ಡಿ.15ಕ್ಕೆ ವಿದ್ಯಾನಿಧಿ ಸಾಂಸ್ಕೃತಿಕ ಉತ್ಸವ ಅಮೇಜ್

91

Get real time updates directly on you device, subscribe now.


ತುಮಕೂರು: ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುವುದು ವಿದ್ಯಾರ್ಜನೆಯ ಜೊತೆಗೆ ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆಗಳು ಮೇಳೈಸಿದಾಗಲೇ ಎಂಬುದು ಸರ್ವವಿದಿತ, ಜನ್ಮತಃ ಪ್ರತಿಯೊಂದು ಮಗುವೂ ಪ್ರತಿಭಾಶಾಲಿಯೇ, ಅವರಲ್ಲಿ ಸುಪ್ತವಾಗಿರುವ ಪ್ರತಿಭೆ ಗುರುತಿಸಿ ಅದಕ್ಕೆ ಬೇಕಾದ ಮೆರುಗು ನೀಡಿ, ಸೂಕ್ತ ಅವಕಾಶ ಒದಗಿಸಿದರೆ ಶಿಕ್ಷಣದ ಅರ್ಥವೂ ಪರಿಪೂರ್ಣವಾಗುತ್ತದೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಪಟ್ಟಿಯಲ್ಲಿನ ಅತ್ಯುನ್ನತ ಶ್ರೇಣಿಯೊಂದೇ ಮಕ್ಕಳ ನಿಜವಾದ ಸಾಮರ್ಥ್ಯ ಬಿಂಬಿಸಲಾಗದು, ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿನ ಅವರ ತೊಡಗಿಸಿಕೊಳ್ಳುವಿಕೆಯು ಬದುಕಿನ ಹಲವು ಮಜಲುಗಳನ್ನು ಗೆಲ್ಲಲು ಬೇಕಾದ ಆತ್ಮಸ್ಥೈರ್ಯ ಅವರಲ್ಲಿ ತುಂಬುತ್ತದೆ.

ಈ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಸರು ಮಾಡಿರುವ ವಿದ್ಯಾನಿಧಿ ಪದವಿ ಪೂರ್ವಕಾಲೇಜು ಡಿಸೆಂಬರ್ 15 ರಂದು ವೈಭವದ ಸಾಂಸ್ಕೃತಿಕ ಉತ್ಸವ ಅಮೇಜ್- 2023ನ್ನು ಹಮ್ಮಿಕೊಂಡಿದೆ, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಅಮೇಜ್- 2023 ಉದ್ಘಾಟನೆಗೊಳ್ಳಲಿದೆ, ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ಎಸ್ ಪಿ ಅಶೋಕ್.ಕೆ.ವಿ, ಬೆಂಗಳೂರಿನ ಆಕ್ಸ್ಫರ್ಡ್ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಆರ್.ಸುಪ್ರೀತ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಬಿ. ಜಯಣ್ಣನವರ ಗೌರವ ಉಪಸ್ಥಿತಿ ಕಾರ್ಯಕ್ರಮದ ಶೋಭೆ ಹೆಚ್ಚಿಸಲಿದೆ, ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ವಿ-ಟೆಕ್ನೋ ನೀಟ್ ಅಕಾಡೆಮಿ ಶುಭಾರಂಭಗೊಳ್ಳಲಿದೆ, ಔಪಚಾರಿಕ ಸಮಾರಂಭದ ನಂತರ ನಡೆಯಲಿರುವ ಸಾಂಸ್ಕೃತಿಕ ವೈಭವದಲ್ಲಿ ಭರತನಾಟ್ಯ, ಯಕ್ಷಗಾನ ನೃತ್ಯ, ಛತ್ರಪತಿ ಶಿವಾಜಿ, ಹನುಮಾನ್ ಚಾಲಿಸಾ, ರಾಮಾಯಣ, ಸೈನಿಕರಿಗೆ ನಮನ, ಕರ್ನಾಟಕ ಪೊಲೀಸ್, ಕೇರಳ, ರಾಜಸ್ಥಾನ, ಗುಜರಾತಿ, ಮರಾಠಿ ವಿಶೇಷ ನೃತ್ಯಗಳು, ನವಿಲ ನೃತ್ಯ, ನವದುರ್ಗಾ, ಕಂಸಾಳೆ, ನಮ್ಮ ತುಮಕೂರು- ನಮ್ಮ ಹೆಮ್ಮೆ, ಪ್ರೈಡ್ ಇಂಡಿಯಾ, ಮೈಮ್ ಶೋ, ದೇಶ ಪ್ರೇಮದ ಪಿರಮಿಡ್, ಕನ್ನಡದ ವೈಭವ, ಶಿವ ತಾಂಡವ, ಅಘೋರಿ, ಒರಿಜಿನಲ್ ಗ್ಯಾಂಗ್ ಸ್ಟರ್, ಹುಲಿಕುಣಿತ, ಹೆತ್ತವರು- ಮಕ್ಕಳ ಭಾವನಾತ್ಮಕ ಬಂಧವನ್ನು ಒಳಗೊಂಡಂತೆ 60ಕ್ಕೂ ಹೆಚ್ಚಿನ ನೃತ್ಯ ವೈವಿಧ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ, ಕಾಲೇಜು ವಿದ್ಯಾರ್ಥಿಗಳ ಮ್ಯೂಸಿಕ್ ಬ್ಯಾಂಡ್ ಕುತೂಹಲ ಅರಳಿಸಿದೆ.

ನಮ್ಮ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಅಮೇಜ್- 2023ಕ್ಕೆ ಸಜ್ಜಾಗಿದ್ದಾರೆ, ಕಡಿಮೆ ಅವಧಿಯಲ್ಲಿಯೂ ಪಠ್ಯ, ಪರೀಕ್ಷೆಗಳ ಜೊತೆ ಜೊತೆಗೆ ಶ್ರದ್ಧೆಯಿಂದ ನೃತ್ಯ ಕಲಿತು ಸಿದ್ಧರಾಗಿದ್ದಾರೆ, ಇದೊಂದು ಬಗೆಯಲ್ಲಿ ಮಕ್ಕಳಿಗೆ ಒತ್ತಡ ನಿವಾರಣಾ ಚಟುವಟಿಕೆಯೂ ಹೌದು, ಇದು ಅವರ ಕಲಿಕೆಗೆ ಉತ್ತೇಜನಕಾರಿಯಾಗಲಿ ಎಂಬ ಸದುದ್ದೇಶದಿಂದ ವೈಭವೋಪೇತವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ, ಬಹಳ ನಿರೀಕ್ಷೆಯಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವದ ಗುಣವಿದೆ, ತಂತ್ರಜ್ಞಾನಗಳ ಬಳಕೆ, ಸಾಮಾಜಿಕ ಜಾಲತಾಣ ಸದ್ಬಳಕೆಯನ್ನು ಅವರು ತಿಳಿದಿದ್ದಾರೆ, ಸ್ವತಃ ಉತ್ಸಾಹದಿಂದ ಅಮೇಜ್- 2023 ಕುರಿತ ಹಲವು ರೀಲ್ಸ್ಗಳನ್ನು ರೂಪಿಸಿ ಪ್ರಸಾರ ಮಾಡಿದ್ದಾರೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡುವಲ್ಲಿ ವಿದ್ಯಾರ್ಥಿಗಳೇ ಮುತುವರ್ಜಿ ವಹಿಸಿದ್ದಾರೆ, ಉಪನ್ಯಾಸಕರ ಸಮರ್ಪಕ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಅಮೇಜ್- 2023ರ ಯಶಸ್ಸಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿ.ಎಸ್.ಆರ್. ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!