ಸಮಸ್ಯೆ ನಿವಾರಣೆಗೆ ಪುರಸಭೆ ಸದಸ್ಯರ ಒತ್ತಾಯ

29

Get real time updates directly on you device, subscribe now.


ಕುಣಿಗಲ್: ಪುರಸಭೆಯ ಬಜೆಟ್ ಪೂರ್ವ ಸಭೆ ವರ್ಗಾವೆಣೆಗೊಂಡ ಮುಖ್ಯಾಧಿಕಾರಿ ಬೀಳ್ಕೋಡುಗೆ ಹಾಗೂ ನೂತನ ಮುಖ್ಯಾಧಿಕಾರಿಯ ಮುಂದೆ ಸದಸ್ಯರ ಅಹವಾಲು ಸಭೆಯಾಗಿ ಮಾರ್ಪಾಟಾದ ಘಟನೆ ಮಂಗಳವಾರ ನಡೆಯಿತು.
ಪುರಸಭೆಯ 2024- 25ನೇಸಾಲಿನ ಬಜೆಟ್ ಪೂರ್ವಭಾವಿ ಸಭೆ, ಪುರಸಭೆ ಸದಸ್ಯರಿಗೆ ಸಭಾಂಗಣದಲ್ಲಿ ಆಡಳಿತಾಧಿಕಾರಿ ತುಮಕೂರು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು, ಸಭೆಗೆ ಚುನಾವಣೆ ಪೂರ್ವಭಾವಿ ಸಭೆಗೆ ಪಾಲ್ಗೊಳ್ಳುವ ಅನಿವಾರ್ಯತೆ ನೆಪ ಒಡ್ಡಿ ಆಡಳಿತಾಧಿಕಾರಿ ಗೈರಾಗಿದ್ದು ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮಂಜುಳಾ ಸಭೆಯ ಅಧ್ಯಕ್ಷತೆ ವಹಿಸಿ ಸಭೆ ನಡೆಸಲು ಮುಂದಾಗದರು, ಸಭೆಯ ಆರಂಭಕ್ಕೆ ಬಿಜೆಪಿ ಸದಸ್ಯ ಕೃಷ್ಣ, 11 ತಿಂಗಳಾಗಿದೆ ಆಡಳಿತಾಧಿಕಾರಿಯಾದ ಎಸಿ ಅಧಿಕಾರ ವಹಿಸಿಕೊಂಡು ಸದಸ್ಯರ ಸಭೆ ನಡೆಸಿ ಅಹವಾಲು ಆಲಿಸಿಲ್ಲ, ಈಗಾಗಲೆ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿಲ್ಲ, ರಸ್ತೆ, ಬೀದಿದೀಪ, ಖಾತೆ, ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ, ಸದಸ್ಯರ ಸಭೆ ಕರೆದು ಚರ್ಚಿಸಿಲ್ಲದ ಕಾರಣ ಎಸಿ ಸಭೆ ನಡೆಸುವರೆಗೂ ಸಭೆ ನಡೆಸೋದು ಬೇಡ ಎಂದರು.

ಇದಕ್ಕೆ ಬೆಂಬಲಿಸಿದ ಕಾಂಗ್ರೆಸ್ ಸದಸ್ಯ ರಂಗಸ್ವಾಮಿ, ಪುರಸಭೆ ಸಮಸ್ಯೆ ಬಗ್ಗೆ ಆಡಳಿತಾಧಿಕಾರಿ ಎಸಿ ಯವರಿಗೆ ಕರೆ ಮಾಡಿದರೆ ಫೋನ್ ಸ್ವೀಕರಿಸಲ್ಲ, ಸದಸ್ಯರಿಗೆ ಆಡಳಿತಾಧಿಕಾರಿ ಬೆಲೆ ನೀಡದ ಮೇಲೆ ನಾವು ಹೇಗೆ ಸಭೆಯಲ್ಲಿ ಪಾಲ್ಗೊಳ್ಳಬೇಕು, ಎಸಿ ಸಭೆ ನಡೆಸಲಿ ಆವಾಗ ಪಾಲ್ಗೊಳ್ಳುತ್ತೇವೆ ಎಂದರು.

ಸದಸ್ಯರಾದ ನಾಗಣ್ಣ, ಶ್ರೀನಿವಾಸ್ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಶಿವಪ್ರಸಾದ್ ಗೆ ಬೀಳ್ಕೊಡುಗೆ ನೀಡುವ ವಿಷಯ ಪ್ರಸ್ತಾಪಿಸಿದರಲ್ಲದೆ ಹೊಸದಾಗಿ ಬಂದಿರುವ ಮುಖ್ಯಾಧಿಕಾರಿಗಳಿಗೆ ವಾರ್ಡ್ಗಳಲ್ಲಿರುವ ಸಮಸ್ಯೆಯ ಅಹವಾಲು ಮಂಡಿಸಿ ಗಮನ ಸೆಳೆಯುವ ಬಗ್ಗೆ ಪ್ರಸ್ತಾಪಿಸಿ ಹಾಜರಿದ್ದ ಸದಸ್ಯರು ನೂತನ ಮುಖ್ಯಾಧಿಕಾರಿ ಮುಂದೆ ಅಹವಾಲು ಮಂಡಿಸಿದರು.

ಕಾಂಗ್ರೆಸ್ ಸದಸ್ಯ ರಾಮಣ್ಣ, ಕೆಲ ಸದಸ್ಯರು ಇದು ಅನೌಪಚಾರಿಕ ಸಭೆಯಾದರೂ ಇಲ್ಲಸಲ್ಲದ ವಿಷಯ ಮಾತನಾಡೋದು ಸರಿಯಲ್ಲಿ, ವಿಷಯ ಏನಿದೆ ಎಂದು ಚರ್ಚೆ ಮಾಡಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸದಸ್ಯ ನಾಗೇಂದ್ರ ಪುರಸಭೆಯಲ್ಲಿ ಆರ್ಥಿಕ ವ್ಯವಸ್ಥೆ ಹಳಿತಪ್ಪಿದೆ, ಬರಗಾಲ ಸನ್ನಿವೇಶದಲ್ಲಿ ಬರೀ ಮೂವತ್ತು ಸಾವಿರ ರೂ. ಮಾತ್ರ ಪುರಸಭೆ ಖಜಾನೆಯಲ್ಲಿದೆ, ಈ ರೀತಿ ಆದರೆ ಸಮಸ್ಯೆ ನಿರ್ವಹಣೆ ಹೇಗೆ, ಆರ್ಥಿಕ ಶಿಸ್ತು ನಿರ್ವಹಣೆಗೆ ಕ್ರಮ ವಹಿಸಿ ಎಂದರೆ, ಸದಸ್ಯ ಶ್ರೀನಿವಾಸ್, ಪುರಸಭೆ ಕಂದಾಯ ಇಲಾಖೆಯ ವಿಭಾಗದ ಅಧಿಕಾರಿಗಳು ಪುರಸಭೆಗೆ ಬರಬೇಕಾದ ತೆರಿಗೆ ವಸೂಲಿಯಲ್ಲಿ ವಿಫಲವಾಗಿದ್ದಾರೆ, ಇದರಿಂದ ಪುರಸಭೆಗೆ ತೀವ್ರ ಆರ್ಥಿಕ ಕೊರತೆ ಎದುರಾಗಿದೆ ಎಂದರು.

ಸದಸ್ಯರು ತಮ್ಮ ವಾರ್ಡ್ಸಮಸ್ಯೆ ಬಗ್ಗೆ ಅಹವಾಲು ಮಂಡಿಸಿ, ವರ್ಗಾವಣೆಗೊಂಡ ಮುಖ್ಯಾಧಿಕಾರಿ ಶಿವಪ್ರಸಾದ್ ಗೆ ಬೀಳ್ಕೋಡುಗೆ ನೀಡಿ, ನೂತನ ಮುಖ್ಯಾಧಿಕಾರಿ ಮಂಜುಳಾ ಅವರಿಗೆ ಸ್ವಾಗತಿಸಿದರು, ವ್ಯವಸ್ಥಾಪಕಿ ಗೀತಾ, ಪರಿಸರ ಅಭಿಯಂತರ ಚಂದ್ರಶೇಖರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!