ಶಿಕ್ಷಕರ ಸಮಸ್ಯೆಗೆ ಸ್ಪಂದಿಸದ ನಾರಾಯಣ ಸ್ವಾಮಿ

12

Get real time updates directly on you device, subscribe now.


ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ವೈ.ಎ.ನಾರಾಯಣ ಸ್ವಾಮಿ ಅವರು ಶಿಕ್ಷಕರು ಎದುರಿಸುತ್ತಿರುವ ಜಲ್ವಂತ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಮತ್ತೊಮ್ಮೆ ಅವಕಾಶ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 20 ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಇವರು ಬಹಿರಂಗವಾಗಿ ಶಿಕ್ಷಕರಿಗೆ ಔತಣಕೂಟ ಏರ್ಪಡಿಸುವ ಮೂಲಕ ಒಂದು ಸುಶಿಕ್ಷಿತ ಸಮುದಾಯವನ್ನು ಸಮಾಜದ ದೃಷ್ಟಿಯಲ್ಲಿ ಕಳಂಕಿತರನ್ನಾಗಿ ಮಾಡಿದ್ದೇ ಇವರ ಸಾಧನೆಯಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 4.80 ಲಕ್ಷ ಶಿಕ್ಷಕರಿದ್ದು, ಇವರಲ್ಲಿ ಸರಕಾರಿ ಶಾಲೆಯ ಸುಮಾರು 1.20 ಲಕ್ಷ ಶಿಕ್ಷಕರನ್ನು ಹೊರತು ಪಡಿಸಿದರೆ ಉಳಿದಂತೆ ಸುಮಾರು 3.50 ಲಕ್ಷದಷ್ಟು ಶಿಕ್ಷಕರು ಉದ್ಯೋಗ ಭದ್ರತೆಯಿಲ್ಲದೆ ಸರಿಯಾದ ವೇತನವಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ, ಕಳೆದ 20 ವರ್ಷಗಳಲ್ಲಿ ಈ ಕ್ಷೇತ್ರ ಪ್ರತಿನಿಧಿಸಿರುವ ವೈಎಎನ್ ಒಂದು ಬಾರಿಯೂ ಶಿಕ್ಷಕರ ಸಮಸ್ಯೆ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿಲ್ಲ, ನನ್ನ ಸಾಧನೆ ಶೂನ್ಯ ಎಂದು ಅವರೇ ಹೇಳಿಕೊಂಡಿದ್ದಾರೆ, ಹೀಗಿದ್ದು ಯಾವ ಮುಖ ಇಟ್ಟುಕೊಂಡು ಶಿಕ್ಷಕರ ಬಳಿ ಮತಯಾಚಿಸುತ್ತಾರೆ ಎಂದು ವ್ಯಂಗವಾಡಿದರು.
ಸರಕಾರಿ ಶಿಕ್ಷಕರು ಟೈಮ್ ಬಾಂಡ್ ಪ್ರಮೋಷನ್, ಹಳೆಯ ಪಿಂಚಿಣಿ ವ್ಯವಸ್ಥೆ ಜಾರಿ, ವೇತನ ತಾರತಮ್ಯ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳ ಜೊತೆಗೆ ಬಿ ಎಲ್ ಓ ಗಳಾಗಿ ಅನ್ಯ ಕಾರ್ಯಗಳಿಗೆ ನೇಮಕಗೊಂಡು ಸಂಕಷ್ಟ ಎದುರಿಸುತ್ತಿದ್ದಾರೆ, ಅನುದಾನಿತ ಶಾಲೆಗಳ ಶಿಕ್ಷಕರು ಸರಕಾರದಿಂದ ವೇತನ ಪಡೆಯುವುದನ್ನು ಬಿಟ್ಟರೆ ಪಿಂಚಿಣಿ ಇಲ್ಲದೆ ಬರಿಗೈಯಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ಇದೆ, ಸರಕಾರದಿಂದ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ, ಇನ್ನೂ ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು ಅತಿ ಕಡಿಮೆ ವೇತನಕ್ಕೆ ದುಡಿಯುತಿದ್ದು, ಆಧುನಿಕ ಜೀತದಾಳುಗಳಾಗಿದ್ದಾರೆ, ಬೇರೆ ರಾಜ್ಯಗಳಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಅರ್ಧದಷ್ಟು ವೇತನವನ್ನು ಸರಕಾರವೇ ನೀಡುತ್ತದೆ, ಆದರೆ ಕರ್ನಾಟಕದಲ್ಲಿ ಇದು ಜಾರಿಯಲ್ಲಿ ಇಲ್ಲ, ಈ ವಿಚಾರಗಳ ಬಗ್ಗೆ ವೈ.ಎ.ನಾರಾಯಣ ಸ್ವಾಮಿ ಸದನದಲ್ಲಿ ದ್ವನಿ ಎತ್ತಿದ್ದರೆ ದಾಖಲೆಗಳ ಸಮೇತ ಮಾಹಿತಿ ನೀಡಲಿ ಎಂದು ಲೋಕೇಶ್ ತಾಳಿಕಟ್ಟೆ ಸವಾಲು ಹಾಕಿದರು.

ಸರಕಾರ ಹಠಕ್ಕೆ ಬಿದ್ದು ಆರ್ ಟಿ ಇ ನಿಯಮಗಳಿಗೆ ವಿರುದ್ಧವಾಗಿ 5-8 ಮತ್ತು 9ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾದಾಗ ವಿಧಿಯಿಲ್ಲದೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು, ಇದು ಸರಕಾರವೇ ಮಾಡಿಕೊಂಡ ಎಡವಟ್ಟು, ಆರ್ ಟಿ ಇ ನಿಯಮ ಕಲಂ, 23 ಮತ್ತು 30ರ ಅನ್ವಯ ಸಿಸಿಇ ಇರಬೇಕು, ಆದರೆ ಪಬ್ಲಿಕ್ ಪರೀಕ್ಷೆ ಹೆಸರಿನಲ್ಲಿ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಕಳುಹಿಸುವ ಹುನ್ನಾರದ ವಿರುದ್ಧ ಧ್ವನಿ ಎತ್ತಿದ ಪರಿಣಾಮ ಸುಪ್ರಿಂ ಕೋರ್ಟ್ ನಮಗೆ ನ್ಯಾಯ ಒದಗಿಸಿದೆ, ಇದು ರೂಪ್ಸಾ ಕರ್ನಾಟಕ ಶಿಕ್ಷಣದ ಪರವಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.
ರೂಪ್ಸಾ ಅಧ್ಯಕ್ಷ ಯಾರು ಎಂಬ ವಿಚಾರದಲ್ಲಿ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲದ ಗೊಂದಲ ತುಮಕೂರಿನಲ್ಲಿದೆ, ಈಗಾಗಲೇ ಹೈಕೋರ್ಟ್ನಲ್ಲಿ, ತುಮಕೂರಿನ ಎನ್ ಇ ಪಿ ಎಸ್ ಠಾಣೆಯಲ್ಲಿ ಅಗತ್ಯ ದಾಖಲೆ ನೀಡಿ ರೂಪ್ಸಾ ಅಧ್ಯಕ್ಷ ನಾನೇ ಎಂಬುದನ್ನು ಸಾಬೀತು ಮಾಡಿದ್ದೇವೆ, ಬೇರೆಯವರ ಪ್ರಶ್ನೆಗಳಿಗೆ ಉತ್ತರ ಹೇಳಲ್ಲ, ಬೇಕಾದವರು ನ್ಯಾಯಾಲಯದ ದಾಖಲೆ ಪರಿಶೀಲಿಸಿಕೊಳ್ಳಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಅರಿವು ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಜಗದೀಶ್ ಕುಮಾರ್, ಸುರ್ಯೋದಯ ಶಾಲೆಯ ಕಾರ್ಯದರ್ಶಿ ಚನ್ನಬಸವೇಶ್ವರ ಸ್ವಾಮಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!