ಗುಬ್ಬಿ: ಪಟ್ಟಣದ ಎಪಿಎಂಸಿ ಕಚೇರಿಯ ಮುಂಭಾಗದಲ್ಲಿ ನೂರಾರು ರೈತರು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೊಬ್ಬರಿ ಖರೀದಿ ಕೇಂದ್ರದಲ್ಲಿ ಕಷ್ಟ ಬಿದ್ದು ನೋಂದಣಿ ಮಾಡಿಸಿದಂತಹ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ, ನಿಮ್ಮ ಅಧಿಕಾರಿಗಳು ಮಾಡಿರುವ ತಪ್ಪಿಗೆ ರೈತರು ಏನು ಮಾಡಿದ್ದಾರೆ, ನೋಂದಣಿ ಕಾರ್ಯದಲ್ಲಿ ಅಕ್ರಮವಾಗಿದೆ ಎಂದು ಹೇಳಿಕೆ ನೀಡಿರುವ ಸರಕಾರ ಮತ್ತೊಮ್ಮೆ ನೋಂದಣಿ ಮಾಡಿಸಬೇಕು ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ, ಕಷ್ಟ ಬಿದ್ದು ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿದ್ದೇವೆ, ಈಗ ಏಕಾಏಕಿ ಈ ರೀತಿ ಹೇಳಿದರೆ ಇದು ಯಾವ ನ್ಯಾಯ, ಇನ್ನೂ 20 ಕ್ವಿಂಟಾಲ್ ತೆಗೆದುಕೊಳ್ಳುತ್ತೀವಿ ಎಂದು ಹೇಳಿದವರು ಈಗ 15 ಕ್ವಿಂಟಾಲ್ಗೆ ಬಂದಿದ್ದೀರಾ, ವಿಧಾನ ಪರಿಷತ್ನಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಇಂದಿನಿಂದಲೆ ನೊಂದಣಿ ಹಾಗೂ ಕೊಬ್ಬರಿ ಖರೀದಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ, ಇಲ್ಲಿ ನೋಡಿದರೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ, ನೋಂದಣಿಗೂ ಇಲ್ಲ, ಖರೀದಿ ಕೇಂದ್ರವೂ ಇಲ್ಲ ಎಂದು ಕಿಡಿಕಾರಿದರು.
ಒಬ್ಬ ಸಚಿವರಾದವರು ಸದನದಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ, ಸ್ಥಳೀಯವಾಗಿ ಯಾವುದೇ ಮಾಹಿತಿ ನೀಡದೆ ಸದನದಲ್ಲಿ ಉತ್ತರ ನೀಡುವುದು ಎಷ್ಟು ಸರಿ, ರೈತರ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ, ಇದನ್ನು ಇಡೀ ರೈತರು ಖಂಡನೆ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ರೈತರಾದ ಸುರೇಶ್, ಜಯಣ್ಣ, ಸಿದ್ದಲಿಂಗಯ್ಯ, ಧರ್ಮೇಗೌಡ, ಶಿವರಾಮ್, ದಿವ್ಯ ಪ್ರಕಾಶ್, ಮಂಜುನಾಥ್, ವಿವೇಕ್ ಕುಮಾರ್, ಮಲ್ಲಿಕಾರ್ಜುನ, ನಂಜೇಗೌಡ ಇನ್ನಿತರರರು ಹಾಜರಿದ್ದರು.
Comments are closed.