ಶಿರಾ: ತುಮಕೂರು ಜಿಲ್ಲೆಯಲ್ಲಿ ಆಗಿಂದ್ದಾಗ್ಗೆ ಮೌಢ್ಯಾಚರಣೆ ಬೆಳಕಿಗೆ ಬರುತ್ತಲೇ ಇವೆ, ತುಮಕೂರು ತಾಲ್ಲೂಕು, ಗುಬ್ಬಿ ತಾಲ್ಲೂಕಿನ ಗೊಲ್ಲರ ಹಟ್ಟಿಗಳಲ್ಲಿ ಬಾಣಂತಿ, ಮಗುವನ್ನು ಗುಡಿಸಲಿನಲ್ಲಿ ಇಡುವ ಮೂಲಕ ಮೂಢ ನಂಬಿಕೆ ಮುಂದುವರೆಸಿದ್ದರು, ಸ್ಥಳೀಯ ಆಡಳಿತ, ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ಕುಟುಂಬಸ್ಥರಿಗೆ ಎಚ್ಚರಿಕೆಯ ಜಾಗೃತಿ ಮೂಡಿಸಿದ್ದರು, ಈ ಘಟನೆ ಮಾಸುವ ಮುನ್ನವೇ ಇದೀಗ ಶಿರಾ ತಾಲ್ಲೂಕಿನಲ್ಲಿ ಮೌಢ್ಯಾಚರಣೆ ಬೆಳಕಿಗೆ ಬಂದಿದೆ.
ಸಂಪ್ರದಾಯದ ಹೆಸರಿನಲ್ಲಿ ಮನೆಯಿಂದ ಹೊರಗಡೆ ಗುಡಿಸಿಲಿನಲ್ಲಿ ಇಟ್ಟಿದ್ದ ಬಾಣಂತಿಯನ್ನು ಮತ್ತೆ ಮನೆಗೆ ಸೇರಿಸುವಲ್ಲಿ ನ್ಯಾಯಾಧೀಶರಾದ ಗೀತಾಂಜಲಿ ಅವರು ಯಶಸ್ವಿಯಾಗಿರುವ ಘಟನೆ ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕುಂಟನಹಟ್ಟಿ ಗೊಲ್ಲರ ಹಟ್ಟಿಯಲ್ಲಿ ಶನಿವಾರ ಜರುಗಿದೆ.
ಗೊಲ್ಲರಹಟ್ಟಿಯ 25 ವರ್ಷದ ಬಾಲಮ್ಮ ಎಂಬ ಒಂದು ತಿಂಗಳ ಬಾಣಂತಿಯನ್ನು ಆಕೆಯ ಮನೆಯವರು ಸಂಪ್ರದಾಯದ ಹೆಸರಿನಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಗುಡಿಸಿಲಿನಲ್ಲಿ ಇರಿಸಿ ಪೋಷಿಸುತ್ತಿದ್ದರು, ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಾಧೀಶೆ ಗ್ರಾಮಸ್ಥರ ಸಮ್ಮುಖದಲ್ಲಿ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಭಾರತೀಯ ದಂಡ ಸಂಹಿತೆ ಅನ್ವಯ ಯಾವುದೇ ರೀತಿಯ ಅಸ್ಪಶ್ಯತೆ ಶಿಕ್ಷಾರ್ಹ ಅಪರಾಧವಾಗಿದೆ, ಒಂದರಿಂದ ಏಳು ವರ್ಷದ ವರೆಗೆ ಜೈಲು ಶಿಕ್ಷೆ, ಐವತ್ತು ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, ದಂಡನೆಗೆ ಅವಕಾಶ ನೀಡದಂತೆ ಮಾನವೀಯತೆ ಪಾಲಿಸಬೇಕು ಎಂದು ತಿಳಿಸಿದರು.
ಬಾಣಂತಿಯ ಗಂಡ ಶಿವಕುಮಾರ ಕುರಿ ಕಾಯಲು ತೆರಳಿದ್ದು, ಮನೆಯಲ್ಲಿದ್ದ ಅತ್ತೆ ಕರಿಯಮ್ಮನಿಗೆ ನ್ಯಾಯಾಧೀಶರು ಎಚ್ಚರಿಕೆ ನೀಡಿದರು, ಬಾಣಂತಿಗೆಂದು ಹಾಕಲಾಗಿದ್ದ ಗುಡಿಸಲನ್ನು ಪೊಲೀಸರ ಸಹಾಯದಿಂದ ತೆರವುಗೊಳಿಸಲಾಯಿತು, ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಗ್ರಾಮದ ಹೆಣ್ಣು ಮಕ್ಕಳನ್ನು ಕುರಿತು ಮಾತನಾಡಿದ ನ್ಯಾಯಾಧೀಶೆ ಸಂಪ್ರದಾಯದ ಹೆಸರಿನಲ್ಲಿ ಆಚರಿಸುವ ಮೌಢ್ಯ ಮತ್ತು ಅಮಾನವೀಯ ಆಚರಣೆಗಳ ವಿರುದ್ಧ ಜಾಗೃತರಾಗಿರುವಂತೆ ಕರೆ ನೀಡಿದರು.
ತಾಲ್ಲೂಕು ಕಾಡುಗೊಲ್ಲರ ಸಂಘದ ಕಾರ್ಯದರ್ಶಿ ಚಂದ್ರಣ್ಣ, ತಾವರೆಕೆರೆ ಪೊಲೀಸ್ ಠಾಣೆ ಎಂ ಎಸ್ ಐ ಶ್ರೀನಿವಾಸ್ ಇತರರು ಇದ್ದರು.
Comments are closed.