ಮಗುವಿಗೆ ಮದ್ಯ ಕುಡಿಸಿ ಕಿಡಿಗೇಡಿಗಳಿಂದ ವಿಕೃತಿ

92

Get real time updates directly on you device, subscribe now.

ಮಧುಗಿರಿ: 3 ವರ್ಷದ ಬಾಲಕನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಏ.10 ರಂದು ಸಂಜೆ 6 ಘಂಟೆ ಸಮಯದಲ್ಲಿ ಗ್ರಾಮದ ಗುರುಸ್ವಾಮಿ ಎಂಬುವವರ ಮಗನಿಗೆ ಕಿಡಿಗೇಡಿಗಳು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಮಗುವಿಗೆ ಕುಡಿಸಿದ್ದಾರೆ. ತಂಪು ಪಾನೀಯ ಎಂದು ಬಾವಿಸಿ ಮದ್ಯ ಕುಡಿದ ಬಾಲಕ ಸುಮಾರು 2 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಪೋಷಕರು ಮತ್ತು ಗ್ರಾಮಸ್ಥರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ 3 ಕಿರಾಣಿ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಹಳಷ್ಟು ತೊಂದರೆಯುಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಕ್ಷಣ ಕ್ರಮ ಕೈಗೊಂಡು ಗ್ರಾಮದ ಅಕ್ರಮ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂದು ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಚ್ಚೆತ್ತ ಗ್ರಾಪಂ: ಮಿಡಿಗೇಶಿ ಗ್ರಾಪಂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರ ಹನುಮಂತಪುರ ಗ್ರಾಮದ ಶಾಲೆಯ ಆವರಣದಲ್ಲಿ ಎಸ್ಡಿಎಂಸಿ ಅದ್ಯಕ್ಷರು ಮತ್ತು ಸಾರ್ವಜನಿಕರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಶಾಲೆಯ ಮುಂಭಾಗದಲ್ಲಿ ಅಂಗಡಿಯಿಟ್ಟುಕೊಂಡು ಅಕ್ರಮ ಮದ್ಯ ಮಾರುತ್ತಿದ್ದಾರೆ ಎಂದು ಗ್ರಾಮಸ್ಥರಿಂದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾಮದ ಅಶ್ವತ್ಥನಾರಾಯಣ ಮತ್ತು ಶ್ರೀಧರ ಎಂಬುವವರಿಗೆ ನೋಟೀಸ್ ನೀಡಿದ್ದು, ಏ.15 ರೊಳಗೆ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಸೂಚಿಸಲಾಗಿದೆ.
ಅಬಕಾರಿ ನಿರೀಕ್ಷಕರ ಭೇಟಿ: ಘಟನೆಯ ನಂತರ ಗ್ರಾಮಕ್ಕೆ ಅಬಕಾರಿ ನಿರೀಕ್ಷಕ ಎಸ್.ರಾಮಮೂರ್ತಿ, ಪಿಎಸ್ಐ ಹನುಮಂತರಾಯಪ್ಪ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದು, ಕಿಡಿಗೇಡಿಗಳ ಬಗ್ಗೆ ಬಾಲಕನನ್ನು ಮತ್ತು ಪೋಷಕರನ್ನು ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದರೆ ಉಗ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!