ನೋವು ಮರೆತ ಚಿದಾನಂದ್, ಸೋಮಣ್ಣ ಗೆಲುವಿಗೆ ಪಣ

34

Get real time updates directly on you device, subscribe now.


ತುಮಕೂರು: ಪಕ್ಷದ ಹೈಕಮಾಂಡ್ ತುಮಕೂರು ಲೋಕಸಭಾ ಚುನಾವಣೆಯ ಟಿಕೆಟ್ ನನಗೆ ನೀಡಿದ ಹಿನ್ನೆಲೆಯಲ್ಲಿ ಪ್ರಬಲ ಆಕಾಂಕ್ಷಿ ಯಾಗಿದ್ದರೂ ನೋವು ಮರೆತು ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡುತ್ತಿರುವ ಎಸ್.ಪಿ.ಚಿದಾನಂದ ಅವರಿಗೆ ಪಕ್ಷ ಚುನಾವಣೆಯ ನಂತರದಲ್ಲಿ ಒಳ್ಳೆಯ ಹುದ್ದೆ ನೀಡಲಿದೆ ಎಂಬ ನಂಬಿಕೆ ನಮಗಿದೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಮಾಜ ಸೇವಕ ಎಸ್.ಪಿ.ಚಿದಾನಂದ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಜಿ.ಬಿ.ಜೋತಿಗಣೇಶ್ ಅವರೊಂದಿಗೆ ಸೇರಿ ಪಕ್ಷ ಸದೃಢವಾಗಿ ಕಟ್ಟಿದ್ದಾರೆ, ಅವರಿಗೆ ಲೋಕಸಭೆಯ ಟಿಕೆಟ್ ದೊರೆಯಬೇಕಾಗಿತ್ತು, ಕೊನೆಯ ಕ್ಷಣದ ಬದಲಾವಣೆ ಮತ್ತು ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಮಹತ್ವದ ಉದ್ದೇಶದಿಂದ ನನಗೆ ಟಿಕೆಟ್ ನೀಡಿದ್ದಾರೆ, ಚಿದಾನಂದ ಅವರು ಸಹ ತಮ್ಮ ನೋವನ್ನು ಪಕ್ಷದ ವರಿಷ್ಠರು ಮತ್ತು ನಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಅವರಿಗೆ ಕಾದಿದೆ ಎಂದರು.

ಇಂದು ನೋವಿನ ನಡುವೆಯೂ ಎಸ್.ಪಿ.ಚಿದಾನಂದ ನಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ, ಒಂದುಕಡೆ ಶಾಸಕ ಜಿ.ಬಿ.ಜೋತಿಗಣೇಶ್, ಮತ್ತೊಂದು ಕಡೆ ಎಸ್.ಪಿ.ಚಿದಾನಂದ ಸರಿಸಮನಾಗಿ ಪಕ್ಷದ ಗೆಲುವಿಗೆ ದುಡಿಯಲು ಮುಂದಾಗಿದ್ದಾರೆ, ಅವರ ನಿಷ್ಕಲ್ಮಷ ಪ್ರೀತಿ ಮತ್ತು ಹೃದಯ ವೈಶಾಲತೆಗೆ ಧಕ್ಕೆಯಾಗದ ರೀತಿ ನಡೆಸಿಕೊಳ್ಳುತ್ತೇನೆ ಎಂಬ ಮಾತನ್ನು ಪಕ್ಷದ ವರಿಷ್ಠರು ಮತ್ತು ಅವರಿಗೆ ನೀಡಿದ್ದೇನೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿಂದುಳಿದ ವರ್ಗಗಳ ನಾಯಕರಾಗಿ ಬೆಳೆಯಲಿದ್ದಾರೆ ಎಂಬ ವಿಶ್ವಾಸವನ್ನು ವಿ.ಸೋಮಣ್ಣ ವ್ಯಕ್ತಪಡಿಸಿದರು.

ನಾನು ಹೊರಗಿನವನು ಎಂಬುದರಲ್ಲಿ ಅರ್ಥವಿಲ್ಲ, ತುಮಕೂರಿನ ಮೂಲ ಎಂದರೆ ಐದಾರು ಸಾವಿರ ಜನ ದೊರೆಯಬಹುದು, ಹಾಗೆ ನೋಡಿದರೆ ಬೆಂಗಳೂರಿಗೂ ನಾನು ಹೊರಗಿನವನು, ನನ್ನನ್ನು ಹೊರಗಿನವ ಎಂದು ಪ್ರಚಾರ ಮಾಡುತ್ತಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವಾಗಿ ಪಕ್ಷದ ಕಾರ್ಯಕರ್ತರು, ಮತದಾರರು ನೀಡಲಿದ್ದಾರೆ, ಸುಳ್ಳು ಹೇಳಿ ಹೋಗುವ ಜಾಯಮಾನ ನನ್ನದಲ್ಲ, ಇಂದು ಅನೇಕ ಜನ ಹಿಂದುಳಿದ ವರ್ಗಗಳ ನಾಯಕರು ನಮೊಂದಿಗೆ ಕೈಜೋಡಿಸಿ ಇಲ್ಲಿಗೆ ಆಗಮಿಸಿದ್ದಾರೆ, ಧನಿಯಕುಮಾರ್, ಡಿ.ಎಂ.ಸತೀಶ್ ಅವರ ಸಹಕಾರ ನಾನು ಮರೆಯುವಂತಿಲ್ಲ, ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಮುಂದಿರುವ ಗುರಿ, 2047ಕ್ಕೆ ಈ ದೇಶವನ್ನು ವಿಶ್ವದ ನಂಬರ್ ಒನ್ ಆರ್ಥಿಕತೆ ಹೊಂದಿದ ದೇಶವನ್ನಾಗಿಸುವ ಗುರಿ ಹೊಂದಿದ್ದಾರೆ, ಅವರ ಕೈ ಬಲಪಡಿಸುವ ಕೆಲಸ ತುಮಕೂರಿನಿಂದಲೂ ಆಗಬೇಕೆಂದು ವಿ.ಸೋಮಣ್ಣ ನುಡಿದರು.

ಸ್ಪೂರ್ತಿ ಚಿದಾನಂದ ಮಾತನಾಡಿ, ಕಳೆದ 10 -15 ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆಗೆ ದುಡಿದ ನನಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ನೋವಿತ್ತು, ಆದರೆ ಈ ದೇಶದ ಒಳಿತಿಗಾಗಿ, ಸುಭದ್ರ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂಬ ಉದ್ದೇಶದಿಂದ ಎಲ್ಲ ನೋವನ್ನು ನುಂಗಿ ವಿ.ಸೋಮಣ್ಣ ಅವರ ಗೆಲುವಿಗೆ ಹೋರಾಟ ನಡೆಸಲು ಮುಂದಾಗಿದ್ದಾರೆ, ನಾವು ಎಂದೆಂದಿಗೂ ಬಿಜೆಪಿ ಪಕ್ಷದವರು, ನಮಗೆ ಬೇರೆ ಪಕ್ಷವಿಲ್ಲ, ಬಹಳ ದೂರದೃಷ್ಟಿ ಇಟ್ಟುಕೊಂಡು ದೇಶವನ್ನು ಹಂತ ಹಂತವಾಗಿ ಮೇಲಕ್ಕೆ ತೆಗೆದುಕೊಂಡು ಹೋಗುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.

ಈ ವೇಳೆ ಶಾಸಕ ಜಿ.ಬಿ.ಜೋತಿಗಣೇಶ್, ಪಕ್ಷದ ಮುಖಂಡರಾದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಮಲ್ಲಸಂದ್ರ ಶಿವಣ್ಣ, ಪಂಚಾಕ್ಷರಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!