ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಮುಂದಾಗಿ

79

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 54 ಪೋಕ್ಸೋ ಪ್ರಕರಣ ದಾಖಲಾಗಿ ಎಫ್ಐಆರ್ ಆಗಿವೆ, ಅದರಲ್ಲಿ 5 ಪ್ರಕರಣ ಅಪ್ರಾಪ್ತ ಬಾಲಕಿಯರ ಮೇಲಾದ ದೌರ್ಜನ್ಯ ಪ್ರಕರಣಗಳಾಗಿವೆ, ಉಳಿದ ಪ್ರಕರಣ ಅಂತರಜಾತಿ ವಿವಾಹ, ಬಾಲ್ಯ ವಿವಾಹ, ಅಪ್ರಾಪ್ತರ ವಿವಾಹವಾಗಿದೆ, ಮಾನವ ಮೌಲ್ಯಗಳಿಗೆ ಬೆಲೆ ಕೊಟ್ಟಾಗ ದೌರ್ಜನ್ಯ ಮುಕ್ತ ಸಮಾಜ ಕಾಣಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ಮಹಿಳಾ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಐಕ್ಯೂಎಸಿ, ವಿವಿ ವಿಜ್ಞಾನ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆ ಹೇಗೆ? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
2013ರಲ್ಲಿ ಜಾರಿಯಾದ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆ ಕಾಯಿದೆ 1997ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ವಿಶಾಖ ಪ್ರಕರಣದ ಮಾರ್ಗಸೂಚಿಗಳನ್ನು, ಕಾಯಿದೆಯ ಹಿನ್ನೆಲೆಯನ್ನು ಪ್ರತಿಯೊಬ್ಬ ಹೆಣ್ಣು ತಿಳಿಯಬೇಕು, ರಾಜಸ್ಥಾನದ ಗುಜ್ಜರ್ ಕುಟುಂಬದ ಹೆಣ್ಣು ಮಗಳಾದ ಬನ್ವಾರಿ ದೇವಿಯ ಮೇಲಾದ ಸಾಮೂಹಿಕ ಅತ್ಯಾಚಾರದಿಂದ ಹೊರಬಂದ ತೀರ್ಪಿನಿಂದಾಗಿ ಮಹಿಳೆಯರ ಹಿತರಕ್ಷಣೆಗೆ ಕಾನೂನು ಭದ್ರಕೋಟೆ ರಚಿಸಿತು ಎಂದು ತಿಳಿಸಿದರು.

2013ರ ಕಾಯಿದೆ ಪ್ರಕಾರ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಹಿತಕ್ಕಾಗಿ ಆಂತರಿಕ ಸಮಿತಿ ರಚಿಸಬೇಕು, ಸಮಿತಿಯಲ್ಲಿ ಶೇ.50 ರಷ್ಟು ಮಹಿಳೆಯರು ಇರಬೇಕು, ಸಂಸ್ಥೆಯಲ್ಲಿ 10ಕ್ಕಿಂತ ಕಡಿಮೆ ಮಹಿಳಾ ಉದ್ಯೋಗಿಗಳಿದ್ದಲ್ಲಿ ಸ್ಥಳೀಯ ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳ ಉಸ್ತುವಾರಿಯಿರಬೇಕು, ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯವಾದಲ್ಲಿ ಸಮಿತಿಯ ಮುಖೇನ ಬಲಿಪಶುವಾದ ಹೆಣ್ಣುಮಗಳು ಲಿಖಿತ ರೂಪದಲ್ಲಿ ಪೋಲಿಸ್ ಠಾಣೆಗೆ ದೂರು ನೀಡಬೇಕು, ಅಪರಾಧಿಗೆ 3 ವರ್ಷ ಜೈಲು, 50,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಯುವ ಜನತೆ ಲೋಭಗಳಿಗೆ ಮೋಸ ಹೋಗದೆ ಬದುಕನ್ನು ರೂಪಿಸಿಕೊಳ್ಳುವ ಮಾರ್ಗದಲ್ಲಿ ನಡೆಯಬೇಕು, ಮಹಿಳೆಯರ ಖಾಸಗಿ ಬದುಕನ್ನು ಚಿತ್ರೀಕರಿಸಿಕೊಳ್ಳುವುದು, ಧ್ವನಿ ಮುದ್ರಿಸಿಕೊಳ್ಳುವುದು ದೊಡ್ಡ ಅಪರಾಧ, ಅಪರಾಧಿಗಳಿಗೆ 7 ವರ್ಷ ಸಜೆ ಖಂಡಿತ, ಅಪ್ರಾಪ್ತ ಬಾಲಕಿಯರನ್ನು ಮದುವೆಯಾದಲ್ಲಿ ಅಪಹರಣ, ಅತ್ಯಾಚಾರದ ಪ್ರಕರಣ ದಾಖಲಾಗುತ್ತದೆ, ಅಂಥವರಿಗೆ 20 ವರ್ಷ ಸಜೆ ಹಾಗೂ ಬದುಕು ನಾಶವಾಗುತ್ತದೆ ಎಂದರು.
ಕೌಟುಂಬಿಕ ಕಲಹ, ಹಿಂಸೆಗಳಲ್ಲಿ ಯಾರದೋ ಒತ್ತಡಕ್ಕೆ ಸಿಲುಕಿ ಕ್ಷಣದಲ್ಲಿ ನಿರ್ಧರಿಸುವುದು, ಸಂಪೂರ್ಣ ವಿಷಯ ತಿಳಿಯದೆಯೇ ತೀರ್ಮಾನಕ್ಕೆ ಬರುವುದು, ವಿಚ್ಛೇದನಕ್ಕೆ ಮೊರೆ ಹೋಗುವುದು, ಒಬ್ಬರ ಮೇಲಿನ ಕೋಪಕ್ಕೆ ಇಡೀ ಕುಟುಂಬವನ್ನು ನ್ಯಾಯಾಲಯದ ಮೆಟ್ಟಿಲೇರಿಸುವುದೂ ಕೂಡ ಅಪರಾಧವೆ, ಮಕ್ಕಳಿಂದಾಗಿ ಪೋಷಕರು ಸಮಸ್ಯೆಗಳಿಗೆ ಸಿಲುಕುವುದು ಬೇಡ, ಕಾನೂನಿನ ದುರ್ಬಳಕೆ ತಪ್ಪು, ತೊಂದರೆ ಆಗಿರುವುದನ್ನು ಸಾಬೀತು ಪಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿವಿ ಕುಲ ಸಚಿವರಾದ ನಾಹಿದಾ ಜಮ್ ಜಮ್ ಮಾತನಾಡಿ, ಶಿಸ್ತಿನ, ಮೌಲ್ಯಗಳಿಂದ ಕೂಡಿದ ಬದುಕು ವಿದ್ಯಾರ್ಥಿಗಳದ್ದಾಬೇಕು, ಬದಲಾವಣೆ ತರುವ ಯುವ ಸಮಾಜ ಎಡವಬಾರದು, ಹೆಣ್ಣಾಗಿ ಹುಟ್ಟವುದೇ ಸಾಧನೆಯಾಗಿದೆ, ಆದರೂ ಹೆಣ್ಣು ಭ್ರೂಣ ಹತ್ಯೆಗಳ ಸಂಖ್ಯೆ ಏರುತ್ತಿದೆ, ಮಹಿಳೆಯರನ್ನು ಪ್ರೋತ್ಸಾಹಿಸುವ ಪ್ರಧಾನ ಸಮಾಜಬೇಕು ಎಂದು ಹೇಳಿದರು. ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ ಇದ್ದರು.

Get real time updates directly on you device, subscribe now.

Comments are closed.

error: Content is protected !!