ಕಲೆಯಿಂದ ಲೋಕ ಗ್ರಹಿಕೆ ಸಾಧ್ಯ: ಲಕ್ಷ್ಮೀಶ

39

Get real time updates directly on you device, subscribe now.


ತುಮಕೂರು: ವಿಪರ್ಯಾಸಗಳನ್ನು ಗ್ರಹಿಸಿ ಬೆಳೆಯುವ ಕಲೆ ಲೋಕ ಗ್ರಹಿಕೆಯನ್ನು ಕೇಂದ್ರೀಕರಿಸಿ ಜಾಗೃತಿಯ ಚಲನೆಯನ್ನುಅಂತರ್ಯದಲ್ಲಿ ಸೃಷ್ಟಿಸುತ್ತದೆ ಎಂದು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ತುಮಕೂರು ವಿವಿಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ಕಲೆಯ ಮೂಲಕ ಲೋಕ ಗ್ರಹಿಕೆ ಎಂಬ ಪರಿಕಲ್ಪನೆಯಲ್ಲಿ ಸಹಿತ ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಅರ್ಥವಾಗದೇ ಇರುವ ಅರ್ಥವಾಗಬೇಕಿರುವ ವಿಷಯವೇ ಲೋಕಗ್ರಹಿಕೆ, ಕಲೆಯ ಸಂಗತಿ ಚಲನೆಯಾಗಿದೆ, ಮಾತಿನಿಂದ, ಹಕ್ಕಿಯ ಸ್ವರದಿಂದ, ಅಥವಾ ಯಾವುದರಿಂದಲಾದರೂ ಒಂದು ಚಲನೆ ಉಂಟಾಗಲಿದೆ, ಅದುವೇ ಜೀವ ಕಲೆ- ಕಳೆ, ಅನುಭವದಿಂದ ಬಾಗುವ, ಹೊಸ ಅರ್ಥದ ಸಂಚಾರವೇ ಕಲೆಯಾಗಿದೆ ಎಂದರು.
ನೆಮ್ಮದಿಯ ಕಾಲದಲ್ಲಿ ಉಂಟಾಗದ ಜಾಗೃತಿಯು ಕಷ್ಟ, ಸಂಕಟಗಳಲ್ಲಿ ಮೂಡುತ್ತದೆ, ಸಂಕಟದಲ್ಲಿ ಉಂಟಾದ ಜಾಗೃತಿಯೇ ಕಲೆಯ ನಿಯಮ, ಕಷ್ಟ ಕಾಲದಲ್ಲಿಯೇ ರಾಮಾಯಣ, ಮಹಾಭಾರತ ಗ್ರಂಥಗಳು ವರ್ಣಿತವಾದದ್ದು, ಚಿತ್ರಿತವಾದದ್ದು, ಕಲೆಯ ಅನಾವರಣದಿಂದ ಕಾಲ ಈ ರೀತಿ ಇರಬಾರದು ಎಂದು ತೋರಿಸುತ್ತದೆ, ಲೋಕಕ್ಕೆ ಕಟ್ಟೆ ಇರಬಾರದು ಎಂಬುದನ್ನು ಪ್ರಸ್ತುತ ಪಡಿಸುತ್ತದೆ ಕಲೆ ಎಂದು ತಿಳಿಸಿದರು.
ಬದುಕಿನಲ್ಲಿ ಉದ್ವಿಗ್ನತೆ ಬಯಸಬೇಕು, ವಿಶೇಷವಾದ ಸಾಮರ್ಥ್ಯ ಪ್ರಕಟ ಪಡಿಸಲು ನಿರ್ದಿಷ್ಟ ಕಾಲವನ್ನು ಕಲೆ ಬೇಡುತ್ತದೆ, ಸಂಬಂಧ ಬೆಸೆಯುವುದೇ ಕಲೆಯಾಗಿ ಮಾರ್ಪಾಡಾಗುತ್ತದೆ, ಪ್ರಜ್ಞಾ ಪೂರಕವಾಗಿ ಮಾತಾಡುವ ಬದಲು ಪ್ರಜ್ಞೆಯಿಂದ ಮಾತಾಡುವ ಔಚಿತ್ಯ ಉಣಬಡಿಸುತ್ತದೆ ಎಂದರು.

ಪ್ರಾಚೀನ ಗ್ರಂಥ, ಉಪನಿಷತ್ತುಗಳಲ್ಲಿ ಹೀಗಲ್ಲ, ಇದಲ್ಲ, ನಾನು ಬಯಸಿದ್ದು ಇದನ್ನಲ್ಲ ಎನ್ನುವ ಮಾತಿದೆ, ನಿರಾಕರಣೆಯ ಸಂದರ್ಭ ಮನಸಿನಲ್ಲಿ ಉಂಟಾದಾಗ ನಮಗೆ ಗೊತ್ತಿರುವುದನ್ನೇ ಕೇಳಲು ಬಯಸುತ್ತಿವೆಯೇ ಹೊರತು ಹೊಸದನ್ನು ಸ್ವೀಕರಿಸಲು ಬಯಸುವುದಿಲ್ಲ, ನಮಗೆ ತಿಳಿಯದ ಬೇರೆಯೇ ಒಂದು ವಿಷಯವಿದೆ ಎಂದು ತಿಳಿಯುವುದು ಕಲೆಯೊಂದಿಗೆ ಮಿಳಿತವಾದಾಗ ಮಾತ್ರ ಎಂದು ತಿಳಿಸಿದರು.
ಲೋಕ ಗ್ರಹಿಕೆಯನ್ನು ಸೂಕ್ಷ್ಮತೆಯಿಂದ ಮಾನ್ಯ ಮಾಡಬಾರದು, ನಮಗೆ ಗೊತ್ತಿಲ್ಲದ ಬೇರೊಂದು ಸಂಗತಿ ಹೊಳೆದಾಗ ಮಾತ್ರ ಕಲೆಯ ಪ್ರಸ್ತುತಿಯಾಗುತ್ತದೆ, ವಿಕ್ರಮಾರ್ಜುನ ವಿಜಯದಲ್ಲಿ ಪಂಪನು ಹೇಳುವುದು ನೆನೆಯುವುದಾದರೆ ಕರ್ಣನನ್ನು ನೆನೆ ಎಂದು, ಅರ್ಜುನನ್ನು ಕುರಿತು ಬರೆದ ಕಾವ್ಯದಲ್ಲಿ ಇನ್ನೊಬ್ಬನನ್ನು ನೆನೆಯುತ್ತಾನೆ ಕವಿ ಪಂಪ, ಇದು ಕಲೆಯ ಸೃಷ್ಟಿ ಎಂದರು.

ಲೋಕವನ್ನು ಮೀರಿದ ಭಾವ ಸಂಗತಿ ಅಂತರ್ಯದಲ್ಲಿ ಮೀಟಿದರೆ ಕಲೆಯ ಸೃಷ್ಟಿಯಾಗಲಿದೆ, ಭಾಷೆ ಅಂತರಂಗದ ಪ್ರಪಂಚವನ್ನು ತೋರಬೇಕಾದರೆ ಕಲೆಯ ಮಾಯೆಯೊಳಗೆ ಒಳಗಾಗಬೇಕು, ಜಡ ಭಾಷೆ ಬಳಸಿಕೊಂಡು ಭಾವನೆ ಸೃಷ್ಟಿಸುವುದೇ ಕಲೆ, ವಚನಕಾರರು ಬಳಸಿದ್ದು ಲೋಕವನ್ನು ಬಯಲು ಎಂದು, ಆಧ್ಯಾತ್ಮ ಲೋಕದ ಸಾಧಕರು ತೋರಿದ್ದು ಲೋಕ ಇರಬೇಕಾದದ್ದು ಹೀಗಲ್ಲವೆಂದು, ಗ್ರಹಿಕೆಯ ಆಳವನ್ನು ವಿಭಿನ್ನವಾಗಿಸುವುದೇ ಕಲೆಯಾಗಿದೆ ಎಂದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಕೊರತೆ ಯಿರಬಾರದು, ಕಲೆ ಸಾಹಿತ್ಯಗಳಿಂದ ಮನಸ್ಸು ಅರಳುತ್ತದೆ, ಜ್ಞಾನ ಗ್ರಹಿಕೆ- ಲೋಕ ಗ್ರಹಿಕೆಗಾಗಿಯೇ ವಿಶ್ವ ವಿದ್ಯಾಲಯಗಳು ಇರುವುದು ಎಂದರು.

ಮೊದಲ ದಿನದ ಸಾಹಿತ್ಯೋತ್ಸವದಲ್ಲಿ ಮುಂಬೈ ಐಐಟಿಯ ಭಾರತೀಯ ತತ್ವಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಮೃಣಾಲ್ ಕೌಲ್, ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿವಿಯ ಸಮಾಜ ವಿಜ್ಞಾನ ನಿಕಾಯದ ಪ್ರಾಧ್ಯಾಪಕ ಪ್ರೊ.ಎ.ನಾರಾಯಣ, ನೀನಾಸಂ ರಂಗಭೂಮಿ ಕಲಾವಿದ ಜಿ.ಕೆ.ನಂದಕುಮಾರ್, ಬೆಂಗಳೂರು ವಿವಿಯ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಪ್ರೊ.ಕೆ.ಎಸ್.ವೈಶಾಲಿ, ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ, ಸಾಹಿತ್ಯೋತ್ಸವದ ಸಂಘಟಕ ಪ್ರೊ.ಎಚ್.ಕೆ.ಶಿವಲಿಂಗ ಸ್ವಾಮಿ, ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!