ಕುಣಿಗಲ್: ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಂತಿದ್ದ ಮರಳು ದಂಧೆ ಪುನಹ ಆರಂಭವಾಗಿದ್ದು ಗ್ರಾಮಸ್ಥರ ವಿರೋಧದ ನಡುವೆ ಎತ್ತಿನ ಗಾಡಿಗಳಲ್ಲಿ ಕೆರೆಯಿಂದ ಮರಳು ಸಾಗಾಣೆ ಮಾಡುತ್ತಿದ್ದು, ಇದನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.
ಕೊತ್ತಗೆರೆ ಹೋಬಳಿಯ ಕಲ್ಯಾಣಿ ಕೆರೆಯಲ್ಲಿ, ಕಸಬಾ ಹೋಬಳಿಯ ಬೇಗೂರು ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಕೆಲವಾರು ದಿನಗಳಿಂದ ಕೆರೆಯಲ್ಲಿ ಬಿಸಿಲಿನ ಬೇಗೆಗೆ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆಯೆ ಐದಾರು ಎತ್ತಿನ ಗಾಡಿಗಳಲ್ಲಿ ಕೆರೆಗೆ ಇಳಿದು ಮರಳು ಎತ್ತುವಳಿ ಮಾಡುತ್ತಿದ್ದು, ಇದನ್ನು ಗ್ರಾಮಸ್ಥರು ಪ್ರಶ್ನಿಸಿದರೆ ಗ್ರಾಮಸ್ಥರೊಂದಿಗೆ ವಾಗ್ವಾದ ನಡೆಸಿ ಜಟಾಪಟಿಗೆ ಇಳಿಯುತ್ತಾರೆ, ಈಗಾಗಲೆ ಕೆರೆ ಸಮೀಪದಲ್ಲೆ ಬೋರ್ ಕೊರೆಸಿದರೆ ಎಂಟು ನೂರರಿಂದ ಸಾವಿರ ಅಡಿಗೆ ನೀರು ಸಿಗುವ ಪರಿಸ್ಥಿತಿ ಇದೆ, ಇರುವ ಅಲ್ಪ ಸ್ವಲ್ಪ ಮರಳು ಎತ್ತುವಳಿ ಮಾಡಿದರೆ ಬೋರ್ ಕೊರೆಸಿದರೂ ನೀರು ಸಿಗುವ ಲಕ್ಷಣ ಕಾಣುತ್ತಿಲ್ಲ ಎಂದು ಬಿದನಗೆರೆಯ ರೈತ ಶ್ರೀನಿವಾಸ್ ಹೇಳುತ್ತಾರೆ.
ನೀಲತ್ತಹಳ್ಳಿಯ ರೈತ ರವಿಕುಮಾರ್, ಮರಳು ಎತ್ತುವಳಿ ಮಾಡುವ ದಂಧೆಕೋರರು ಯಾರ ಭಯವೂ ಇಲ್ಲದೆ ಸಾಗಾಣೆ ಮಾಡುತ್ತಾರೆ, ಇದನ್ನು ನಿಯಂತ್ರಿಸಬೇಕಾದ ಗ್ರಾಮ ಲೆಕ್ಕಿಗರು ಕಂಡು ಕಾಣದಂತೆ ಇದ್ದಾರೆ, ಇನ್ನು ಇತರೆ ಇಲಾಖೆಯವರು ಅಕ್ರಮ ಸಾಗಾಣೆ, ಎತ್ತುವಳಿ ಮೇಲೆ ಕ್ರಮ ಜರುಗಿಸುವ ಅಧಿಕಾರ ಇದ್ದರೂ ಮೌನಕ್ಕೆ ಶರಣಾಗಿರುವುದು ಖಂಡನೀಯ, ಇನ್ನಾದರೂ ಸಂಬಂಧಪಟ್ಟವರು ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಬೇಗೂರು ರೈತ ಪ್ರಕಾಶ್, ಎತ್ತಿನಗಾಡಿ ಇದ್ದಲ್ಲಿ ಮಣ್ಣು ಸಾಗಾಣೆ ಮಾಡಿ ಜೀವನ ಮಾಡಬಹುದು, ಆದರೆ ಮರಳು ಸಾಗಾಣೆ ಖಂಡನೀಯ, ದಂಧೆಕೋರರು ಒಂದೆಡೆ ಗಾಡಿಯಲ್ಲಿ ಮರಳು ಸಂಗ್ರಹಿಸಿ ನಂತರ ಇತರೆಡೆಗೆ ಲೋಡ್ ಲೆಕ್ಕದಲ್ಲಿ ರಾತ್ರೋರಾತ್ರಿ ಸಾಗಿಸಿ ಸುಲಭವಾಗಿ ಹಣ ಮಾಡುವ ದಂಧೆ ಕಂಡುಕೊಂಡಿದ್ದು ಅಕ್ರಮ ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.
Comments are closed.