ಗಿನ್ನಿಸ್ ದಾಖಲೆ ನಿರ್ಮಿಸಲು ತುಮಕೂರು ನಗರ ಸಿದ್ಧ

1 ಲಕ್ಷಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿ ಬಳಸಿ ದಾಖಲೆ ನಿರ್ಮಿಸಲು ಸನ್ನದ್ದ

26

Get real time updates directly on you device, subscribe now.


ತುಮಕೂರು: ಏಕಬಳಕೆ ಪ್ಲಾಸ್ಟಿಕ್ ಬಾಟಲ್ ಗಳನ್ನು ಉಪಯೋಗಿಸಿ ಗಿನ್ನಿಸ್ ದಾಖಲೆಯ ಪುಟ ಸೇರಲು ತುಮಕೂರು ನಗರ ಸಿದ್ಧವಾಗಿದೆ ಎಂದು ಮಹಾ ನಗರ ಪಾಲಿಕೆ ಆಯುಕ್ತ ಅಶ್ವಿಜ.ಬಿ.ವಿ. ತಿಳಿಸಿದರು.
ನಗರದ ಸ್ಮಾರ್ಟ್ ಸಿಟಿ ಕಚೇರಿಯ ಕಮ್ಯಾಂಡಿಂಗ್ ಸೆಂಟರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾ ನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜನವರಿ 28 ರಂದು ಮಧ್ಯಾಹ್ನ 3 ಗಂಟೆಗೆ 1 ಲಕ್ಷಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ತುಮಕೂರು ಎಂಬ ಕನ್ನಡ ಪದದ ಕಲಾಕೃತಿ ನಿರ್ಮಿಸುವ ಮೂಲಕ ತುಮಕೂರು ನಗರವನ್ನು ವಿಶ್ವ ಗಿನ್ನಿಸ್ ದಾಖಲೆಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ, ಕಳೆದ 20 ದಿನಗಳಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳ ಮನೆ, ಹೋಟೆಲ್, ರೆಸ್ಟೋರೆಂಟ್, ಫುಡ್ ಸ್ಟ್ರೀಟ್, ಕನ್ವೆನ್ಷನ್ ಹಾಲ್ ಗಳಿಂದ ಸಂಗ್ರಹಿಸಲಾದ ಏಕಬಳಕೆ ಬಾಟಲಿಗಳನ್ನು ಕಲಾಕೃತಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ 14500 ಪ್ಲಾಸ್ಟಿಕ್ ಬಾಟಲಿ ಬಳಸಿ ಖತಾರ್ ದೇಶದಲ್ಲಿ ಖತಾರ್ ಎಂಬ ಆಂಗ್ಲ ಪದದ ಕಲಾಕೃತಿ ನಿರ್ಮಿಸಿ ಗಿನ್ನಿಸ್ ದಾಖಲೆಯಾಗಿತ್ತು, ಈ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಲು ತುಮಕೂರು ನಗರ ಸಿದ್ಧವಾಗಿದೆ ಎಂದರು.

ಬಾಟಲಿಗಳನ್ನು ಅರ್ಧ ಲೀಟರ್, 1 ಲೀಟರ್, 2 ಲೀಟರ್ ಪ್ರತ್ಯೇಕಿಸಿ ಸುಮಾರು 5 ಗಂಟೆಯಿಂದ 8 ಗಂಟೆಯೊಳಗೆ ಕಲಾಕೃತಿ ನಿರ್ಮಿಸುವ ಪ್ರಯತ್ನ ಮಾಡಲಾಗುವುದು, ಈ ಕಲಾಕೃತಿ ನಿರ್ಮಾಣಕ್ಕೆ ಸಮಯದ ಮಿತಿಯನ್ನು ನಿಗದಿಗೊಳಿಸಿಲ್ಲ ಎಂದು ತಿಳಿಸಿದರಲ್ಲದೆ ಗಿನ್ನಿಸ್ ದಾಖಲೆಯನ್ನು ಲಂಡನ್ ನಿಂದ ಆಗಮಿಸಲಿರುವ ತೀರ್ಪುಗಾರರ ಸಮಕ್ಷಮದಲ್ಲಿ ಒಂದೇ ದಿನದಲ್ಲಿ ನಿರ್ಮಿಸಲಾಗುವುದೆಂದರು.
ಕಲಾಕೃತಿಯನ್ನು ಪಾಲಿಕೆ ಪೌರ ಕಾರ್ಮಿಕರು ನಿರ್ಮಿಸಲಿದ್ದಾರೆ, ಇದಕ್ಕಾಗಿ ಜನವರಿ 26 ಹಾಗೂ 27 ರಂದು ಪೌರ ಕಾರ್ಮಿಕರಿಗೆ ಪೂರ್ವ ತಾಲೀಮು ನಡೆಸಲಾಗುವುದು, ಕಲಾಕೃತಿಯನ್ನು 15=75 ಮೀಟರ್ ಅಳತೆಯಲ್ಲಿ ನಿರ್ಮಿಸಲಾಗುತ್ತಿದ್ದು, ಕಲಾಕೃತಿ ನಿರ್ಮಾಣದಲ್ಲಿ ಮಣ್ಣು, ನೀರು ಬಳಸದೆ ಕೇವಲ ಗಮ್ ಮತ್ತು ಟೇಪ್ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾ ಸ್ವಾಮೀಜಿ, ಪಾಲಿಕೆ ಮೇಯರ್ ಪ್ರಭಾವತಿ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರಲ್ಲದೆ ಭಾಗವಹಿಸಲಿಚ್ಛಿಸುವ ಸಾರ್ವಜನಿಕರು ಕಾಲ್ ಸೆಂಟರ್ ಸಂಖ್ಯೆ 0816- 2213400ಗೆ ಕರೆ ಮಾಡುವ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು, ಹೆಸರು ನೋಂದಾಯಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!