ಸಮರ್ಪಕ ನೀರಿಗೆ ಆಗ್ರಹಿಸಿ ಪ್ರತಿಭಟನೆ

18

Get real time updates directly on you device, subscribe now.


ಕುಣಿಗಲ್: ಕಳೆದ ಹದಿನೈದು ದಿನಗಳಿಂದ ಸಮರ್ಪಕ ನೀರು ಪೂರೈಕೆ ಆಗದಿರುವುದನ್ನು ಖಂಡಿಸಿದ ಬಿಳೇ ದೇವಾಲಯ, ಬೋರಲಿಂಗನ ಪಾಳ್ಯದ ವಿವಿಧ ಬ್ಲಾಕ್ ನ ಗ್ರಾಮಸ್ಥರು ಬಿಳೇ ದೇವಾಲಯ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಪಿಡಿಒ ಅವರೊಂದಿಗೆ ವಾಗ್ವಾದ ನಡೆಸಿ, ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಿಳೇ ದೇವಾಲಯ, ಬೋರಲಿಂಗನ ಪಾಳ್ಯದ ವಿವಿಧ ಬ್ಲಾಕ್ ನಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಹದಿನೈದು ದಿನದಿಂದಲೂ ಸಮಸ್ಯೆ ಇದ್ದು ದಿನೇ ದಿನೇ ವಿಪರೀತವಾದ ಕಾರಣ ಸೋಮವಾರ ಬೆಳಗ್ಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಆಗಮಿಸಿ, ಆಡಳಿತ ವ್ಯವಸ್ಥೆಗೆ ಧಿಕ್ಕಾರ ಕೂಗಿ, ಸ್ಥಳಕ್ಕೆ ಆಗಮಿಸಿದ ವಾಟರ್ ಮನ್, ಪಿಡಿಒ ಭಾಗ್ಯಲಕ್ಷ್ಮೀ ಅವರೊಂದಿಗೆ ವಾಗ್ವಾದ ನಡೆಸಿದರು. ಪ್ರತಿಭಟನಾ ನಿರತ ಗ್ರಾಮಸ್ಥರು ನೀರಿನ ಸಮಸ್ಯೆ ಇದೆ ಎಂದು ಹಲವಾರು ಬಾರಿ ಹೇಳಿದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ, ಗ್ರಾಪಂ ಸದಸ್ಯರ ಗಮನಕ್ಕೆ ತಂದರೆ ಬಗೆಹರಿಸುತ್ತೇವೆ ಎನ್ನುತ್ತಾರೆ, ಯಾರೂ ಗಮನ ಹರಿಸುತ್ತಿಲ್ಲ, ವಾಟರ್ ಮನ್ ಗೆ ಕೇಳಿದರೆ ನನಗೆ ಸಂಬಳ ಕೊಟ್ಟಿಲ್ಲ, ನಾನೇನು ಮಾಡಲಿ ಅಂತಾರೆ, ವ್ಯವಸ್ಥೆ ಹದಗೆಟ್ಟಿದೆ, ಮನೆಯೊಂದರಲ್ಲಿ ಸಾವಾಗಿದ್ದು, ಮನೆ ಸ್ವಚ್ಛಗೊಳಿಸಲು ನೀರಿಲ್ಲದೆ ಅವರಿವರಿಂದ ಕಾಡಿಬೇಡಿ ನೀರು ಪಡೆಯುವ ಸ್ಥಿತಿ ಬಂದಿದೆ, ಹಬ್ಬಕ್ಕೆ ಬೇರೆ ಕಡೆಯಿಂದ ಟ್ಯಾಂಕರ್ ಗೆ ದುಡ್ಡು ಕೊಟ್ಟು ನೀರು ತರಿಸಿಕೊಂಡು ಹಬ್ಬ ಮಾಡಿದ್ದೇವೆ, ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಪ್ರತಿಭಟನೆ ತೀವ್ರ ಗೊಳಿಸಬೇಕಾಗುತ್ತೆ ಎಂದು ಎಚ್ಚರಿಸಿದರು.

ಗ್ರಾಮಸ್ಥರ ಸಮಸ್ಯೆ ಆಲಿಸಿದ ಪಿಡಿಒ, ಸಮಸ್ಯೆ ಶೀಘ್ರದಲ್ಲೆ ಬಗೆಹರಿಸಿ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಶಾಕೀರಮ್ಮ, ಫಾತಿಮಾ, ರಿಯಾಜ್, ಅಹಮದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!