿ ಖಾಯಿಲೆಗಳಿಗೆ ಯೋಗಾಭ್ಯಾಸದಿಂದ ಮುಕ್ತಿ ದೊರೆಯುತ್ತದೆ ಎಂದು ತಿಳಿಸಿದರು.
ತುಮಕೂರಿನ ಜನತೆ ಕೈಜೋಡಿಸಿ ಮುಂದಿನ 5 ವರ್ಷದ ನಿರ್ದಿಷ್ಟಗುರಿ ಇಟ್ಟು ಕೊಂಡರೆ ತುಮಕೂರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ವಿದ್ಯಾರ್ಥಿಗಳಿಂದ ಸಾಧ್ಯ, ಅಂತಹ ಮನಸ್ಥಿತಿ, ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳ ಮನಸಲ್ಲಿ ಬೆಳೆಸಲು ಯೋಗ ಸಹಕಾರಿಯಾಗಲಿದೆ, ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸಲು, ಅಂಕಗಳನ್ನೂ ಮೀರಿದ ಆತ್ಮವಿಶ್ವಾಸ ರೂಪುಗೊಳಿಸಲು ಯೋಗಾಭ್ಯಾಸ ನಿರಂತರವಾಗಬೇಕು ಎಂದು ತಿಳಿಸಿದರು.
ಯೋಗ ಶಿಬಿರ ಡಿ.10 ರಿಂದ 17ರ ವರೆಗೆ ಬೆಳಗ್ಗೆ 5.30 ರಿಂದ 7.30ರ ವರೆಗೆ ವಿವಿ ಆವರಣದಲ್ಲಿ ನಡೆಯಲಿದೆ, ಇದರಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದರು.

ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ. ನಿ.ಪುರುಷೋತ್ತಮ್, ಪತ್ರಕರ್ತ ಎಸ್.ನಾಗಣ್ಣ, ಉದ್ಯಮಿಗಳಾದ ಡಾ.ಆರ್.ಎಲ್.ರಮೇಶ್ ಬಾಬು, ಎಚ್.ಜಿ.ಚಂದ್ರಶೇಖರ್, ದಕ್ಷಿಣಾಮೂರ್ತಿ, ಸಹಾಯಕ ಪ್ರಾಧ್ಯಾಪಕ ಡಾ.ಪದ್ಮನಾಭ.ಕೆ.ವಿ, ಡಾ.ಎ.ಎಂ.ಮಂಜುನಾಥ ಇದ್ದರು.

Get real time updates directly on you device, subscribe now.

Comments are closed.

error: Content is protected !!