ಸಾದರ ಸಮಾಜ ಮುಖ್ಯ ವಾಹಿನಿಗೆ ಬರಲಿ: ಶಾಸಕ

35

Get real time updates directly on you device, subscribe now.


ತುಮಕೂರು: ಯಾವುದೇ ಸಮಾಜ ಮುಖ್ಯವಾಹಿನಿಗೆ ಬರಬೇಕೆಂದರೆ ಶಿಕ್ಷಣದ ಜೊತೆಗೆ ಒಗ್ಗಟ್ಟು ಮುಖ್ಯ, ಈ ನಿಟ್ಟಿನಲ್ಲಿ ಸಾದರ ಸಮಾಜ ಒಗ್ಗಟ್ಟಿನ ಪ್ರತೀಕವಾಗಿ ಎಲ್ಲಾ ರಂಗದಲ್ಲಿಯೂ ಮಹಿಳೆಯರು, ಪುರುಷರನ್ನು ಕಾಣಬಹುದಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಸ್ಪೂರ್ತಿ ವನಿತಾ ಮಂಡಳಿ, ತುಮಕೂರು, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಮಘ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಸಮಾರಂಭ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಾಜಿ ಮಂತ್ರಿ ದಿ.ಲಕ್ಷ್ಮಿನರಸಿಂಹಯ್ಯ 23ನೇ ವಾರ್ಷಿಕ ಸಂಸ್ಮರಣಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾಜಿ ಮಂತ್ರಿ ದಿವಂಗತ ಲಕ್ಷ್ಮೀನರಸಿಂಹಯ್ಯ ಅವರ ದೂರದೃಷ್ಟಿ ಯ ಫಲದಿಂದ ಪ್ರವರ್ಗ 2ಎ ನಲ್ಲಿರುವ ಹಿಂದೂ ಸಾದರ ಸಮುದಾಯ, ಸರಕಾರದ ಮೀಸಲಾತಿ ಬಳಸಿಕೊಂಡು ಎಲ್ಲಾ ರಂಗದಲ್ಲಿಯೂ ಉತ್ತುಂಗದತ್ತ ದಾಪುಗಾಲು ಇಟ್ಟಿದೆ, ಇದಕ್ಕೆ ಸಾಕ್ಷಿ ಇಂದಿನ ಕಾರ್ಯಕ್ರಮ ಎಂದರು.

ಒಂದು ಸಮುದಾಯದ ಅಭಿವೃದ್ಧಿಯಲ್ಲಿ ಅ ಸಮುದಾಯದ ಮಹಿಳೆಯರ ಪಾತ್ರವೂ ಬಹಳ ಮಹತ್ವದ ಪಾತ್ರ ವಹಿಸುತ್ತದೆ, ಇಂದಿನ ಕಾರ್ಯಕ್ರಮದಲ್ಲಿ ಸರಕಾರಿ, ಖಾಸಗಿ, ನಿಗಮ ಮಂಡಳಿಗಳಲ್ಲಿ ವೃತ್ತಿ ನಿರತ ಮಹಿಳೆಯರು, ಉದ್ಯಮಿಗಳಾಗಿರುವ ನೂರಾರು ಮಹಿಳೆಯರನ್ನು ಅಭಿನಂದಿಸಲಾಯಿತು, ಸಮುದಾಯದ ಮುಂದಿನ ಪೀಳಿಗೆಗೆ ಇವರೆಲ್ಲರೂ ಸ್ಪೂರ್ತಿಯಾಗಬೇಕು, ತಮ್ಮ ಜೊತೆಗೆ ಸಮುದಾಯದ ಇತರರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಆಗಬೇಕು, ಸ್ಪೂರ್ತಿ ವನಿತಾ ಬಳಗ ಹಾಗೂ ಸ್ವಾವಿವೇಕಾನಂದ ಟ್ರಸ್ಟ್ ಕ್ಯಾತ್ಸಂದ್ರ ಬಳಿ ನಿರ್ಮಾಣ ಮಾಡುತ್ತಿರುವ ಭವನಗಳಿಗೆ ತಲಾ 5 ಲಕ್ಷ ರೂ. ಗಳಂತೆ 10 ಲಕ್ಷರೂಗಳನ್ನು ಎಂ ಎಲ್ ಎಲ್ ನಿಧಿಯಿಂದ ನೀಡುವುದಾಗಿ ಶಾಸಕ ಜೋತಿಗಣೇಶ್ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ನ ಅಧ್ಯಕ್ಷ ಪಿ.ಮೂರ್ತಿ, ನಮ್ಮ ಸಮುದಾಯಕ್ಕೆ ಸೇರಿದ ಮಾಜಿ ಮಂತ್ರಿಗಳಾದ ದಿ.ಲಕ್ಷ್ಮಿನರಸಿಂಹಯ್ಯ ಅವರು ಕಳೆದ 40 ವರ್ಷಗಳ ಹಿಂದೆಯೇ ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದ ಪರಿಣಾಮ ಇಂದು ಸರಕಾರಿ, ಅರೆ ಸರಕಾರಿ ಹುದ್ದೆಗಳಲ್ಲಿ ನಮ್ಮ ಜನಾಂಗದ ಪುರುಷರು ಮತ್ತು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ, ಅಲ್ಲದೆ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿ ಗಳಾಗಿಯೂ ಕೆಲಸ ಮಾಡುತ್ತಿದ್ದಾರೆ, ಅಲ್ಲದೆ 800 ರೂ. ಗಳಿಗೆ ಬಟವಾಡಿ ಬಳಿ ಖರೀಸಿದ ಭೂಮಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿ ಅದರಿಂದ ಬಂದ ಆದಾಯವನ್ನು ಜನಾಂಗದ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿದರು, ಅಲ್ಲದೆ ಸ್ವಾಮಿ ವಿವೇಕಾನಂದ ಸಹಕಾರ ಬ್ಯಾಂಕ್, ಪರಮಹಂಸ ಸಹಕಾರ ಬ್ಯಾಂಕ್, ವಿವೇಕಾನಂದ ಸೇವಾ ಟ್ರಸ್ಟ್ನ ಸ್ಥಾಪನೆಯ ಹಿಂದೆ ದಿ.ಲಕ್ಷ್ಮಿನರಸಿಂಹಯ್ಯ ಅವರ ಪಾತ್ರವಿದೆ, ಹಾಗಾಗಿ ಅವರ ಸಂಸ್ಮರಣಾ ದಿನವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ, ಜಿಲ್ಲಾಡಳಿತ ಗುತ್ತಿಗೆಗೆ ನೀಡಿರುವ ಕ್ಯಾತ್ಸಂದ್ರ ಸಮೀಪದ ಭೂಮಿಯಲ್ಲಿ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಸಾದರ ಹೆಣ್ಣು ಮಕ್ಕಳು ನೇತೃತ್ವ ವಹಿಸಿ, ಸಾಧನೆ ಮಾಡಿರುವ ಸ್ವಸಹಾಯ ಸಂಘಗಳಿಗೆ ತಲಾ 10 ಸಾವಿರ ರೂ. ಬಹುಮಾನ ನೀಡಿ ಗೌರವಿಸಲಾಯಿತು, ಅಲ್ಲದೆ ಸರಕಾರಿ, ಅರೆ ಸರಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ನೂರಾರು ಮಹಿಳೆಯರನ್ನು ಸ್ಪೂರ್ತಿ ವಿನಿತಾ ಮಂಡಳಿ ಮತ್ತು ಸ್ವಾವಿ ವಿವೇಕಾನಂದ ಸೇವಾ ಟ್ರಸ್ಟ್ವತಿಯಿಂದ ಗೌರವಿಸಲಾಯಿತು.
ಹಿರಿಯ ಗುತ್ತಿಗೆದಾರ ಎ.ಡಿ.ಬಲರಾಮಯ್ಯ, ಸ್ಪೂರ್ತಿ ವನಿತಾ ಮಂಡಳಿ ಅಧ್ಯಕ್ಷೆ ಗಂಗಮ್ಮ ರಾಜಣ್ಣ, ಸ್ವಾಮಿ ವಿವೇಕಾನಂದ ಟ್ರಸ್ಟ್ನ ಗೌರವಾಧ್ಯಕ್ಷ ಬಿ.ಆರ್.ರಮೇಶ್, ಪದ್ಮಾ ಮುಖ್ಯಮಂತ್ರಿ ಚಂದ್ರು, ಸಿ.ರವಿಶಂಕರ್, ನಾಗಮಣಿ.ಎಂ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ.ಇ.ರವಿಕುಮಾರ್, ತುಮಕೂರು ಶಾಖೆ ಅಧ್ಯಕ್ಷ ಅಣ್ಣೇನಹಳ್ಳಿ ಶಿವಕುಮಾರ್, ಉದ್ಯಮಿಗಳಾದ ಟಿ.ಸಿ.ಸುರೇಶ್, ಜಿ.ತಿಮ್ಮಾರೆಡ್ಡಿ, ಡೆಲ್ಟಾ ರವಿ, ಎಸ್ ಟಿ ಡಿ ನಾಗರಾಜು, ಶ್ರೀಹರ್ಷ, ಪಿ.ನಾಗರಾಜು, ಸ್ಪೂರ್ತಿ ವಿನಿತಾ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!