ವಿದ್ಯಾವಂತರಲ್ಲಿ ಮಾನವೀಯ ಮೌಲ್ಯ ಕಡಿಮೆ

37

Get real time updates directly on you device, subscribe now.


ತುಮಕೂರು: ಬಡವರು, ಅಶಕ್ತರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಸಹಾಯ ಹಾಗೂ ಕಾನೂನಾತ್ಮಕ ಸಮಸ್ಯೆ ಗಳಿಗೆ ಪರಿಹಾರ ಒದಗಿಸುವ ಘನ ಉದ್ದೇಶ ಹೊಂದಿರುವ ಸದ್ಭಾವನಾ ಫೌಂಡೇಶನ್ ತುಮಕೂರು ತನ್ನ ಕಾರ್ಯದಲ್ಲಿ ಯಶಸ್ವಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ತಿಳಿಸಿದರು.
ತುಮಕೂರಿನ ಶ್ರೀನಗರದ ಸಿದ್ದಗಂಗಾ ಮಠ ರಸ್ತೆಯ 12ನೇ ಕ್ರಾಸ್ ನಲ್ಲಿ ಸದ್ಭಾವನಾ ಫೌಂಡೇಶನ್ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸದ್ಭಾವನಾ ಫೌಂಡೇಶ್ ನಲ್ಲಿ ಇರುವ ಬಹುತೇಕರು ಕಾನೂನು ಪದವೀಧರರಾಗಿದ್ದು, ಸಮಾಜದ ಆಗು ಹೋಗುಗಳನ್ನು ತಿಳಿದಿದ್ದು, ಸಮಾಜದಲ್ಲಿರುವ ಬಡವರಿಗೆ ಧ್ವನಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾವಂತರಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಕಾನೂನು ವಿದ್ಯಾರ್ಥಿಗಳು ಸೇರಿಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದಾರೆ, ಅವರ ಸಂಘದ ಆಶಯಗಳು ಉತ್ತಮವಾಗಿದ್ದು ಅವರ ವೃತ್ತಿಗೂ, ಪ್ರವೃತ್ತಿಗೂ ಪೂರಕವಾಗಿವೆ, ಎಲ್ಲರೂ ಸಹ ಸಮಾಜ ದೊಂದಿಗೆ ಬೇರೆತು ಕೆಲಸ ಮಾಡುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸುಲಭವಾಗುತ್ತದೆ, ಎಲ್ಲರೂ ಇದಕ್ಕೆ ಸಹಕಾರ ನೀಡಬೇಕೆಂದು ನ್ಯಾ.ನೂರುನ್ನಿಸಾ ತಿಳಿಸಿದರು.
ಉದ್ಘಾಟನೆಗೊಂಡಿರುವ ಸದ್ಭಾವನಾ ಫೌಂಡೇಶನ್ ನಲ್ಲಿರುವ ಸದಸ್ಯರೆಲ್ಲರೂ ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ಕಲಿತವರಾಗಿದ್ದಾರೆ, ಕಳೆದ ಒಂದುವರೆ ವರ್ಷದಲ್ಲಿ ಎಂ.ಕೃಷ್ಣ ಕಾನೂನು ಕಾಲೇಜಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಹಲವಾರು ಮಾನವೀಯ, ವ್ಯಕ್ತಿತ್ವ ವಿಕಸನ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದನ್ನು ಕಾಣುತ್ತಿದ್ದೇನೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಹಾಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದ್ಭಾವನಾ ಫೌಂಡೇಶನ್ ಜೊತೆಗೆ ಇರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನೆಟ್ ವಿಮಲ ವಹಿಸಿದ್ದರು. ಆರ್ ಡಿ ಪಿ ಆರ್ ಇಲಾಖೆಯ ಎಇಇ ಹೆಚ್.ಆರ್.ರಮೇಶ್, ಹಿರಿಯ ನ್ಯಾಯಾಧೀಶರಾದ ಲುಂಕಪ್ಪ, ಲೆಕ್ಕ ತನಿಖ ವರ್ತುಲ ಜಂಟಿ ನಿರ್ದೇಶಕ ಚಂದ್ರಶೇಖರ್, ಸದ್ಭಾವನಾ ಫೌಂಡೇಶನ್ ಗೌರವಾಧ್ಯಕ್ಷ ಪರಮೇಶ್.ಹೆಚ್.ವಿ, ಅಧ್ಯಕ್ಷ ಸೋಮಶೇಖರ ಅಲ್ಯಾಳ, ಉಪಾಧ್ಯಕ್ಷ ಮುರುಳೀಧರ.ಜೆ, ಕಾರ್ಯದರ್ಶಿ ಮುರುಳಿ.ಎಸ್, ಖಜಾಂಚಿ ನಾಗರಾಜು.ಹೆಚ್.ಜಿ, ನಿರ್ದೇಶಕರಾದ ಮಂಜುನಾಥ್.ಎಂ, ದಯಾನಂದ ಸಾಗರ್, ನಿತಿನ್.ಜಿ.ಎನ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!