ಗುಬ್ಬಿ: ಪ್ರತಿಯೊಬ್ಬ ಭಾರತೀಯನೂ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕು ಮತ್ತು ಕರ್ತವ್ಯಗಳ ಮಹತ್ವದ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು.
ಗುಬ್ಬಿ ಪಟ್ಟಣ ಪಂಚಾಯತಿ ಬಳಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಸಂವಿಧಾನ ರಚನೆಯಾಗಿ 75 ವರ್ಷಗಳ ಸಂದಿರುವ ಸವಿ ನೆನಪಿಗಾಗಿ ರಾಜ್ಯಾದ್ಯಂತ ಈ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಪ್ರತಿಯೊಬ್ಬರಿಗೂ ಸಂವಿಧಾನದ ಆಶಯಗಳ ಬಗ್ಗೆ ತಿಳುವಳಿಕೆ ನೀಡಲು ಹಮ್ಮಿಕೊಂಡಿರುವ ಈ ಜಾಥಾ ಉತ್ತಮ ಕಾರ್ಯಕ್ರಮವಾಗಿದೆ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಈ ಸ್ತಬ್ಧಚಿತ್ರ ವಾಹನ ಸಂಚರಿಸಿ ಸಂವಿಧಾನದ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಯತೀಶ್ ಕುಮಾರ್ ಸಂವಿಧಾನ ಪೀಠಿಕೆ ಬೋಧಿಸಿದರು, ಪಟ್ಟಣದ ಮಹಿಳೆಯರು ಸಂವಿಧಾನ ಜಾಗೃತಿ ಜಾಥ ಸ್ತಬ್ಧಚಿತ್ರ ವಾಹನವನ್ನು ಪೂರ್ಣ ಕುಂಭದಿಂದ ಬರಮಾಡಿಕೊಂಡು ಮುಂದಿನ ಗ್ರಾಮ ಪಂಚಾಯತಿಗೆ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಆರತಿ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ವಿ.ಪರಮೇಶ್ ಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುಳಾದೇವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ.ಬಿ.ಎಸ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ದಲಿತ ಮುಖಂಡರು, ವಿದ್ಯಾರ್ಥಿಗಳು, ಮಾಜಿ ಸೈನಿಕರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಗುಬ್ಬಿ ಪಟ್ಟಣದ ಶ್ರೀಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವೀರಗಾಸೆ ಕುಣಿತ, ಸನಾದಿ ವಾದ್ಯ, ತಮಟೆ ವಾದ್ಯ, ಚೌಡಿಕೆ ವಾದ್ಯ, ಹರೆ ವಾದ್ಯ, ಕಹಳೆ ವಾದನ, ಡೊಳ್ಳು ಕುಣಿತ, ಸೈಕಲ್ ಜಾಥಾ, ವಿದ್ಯಾರ್ಥಿಗಳಿಂದ ವಿವಿಧ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಂತರ ಜಿ.ಹೊಸಹಳ್ಳಿ, ಕುನ್ನಾಲ, ಎಸ್.ಕೊಡಿಗೇಹಳ್ಳಿ, ಚೆಂಗಾವಿ, ಮಾವಿನಹಳ್ಳಿ, ಇಡಗೂರು ಗ್ರಾಮ ಪಂಚಾಯತಿಗೆ ತೆರಳಿದ ಸ್ತಬ್ಧಚಿತ್ರ ವಾಹನದ ಮೂಲಕ ಸಂವಿಧಾನದ ಪರಿಕಲ್ಪನೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Comments are closed.