ಡಿ.23, 24ಕ್ಕೆ ವೀರಶೈವ- ಲಿಂಗಾಯಿತ ಮಹಾಸಭಾ ಅಧಿವೇಶನ

75

Get real time updates directly on you device, subscribe now.


ತುಮಕೂರು: ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾ ವತಿಯಿಂದ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಡಿಸೆಂಬರ್ 23 ಮತ್ತು 24 ರಂದು ಅಖಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾದ 24ನೇ ಮಹಾ ಅಧಿವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1904ರಲ್ಲಿ ಹಾನಗಲ್ ಕುಮಾರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಮೊದಲ ಮಹಾ ಅಧಿವೇಶನ ನಡೆದಿದ್ದು, ಕಳೆದ 10 ವರ್ಷಗಳ ಹಿಂದೆ ಮೈಸೂರಿನ ಶಿವರಾತ್ರಿ ದೇಶಿಕೇಂದ್ರ ಮಹಾ ಸಂಸ್ಥಾನ ಮಠದಲ್ಲಿ 23ನೇ ಅಧಿವೇಶನ ನಡೆದಿತ್ತು, ಪ್ರತಿ ಐದು ವರ್ಷಗಳಿಗೊಮ್ಮೆ ಅಧಿವೇಶ ನಡೆಯುತ್ತಿದ್ದು, ಕೊರೊನದಿಂದಾಗಿ 24ನೇ ಅಧಿವೇಶವನ್ನು 2023ರ ಡಿಸೆಂಬರ್ 23-24 ರಂದು ನಡೆಸಲು ತೀರ್ಮಾನಿಸಿ, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಡಿಸೆಂಬರ್ 23ರ ಮಧ್ಯಾಹ್ನ 12.30 ರಿಂದ 2.30ರ ವರೆಗೆ 24ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ವಿವಿಧ ಹರಗುರು ಚರಮೂರ್ತಿಗಳು ಸಾನಿಧ್ಯ ವಹಿಸಲಿದ್ದಾರೆ, ಅಧಿವೇಶನವನ್ನು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಉದ್ಘಾಟಿಸಲಿದ್ದು, ಮಹಾಸಭಾದ ರಾಜ್ಯಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು, ಈಶ್ವರ ಖಂಡ್ರೆ, ಭೀಮಣ್ಣ ಖಂಡ್ರೆ ಸೇರಿದಂತೆ ಲಿಂಗಾಯಿತ ಸಮುದಾಯದ ಹಲವು ಸಚಿವರು, ಶಾಸಕರು ಭಾಗವಹಿಸಲಿದ್ದಾರೆ, 24ನೇ ಮಹಾ ಅಧಿವೇಶನಕ್ಕೆ 3 ಲಕ್ಷ ದಿಂದ 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ, ತುಮಕೂರಿನಿಂದ 25 ಬಸ್ ವ್ಯವಸ್ಥೆ ಮಾಡಲಾಗಿದೆ, ಕೆಲವರು ಸ್ವಯಂ ಪ್ರೇರಿತರಾಗಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೋಹನ್ ಕುಮಾರ್ ಪಟೇಲ್ ತಿಳಿಸಿದರು.

ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ಸಮುದಾಯದ ಹಿರಿಯರಾದ ದಿವಂಗತ ಎಸ್.ನಿಜಲಿಂಗಪ್ಪ ಮತ್ತು ಜೆ.ಹೆಚ್.ಪಟೇಲ್ ವೇದಿಕೆ ಎಂದು ಹೆಸರು ಇಡಲಾಗಿದೆ, ಪ್ರಮುಖವಾಗಿ ಕರ್ನಾಟಕದಲ್ಲಿರುವ ವೀರಶೈವ- ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು, ರಾಜ್ಯ ಸರಕಾರದ ನ್ಯಾಯವಾದಿ ಕಾಂತರಾಜು ವರದಿ ಸ್ವೀಕರಿಸಬಾರದು ಹಾಗೂ ವೈಜ್ಞಾನಿಕವಾಗಿ ಮತ್ತೊಮ್ಮೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಬೇಕು ಎಂಬ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಳ್ಳಲಾಗುವುದು ಎಂದು ಮೋಹನ್ ಕುಮಾರ್ ಪಟೇಲ್ ತಿಳಿಸಿದರು.
ಸರಕಾರವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಕಾಂತರಾಜು ಅವರ ಮೂಲಕ ಮಾಡಿಸಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಂಪೂರ್ಣ ಲೋಪ ದೋಷದಿಂದ ಕೂಡಿದೆ, ಹಾಗಾಗಿ ಇದನ್ನು ಸರಕಾರ ಒಪ್ಪಿಕೊಳ್ಳಬಾರದು, ಹೊಸದಾಗಿ ವೈಜ್ಞಾನಿಕ ವಿಧಾನದ ಮೂಲಕ ಸಮೀಕ್ಷೆ ನಡೆಸಬೇಕು, ಅಲ್ಲದೆ ಕಾಂತರಾಜು ವರದಿಯ ಕೆಲ ಅಂಶಗಳು ಸೋರಿಕೆಯಾಗಿದ್ದು, ಇದು ವೀರಶೈವ- ಲಿಂಗಾಯಿತ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ, ಅಲ್ಲದೆ ವೀರಶೈವ, ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾ ಸಭಾದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ವೀರಶೈವ-ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸದ ಪರಿಣಾಮ ಕೇಂದ್ರ ಸರಕಾರ ನಡೆಸುವ ಯುಪಿಎಸ್ಸಿ, ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ಇಲ್ಲದಂತಾಗಿದೆ, ಐಎಎಸ್, ಐಪಿಎಸ್ ಅಧಿಕಾರಗಳ ಸಂಖ್ಯೆ ಕ್ಷೀಣಿಸಿದೆ, ಇದರ ವಿರುದ್ಧ ಪ್ರಬಲ ಹೋರಾಟ ರೂಪಿಸುವ ನಿಟ್ಟಿನಲ್ಲಿ ಈ ಅಧಿವೇಶದ ಮಹತ್ವದ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವೀರಶೈವ- ಲಿಂಗಾಯಿತ ಸಮಾಜದ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಅಧಿವೇಶಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ದಕ್ಷಿಣಮೂರ್ತಿ, ಯದುಕುಮಾರ್, ಮಂಜುನಾಥ್, ಶಶಿಧರಯ್ಯ, ಮಂಜುನಾಥ್, ಗೋಪಾಲ್, ಮಮತ, ಯುವ ಘಟಕದ ಅಧ್ಯಕ್ಷ ರಕ್ಷಿತ್, ಮಹಿಳಾ ಘಟಕದ ಮಂಜುಳ, ವೀರಶೈವ ಬ್ಯಾಂಕ್ ನ ರುದ್ರೇಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!