ಸಮಾಜಕ್ಕೆ ವೇಮನರ ಕೊಡುಗೆ ಅಪಾರ

ವೇಮನ ಜಯಂತಿಯಲ್ಲಿ ಮಹಾಯೋಗಿ ಕೊಡುಗೆ ಸ್ಮರಿಸಿದ ಕೆ.ಎನ್.ರಾಜಣ್ಣ

44

Get real time updates directly on you device, subscribe now.


ತುಮಕೂರು: ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರನ್ನು ಸದಾ ಸ್ಮರಿಸಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ, ತಂದೆ ತಾಯಿ ಜನ್ಮ ಕೊಟ್ಟರೆ ಸಮಾಜ ಜೀವನ ರೂಪಿಸುತ್ತದೆ, ಅಂತಹ ಆದರ್ಶ ಸಮಾಜ ನಿರ್ಮಾಣ ಮಾಡಿ ಮುಂದಿನ ಪೀಳಿಗೆಯ ಬೆಳವಣಿಗೆಗೆ ಸಹಕಾರ ನೀಡುವುದು ಹಿರಿಯರ ಕರ್ತವ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರೆಡ್ಡಿ ಜನಸಂಘದ ಆಶ್ರಯದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೆಡ್ಡಿ ಜನಾಂಗದವರು ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಬಾಲಕರ, ಬಾಲಕಿಯರ ಹಾಸ್ಟೆಲ್ ಗೆ ತಲಾ ಎರಡು ಲಕ್ಷದಂತೆ ನಾಲ್ಕು ಲಕ್ಷ ರೂ. ವೈಯಕ್ತಿಕ ನೆರವು ನೀಡುವುದಾಗಿ ಹೇಳಿದರು.

ಎರಡು ಕೋಟಿ ರೂಪಾಯಿ ಅನುದಾನ ನೀಡಲು ರೆಡ್ಡಿ ಜನ ಸಂಘದವರು ಸರ್ಕಾರಕ್ಕೆ ಮನವಿ ಮಾಡಿದ್ದು ಆ ಹಣ ಕೊಡಿಸಲು ಪ್ರಯತ್ನ ಮಾಡಿ ಮುಂದಿನ ವೇಮನ ಜಯಂತಿ ವೇಳೆಗೆ ಎರಡೂ ಹಾಸ್ಟೆಲ್ ಗಳ ಉದ್ಘಾಟನೆಯಾಗಲು ಪ್ರಯತ್ನಿಸಿ ಎಂದು ತಿಳಿಸಿದರು.
ವಿದ್ಯಾದಾನ ಎಲ್ಲಾ ದಾನಗಳಿಗಿಂಥಾ ಶ್ರೇಷ್ಠ, ಉನ್ನತ ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ಬರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿದರೆ ಅವರು ಉನ್ನತ ಸ್ಥಾನಮಾನ ಗಳಿಸಿ ಮುಂದೆ ಇದೇ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುತ್ತಾರೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಆದರ್ಶ ಸಮಾಜಕ್ಕಾಗಿ ಕವಿ, ದಾರ್ಶನಿಕ ವೇಮನರು ನೀಡಿದ ಕೊಡುಗೆ ಅಪಾರ, ಕನ್ನಡದ ಸರ್ವಜ್ಞ ಕವಿಯಂತೆ ತೆಲುಗಿನಲ್ಲಿ ಸಾಹಿತ್ಯ ರಚಿಸಿ ಸಮಾಜ ಪರಿವರ್ತನೆಗೆ ಕಾಣಿಕೆ ನೀಡಿದ್ದಾರೆ, 14ನೇ ಶತಮಾನದಲ್ಲಿ ಜನಿಸಿದ ವೇಮನರು ಆಧ್ಯಾತ್ಮಿಕ ಸಾಧಕರಾಗಿ, ಸಮಾಜ ಸುಧಾರಕರಾಗಿ ಎಂದೆಂದಿಗೂ ಪ್ರಸ್ತುತರಾಗಿದ್ದಾರೆ, ಸಪ್ತ ಋಷಿಗಳಿಗೆ ನೀಡುವಷ್ಟೇ ಪೂಜ್ಯ ಸ್ಥಾನಮಾನ ಹೊಂದಿರುವ ವೇಮನರು ಈ ಸಮಾಜಕ್ಕೆ ಸಾವಿರಾರು ವರ್ಷಗಳಿಗೆ ಬೇಕಾಗುವಂತಹ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ನಮಗೆ ಲಕ್ಷ್ಮಿ, ಸರಸ್ವತಿ ಸಮಾನರಾಗಬೇಕು, ಮಕ್ಕಳು ಮೊದಲು ವಿದ್ಯಾವಂತರಾಗಲಿ, ನಂತರ ಶ್ರೀಮಂತರಾಗಲಿ, ವಿದ್ಯೆ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸಿ ಅವರ ಬದುಕು ಉಜ್ವಲಗೊಳಿಸಲು ಹಿರಿಯರು ಕಾಳಜಿ ವಹಿಸಬೇಕು ಎಂದು ಹೇಳಿದರು.

ತುಮಕೂರು ವಿವಿ ಪ್ರಾಧ್ಯಾಪಕ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಉಪನ್ಯಾಸ ನೀಡಿ, ಇಂದು ಮೌಲ್ಯಾಧಾರಿತ ಸಮಾಜ ಕಾಣುತ್ತಿಲ್ಲ, ಆದರ್ಶ ವ್ಯಕ್ತಿಗಳ ಕೊರತೆ ಇದೆ, ನಮ್ಮ ಮಕ್ಕಳು ಯಾರನ್ನು ಆದರ್ಶರೆಂದು ಸ್ವೀಕರಿಸಬೇಕು ಎಂದು ಕಾಣದಂತಾಗಿದೆ, ಆದರೆ ಈ ಹಿಂದೆ ಸಮಾಜಕ್ಕೆ ಮೌಲ್ಯಗಳನ್ನು ಬಿತ್ತಿಹೋದ ಮಹನೀಯರ ಆದರ್ಶ ಪಾಲನೆ ಮಾಡಬೇಕು, ಮಕ್ಕಳಿಗೆ ಅಂತಹವರ ತತ್ವ ಸಿದ್ಧಾಂತವನ್ನು ಹಿರಿಯರು ತಿಳಿಸಿ ಹೇಳಬೇಕು ಎಂದರು.
ಭ್ರಷ್ಟಾಚಾರ ಹೆಚ್ಚುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣ ಜಾಸ್ತಿಯಾಗುತ್ತಿವೆ, ಶಿಕ್ಷಣ ಸಂಸ್ಥೆಗಳು ನಿರುದ್ಯೋಗಿಗಳನ್ನು ಸೃಷ್ಟಿಸುವ ಕೇಂದ್ರಗಳಾಗುತ್ತಿವೆ, ಹಕ್ಕುಗಳನ್ನು ಮಾತ್ರ ಬಯಸಿ ಕರ್ತವ್ಯ ನಿರ್ಲಕ್ಷಿಸುವ ಪ್ರಜಾ ವ್ಯವಸ್ಥೆ ಬೆಳೆಯುತ್ತಿದೆ, ಇಂತಹ ಸಾಮಾಜಿಕ ವಾತಾವರಣದಲ್ಲಿ ಮಕ್ಕಳ ಭವಿಷ್ಯ ರೂಪಿಸುವುದು ಸವಾಲಿನ ಕೆಲಸವಾಗಿದೆ ಎಂದರು.

ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ ಮಾತನಾಡಿ, ನಗರದಲ್ಲಿ ಸುಸಜ್ಜಿತ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್ ಪೂರ್ಣಗೊಳಿಸಲು ಹಣದ ಕೊರತೆ ಇದೆ, ಎರಡು ಕೋಟಿ ರೂಪಾಯಿ ಅನುದಾನ ನೀಡಲು ಸರ್ಕಾರವನ್ನು ಕೋರಲಾಗಿದೆ, ಸಚಿವ ಕೆ.ಎನ್.ರಾಜಣ್ಣನವರು ಹಣ ಬಿಡುಗಡೆಗೆ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿ ಶಕ್ತಿ ಇರುವವರು ಸಹಕಾರ ನೀಡುವಂತೆ ಕೋರಿದರು.
ಈ ವೇಳೆ ರೆಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ತಹಶೀಲ್ದಾರ್ ಸಿದ್ದೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ರೆಡ್ಡಿ ಜನಸಂಘದ ಕಾರ್ಯದರ್ಶಿ ಬಿ.ಆರ್.ಮಧು, ಜಂಟಿ ಕಾರ್ಯದರ್ಶಿ ಕೆ.ಜೆ.ರಾಜಗೋಪಾಲ ರೆಡ್ಡಿ, ಖಜಾಂಚಿ ಎಂ.ಎ.ಶಿವಾರೆಡ್ಡಿ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!