ಕುಣಿಗಲ್: ಅತಿಥಿ ಶಿಕ್ಷಕನನ್ನು ಆತನ ಗ್ರಾಮದ ಹೊರ ವಲಯದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಗ್ರಾಮದ ಸಮೀಪದ ಕುಳ್ಳನಂಜಯ್ಯನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವರನ್ನು ಕುಳ್ಳನಂಜಯ್ಯನಪಾಳ್ಯದ ಮರಿಯಪ್ಪ (47) ಎಂದು ಗುರುತಿಸಲಾಗಿದ್ದು, ಈತ ಮೊದೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಘಟನೆಗೆ ಸಂಬಂಧಿಸಿದಂತೆ ಮೃತನ ಪುತ್ರಿ ಹೇಮಲತಾ ಎಂಬುವರು ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದು ದೂರಿನಲ್ಲಿ ನಮ್ಮ ತಂದೆ ಶುಕ್ರವಾರ ರಾತ್ರಿ ಮನೆಯಿಂದ ಕೆಲಸದ ನಿಮಿತ್ತ ಹೊರ ಹೋಗಿದ್ದು ಬಂದಿರಲಿಲ್ಲ, ಶನಿವಾರ ಬೆಳಗ್ಗೆ ಗ್ರಾಮದ ಕೆಲವರು ಹೊರ ವಲಯದಲ್ಲಿರುವ ಕಪನಯ್ಯ ಎಂಬುವರ ಹೊಲದಲ್ಲಿ ತಂದೆಯವರ ಮೃತದೇಹ ಇರುವುದಾಗಿ ತಿಳಿಸಿದ್ದು, ಸ್ಥಳಕ್ಕೆ ಹೋಗಿ ನೋಡಲಾಗಿ ತಂದೆಯವರನ್ನು ಕತ್ತರಿಸಿ ಕೊಲೆ ಮಾಡಲಾಗಿತ್ತು, ಬೈಕ್ ಹೇರೂರು- ಗಿರಿನಗರ ರಸ್ತೆಯಲ್ಲಿ ಬಿದ್ದಿದ್ದು ಬೈಕ್ ಬಳಿ ಬಲಗೈ ಬಿದ್ದಿದ್ದು, ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು ಮೃತದೇಹವನ್ನು ಮುಂದಿನ ಕ್ರಮಕ್ಕೆ ತುಮಕೂರಿಗೆ ರವಾನಿಸಿದ್ದು, ಸ್ಥಳಕ್ಕೆ ಎಎಸ್ಪಿ ಮರಿಯಪ್ಪ, ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ, ಮೃತ ವ್ಯಕ್ತಿಯು ವಾಮಾಚಾರ ಪೂಜೆ ಮಾಡುತ್ತಿದ್ದು ಶುಕ್ರವಾರ ಅಮಾವಾಸ್ಯೆ ಪ್ರಯುಕ್ತ ಗ್ರಾಮದಿಂದ ಹೊರ ಬಂದಿದ್ದರು ಎನ್ನಲಾಗಿದೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದಾರೆ.
Comments are closed.