ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣಾರ್ಥ ನಗರದ 26ನೇ ವಾರ್ಡ್ನ ನಾಗರಿಕ ಸಮಿತಿಗಳ ಒಕ್ಕೂಟ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆಂಪಣ್ಣ ಅಂಗಡಿ ವೃತ್ತದಲ್ಲಿ ಎಸ್ ಐಟಿ ಮುಖ್ಯರಸ್ತೆಗೆ ನಿರ್ಮಿಸಲಾಗಿರುವ ಡಾ.ಶಿವಕುಮಾರ ಮಹಾ ಸ್ವಾಮೀಜಿ ಸ್ವಾಗತ ಕಮಾನನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಪರಮ ಪೂಜ್ಯರಿಗೆ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿ ಸಮರ್ಪಣೆ, ಸ್ಮರಣೆ ಮಾಡುತ್ತಿದ್ದಾರೆ, ಇಲ್ಲಿನ ನಾಗರಿಕರು ಪೂಜ್ಯರನ್ನು ನಿರಂತರ ಸ್ಮರಿಸುವ ಕಾರಣಕ್ಕಾಗಿ ಅವರ ಹೆಸರಿನ ಸ್ವಾಗತ ಕಮಾನು ನಿರ್ಮಾಣ ಮಾಡಿದ್ದಾರೆ, ಅವರ ಸೇವೆ ಸ್ಮರಣೀಯವಾಗಿಸುವ ಕಾರ್ಯ ಮಾಡಿದ್ದಾರೆ ಎಂದು ಆಶಿಸಿದರು.
ಸ್ವಾಗತ ಕಮಾನಿನ ಕೆಳಗೆ ಹಾದು ಹೋಗುವವರಿಗೆ ಪೂಜ್ಯರ ಆಶೀರ್ವಾದ ದೊರೆಯಲಿ, ಯಾವುದೇ ಅಪಘಾತವಾಗದಂತೆ ಸುರಕ್ಷಿತ ಸಂಚಾರಕ್ಕೆ ಪೂಜ್ಯರ ಅನುಗ್ರಹವಿರಲಿ, ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿರಿ, ನಿಯಮ ಪಾಲನೆ ಬಗ್ಗೆ ನಿಮ್ಮ ಮಕ್ಕಳಿಗೂ ತಿಳವಳಿಕೆ ನೀಡುವಂತೆ ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ತ್ರಿವಿಧ ದಾಸೋಹಗಳ ಮೂಲಕ ತುಮಕೂರಿನ ಹೆಸರು ಪ್ರಪಂಚಕ್ಕೆ ಪರಿಚಯವಾಗಲು ಕಾರಣರಾದ ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆ, ಕೊಡುಗೆ ಜಗತ್ತಿಗೆ ಮಾದರಿಯಾದದು, ತುಮಕೂರು ಜನ ಅವರನ್ನು ಸದಾ ಸ್ಮರಿಸಬೇಕು ಎನ್ನುವ ಕಾರಣಕ್ಕೆ ಅವರ ಹೆಸರಿನಲ್ಲಿ ಭಕ್ತರು ಇಂತಹ ಕಾರ್ಯ ಮಾಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ ಎಂದು ಶ್ಲಾಸಿದರು.
26ನೇ ವಾರ್ಡ್ನ ನಗರ ಪಾಲಿಕೆ ಸದಸ್ಯ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಸರೆ ನೀಡಿ ನೆರವಾದ ಡಾ.ಶಿವಕುಮಾರ ಸ್ವಾಮೀಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ, ಅವರ ಆಶೀರ್ವಾದ ಸದಾ ನಮ್ಮ ಮೇಲಿರಬೇಕು ಎನ್ನುವ ಕಾರಣಕ್ಕೆ ಅವರ ಹೆಸರಿನ ಸ್ವಾಗತ ಕಮಾನು ನಿರ್ಮಾಣ ಮಾಡಲಾಗಿದೆ, ಇದರೊಂದಿಗೆ ಅವರನ್ನು ದಿನನಿತ್ಯ ಸ್ಮರಿಸಿ ಅವರ ಕೃಪೆ ಎಲ್ಲರಿಗೂ ದೊರೆಯಲಿ ಎಂದು ಹೇಳಿದರು.
ಇದೇ ವೇಳೆ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಯಿಂದ ಖಾಲಿ ಪ್ಲಾಸ್ಟಿಕ್ ಬಾಟೆಲ್ ಸಂಗ್ರಹಿಸುವ ಬೂತ್ ನ್ನು ಈ ಭಾಗದಲ್ಲಿ ಉದ್ಘಾಟಿಸಲಾಯಿತು.
ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಅವರು ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಡಾ.ಶಿವಕುಮಾರ ಸ್ವಾಮೀಜಿ ಹೆಸರಿನ ಸುಂದರ ಸ್ವಾಗತ ಕಮಾನು ನಿರ್ಮಾಣಕ್ಕೆ ಸಹಕಾರ ನೀಡಿ ನೆರವಾದ 26ನೇ ವಾರ್ಡ್ನ ನಾಗರಿಕ ಸಮಿತಿಗಳ ಅಧ್ಯಕ್ಷರು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
Comments are closed.