ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ

63

Get real time updates directly on you device, subscribe now.


ತುಮಕೂರು: ಕಾಂಗ್ರೆಸ್ ಪಕ್ಷದ 138ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ನೇತೃತ್ವದಲ್ಲಿ ಕಾಂಗ್ರೆಸ್ 138ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ವೇಳೆ ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, 1885ರ ಡಿಸೆಂಬರ್ 28 ರಂದು ಬ್ರಿಟಿಷರಿಂದ ಸ್ವಾತಂತ್ರ ಪಡೆಯುವುದಕ್ಕಾಗಿ ಚಳವಳಿ ರೂಪದಲ್ಲಿ ಹುಟ್ಟಿಕೊಂಡ ಕಾಂಗ್ರೆಸ್ ಸಂಘಟನೆ, ಸ್ವಾತಂತ್ರ ನಂತರದಲ್ಲಿ ಒಂದು ಪಕ್ಷವಾಗಿ ಮುಂದುವರೆದಿದೆ, ಶಿಕ್ಷಣ, ಸಹಬಾಳ್ವೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ತಾನು ನಂಬಿದ ಸಿದ್ಧಾಂತ ಮತ್ತು ತಾನು ಹಾಕಿಕೊಂಡಿರುವ ಗುರಿಯತ್ತ ಸಾಗಲು ಕಾರ್ಯ ನಿರ್ವ ಹಿಸುತ್ತಿರುವ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೊದಲು ಕಾಂಗ್ರೆಸ್ ಪಕ್ಷದವರು ಅರ್ಥ ಮಾಡಿಕೊಂಡು ಅದರಂತೆ ನಡೆಯಬೇಕಿದೆ, ಹೊಂದಾಣಿಕೆ ರಾಜಕಾರಣ ಬಿಡದ ಹೊರತು ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ, ಹಾಗಾಗಿ ನನ್ನನ್ನೂ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬದ್ದವಾಗಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ, ಮುಂಬುರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೊಲೀಸಬೇಕೆಂದರೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ದೇಶದ ಜನರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡುವ ಸಲುವಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷಕ್ಕೂ, ದೇಶದ ಅಲ್ಪಸಂಖ್ಯಾತರು, ಬಡವರು, ದೀನ ದಲಿತರನ್ನು ಅಧಿಕಾರದಿಂದ ದೂರ ಇಡಬೇಕೆಂಬ ಮನಸ್ಥಿತಿಯ ಬಿಜೆಪಿ ಪಕ್ಷಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ದಲಿತರು, ದಮನಿತರ ಹಕ್ಕುಗಳನ್ನು ಮೋದಿ ಸರಕಾರ ಕಸಿಯುತ್ತಿದೆ, ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾಡಿರುವ ಕೋವಿಡ್ ಸಂದರ್ಭದ 40 ಸಾವಿರ ಕೋಟಿ ಅವ್ಯವಹಾರ ತನಿಖೆಯಾಗಿ ರಾಜ್ಯದ ಜನತೆಗೆ ಸತ್ಯ ಬಹಿರಂಗವಾಗಲಿ ಎಂದರು.

ಕೆಕಪಿಸಿ ವಕ್ತಾರ ನಿಕೇತ್ ರಾಜ್ ಮಾರ್ಯ ಮಾತನಾಡಿ, ಸ್ವಾತಂತ್ರಕ್ಕೂ ಮುನ್ನ 526 ಸಣ್ಣ ಸಂಸ್ಥಾನಗಳಾಗಿದ್ದ ಭಾರತವನ್ನು ಒಗ್ಗೂಡಿಸಿ ಇಲ್ಲಿನ ಜನರನ್ನು ದಾಸ್ಯದಿಂದ ಮುಕ್ತಗೊಳಿಸುವ ಘನ ಉದ್ದೇಶದಿಂದ 27 ಜನ ವಿದ್ವಾಂಸರು ಸೇರಿ ಹುಟ್ಟು ಹಾಕಿದ ಸಂಘಟನೆ ಕಾಂಗ್ರೆಸ್, ಬಿಜೆಪಿಯವರು ಹೇಳುವಂತೆ ಎ.ಓ.ಹೂಮ್ ಅವರು ಕಾಂಗ್ರೆಸ್ ಪಕ್ಷದ ಸಂಸ್ಥಾಪಕರಲ್ಲ, ಮೊದಲ ಅಧ್ಯಕ್ಷರಷ್ಟೇ, ಇದು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿಯ ಭಕ್ತರ ತೋಳಿನ ಮೇಲಿರುವ ಚುಚ್ಚು ಮದ್ದಿನ ಗುರುತೇ ಹೇಳುತ್ತದೆ, ನೀವು ಮಾರಕ ಕಾಲರ, ಪ್ಲೇಗ್, ದಡಾರದಂತಹ ರೋಗಗಳಿಗೆ ತುತ್ತಾಗಿ ಅಸುನೀಗದಂತೆ ಕಾಪಾಡಿದ್ದೇ ಕಾಂಗ್ರೆಸ್ ಎಂಬುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಗಿ ಹೇಳಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ, ಎಐಸಿಸಿ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ, ಇದಕ್ಕೆ ಪ್ರಮುಖ ಕಾರಣ ಎಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದು ಧರ್ಮದಲ್ಲಿನ ಅನಿಷ್ಠಗಳಿಂದ ಬೇಸತ್ತು ಬೌದ್ಧ ಧರ್ಮ ಸ್ವೀಕರಿಸಿದ್ದು ನಾಗಪುರದಲ್ಲಿ, ಹಾಗೆಯೇ ಇಂದಿನ ಅನಿಷ್ಠಗಳಿಗೆ ಕಾರಣವಾಗಿರುವ ಆರ್ ಎಸ್ ಎಸ್ ಕಚೇರಿ ಇರುವುದು ನಾಗಪುರದಲ್ಲಿ, ಧರ್ಮ, ಜಾತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಬಿಜೆಪಿಯನ್ನು ತೊಲಗಿಸುವ ಕೆಲಸ ಆರಂಭವಾಗಿದೆ, ಇದೇ ಒಗ್ಗಟ್ಟನ್ನು ನಾವು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಂಡು ಹೊಗುವ ಮೂಲಕ ಪಕ್ಷ ಬಲಗೊಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಷಫಿ ಅಹಮದ್, ಮುರುಳೀಧರ ಹಾಲಪ್ಪ, ಅಸ್ಲಾಂಪಾಷ, ಆರ್.ರಾಮಕೃಷ್ಣ, ಪಂಚಾರಕ್ಷಯ್ಯ, ನಾಗಮಣಿ, ಸಿದ್ದಲಿಂಗೇಗೌಡ, ವಾಲೆಚಂದ್ರಯ್ಯ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸೈಯದ್ ಫಯಾಜ್, ನರಸಿಂಹ ಮೂರ್ತಿ, ಗಿರೀಶ್, ರಂಗಶಾಮಯ್ಯ, ನಾಗರಾಜು, ಶ್ರೀನಿವಾಸ್, ಕೆಂಪಣ್ಣ, ಶಿವಾಜಿ, ಗುರುಪ್ರಸಾದ್, ಸಂಜೀವ ಸುಂದರ್ ಕುಮಾರ್, ಮೆಹಬೂಬ್ ಪಾಷ, ಸುಜಾತ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!