ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ

ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಡೀಸಿ

20

Get real time updates directly on you device, subscribe now.


ತುಮಕೂರು: ಸಮರ್ಪಕ ವಿದ್ಯುತ್ ಸರಬರಾಜು ಹಾಗೂ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಾರದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯವಾಗಿ ಸಾರ್ವಜನಿಕರಿಗೆ ಲಭ್ಯವಿದ್ದು, ಸಮಸ್ಯೆ ಆಲಿಸಿ ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಪರಿಸ್ಥಿತಿ ಕುರಿತಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಓ, ತಹಶೀಲ್ದಾರ್ ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮ ಮತ್ತು ವಾರ್ಡ್ಗಳ ವಸ್ತು ಸ್ಥಿತಿಯನ್ನು ಸ್ವತಃ ಭೇಟಿ ನೀಡುವ ಮೂಲಕ ಪರಿಶೀಲಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 1 ಲಕ್ಷ ಹಾಗೂ ಸಿ ಎಸ್ ಆರ್ ಅಡಿ 3 ಸಾವಿರ ಮಿನಿ ಕಿಟ್ ಗಳನ್ನು ರೈತರಿಗೆ ವಿತರಿಸಲಾಗಿದೆ, ಹೋಬಳಿವಾರು ಮೇವಿನ ಲಭ್ಯತೆ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಹಿತಿ ಪಡೆಯಬೇಕು, ಜಮೀನು ಮತ್ತು ಕೊಳವೆ ಬಾವಿ ಇಲ್ಲದಂತಹ ರೈತರನ್ನು ಗುರುತಿಸಿ ಮೇವಿನ ಕಿಟ್ಗಳನ್ನು ಆದ್ಯತೆ ಮೇರೆಗೆ ಒದಗಿಸುವಂತೆ ಸೂಚಿಸಿದರು.

ಬೋರ್ ವೆಲ್ ಗಳಲ್ಲಿ ನೀರಿದೆ, ಆದರೆ ವಿದ್ಯುತ್ ಸಮಸ್ಯೆಯಿಂದ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ದೂರಾಗಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿ ವಿದ್ಯುತ್ ಚ್ಛಕ್ತಿ ಕೊರತೆ ನೀಗಿಸುವ ಕುರಿತು ಆಶ್ವಾಸನೆ ನೀಡಿ ಸಮಸ್ಯೆ ಬಗೆಹರಿಸಬೇಕು, ತಾವು ಮುಂದಿನ ಬಾರಿ ಕ್ಷೇತ್ರ ಭೇಟಿಗೆ ಹೋದಾಗ ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಬಹುತೇಕ ಚುನಾವಣಾ ಕರ್ತವ್ಯದಿಂದ ವಿನಾಯತಿ ನೀಡಲಾಗಿದ್ದು, ಸದರಿ ಇಲಾಖೆಯ ಅಧಿಕಾರಿ ನೌಕರರು ಜನರಿಗೆ ಲಭ್ಯವಿದ್ದು, ವಿದ್ಯುತ್ ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.
ಪಾವಗಡದಲ್ಲಿ ಈಗಾಗಲೇ ಮೇವಿನ ಬ್ಯಾಂಕ್ ಸ್ಥಾಪಿಸಲಾಗಿದ್ದು, ಅಂತೆಯೇ ಮಧುಗಿರಿ, ತುಮಕೂರು, ಕೊರಟಗೆರೆ ಸೇರಿದಂತೆ ತೀವ್ರವಾಗಿ ನೀರಿನ ಹಾಗೂ ಮೇವಿನ ಕೊರತೆ ಇರುವ ಪ್ರದೇಶ ಗುರುತಿಸಿ ಮೇವಿನ ಬ್ಯಾಂಕ್ ಸ್ಥಾಪನೆಗೆ ತ್ವರಿತಗತಿಯಲ್ಲಿ ಎಸಿ ಹಾಗೂ ತಹಶೀಲ್ದಾರ್ ಗಳು ಕ್ರಮಕೈಗೊಳ್ಳಬೇಕು ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು.

ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ತಮ್ಮಗಳ ಜವಾಬ್ದಾರಿ ಅರಿತು ನಿಭಾಯಿಸಬೇಕು, ಯಾವ ಹೋಬಳಿಗಳಲ್ಲಿ ಮೇವಿನ ಸಮಸ್ಯೆ ಇದೆ ಅಲ್ಲಿಗೆ ತೆರಳಿ ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಭೆ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಹಂತದಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಡತಗಳು ಬಾಕಿ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಕಡತದೊಂದಿಗೆ ಆಗಮಿಸಿ ತಮ್ಮ ಸಹಿ ಪಡೆದುಕೊಂಡು ತೆರಳುವಂತೆ ಸೂಚಿಸಿದರು.
ಚುನಾವಣೆಯಷ್ಟೇ ಬರ ನಿರ್ವಹಣೆಯೂ ಮುಖ್ಯವಾಗಿದೆ, ಖಾಸಗಿ ಬೋರ್ ವೆಲ್ ಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಪೈಪ್ ಲೈನ್ ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು, ಜಿಲ್ಲೆಗೆ ಅನ್ವಯವಾಗುವಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಏಕರೂಪ ದರ ಹಾಗೂ ಏಜೆನ್ಸಿ ನಿಗದಿಪಡಿಸಲಾಗಿದ್ದು, ಎಸ್ ಡಿ ಆರ್ ಎಫ್ ಮೂಲಕ ಪಾವತಿಗೆ ಕ್ರಮ ಕೈಗೊಳ್ಳುವುದು ಎಂದು ಸೂಚಿಸಿದರು.

ನೀರಿಗಾಗಿ ಕೊರೆದಂತಹ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು, ಯಾವುದೇ ಕಾರಣಕ್ಕೂ ಕೊಳವೆ ಬಾವಿಗಳು ತೆರೆದ ಸ್ಥಿತಿಯಲ್ಲಿ ಇರಬಾರದು, ಈ ಕುರಿತಂತೆ ಪಿಡಿಓ ಮತ್ತು ವಿಎ ಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಜಿಪಿಎಸ್ ಫೋಟೋ ಸಹಿತ ಮಾಹಿತಿ ಒದಗಿಸಬೇಕು, ಇಓ ಮತ್ತು ತಹಶೀಲ್ದಾರ್ ಗಳು ಈ ಕುರಿತಂತೆ ಕಡ್ಡಾಯವಾಗಿ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಕೊಳವೆ ಬಾವಿಗಳನ್ನು ಮತ್ತಷ್ಟು ಆಳವಾಗಿ ಕೊರೆಸುವಿಕೆ ಮತ್ತು ಇತರೆ ದುರಸ್ತಿ ಕಾರ್ಯಗಳನ್ನು ನಿಯಮಾನುಸಾರ ಕೈಗೊಳ್ಳುವುದು, ಈ ಬಗ್ಗೆ ಪರಿಶೀಲಿಸಲು ಆಯಾ ನೋಡಲ್ ಅಧಿಕಾರಿಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.
ಜಾನುವಾರುಗಳಿಗಾಗಿ ನಿರ್ಮಿಸಲಾಗಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ತುಂಬಿಸಲು ಪಿಡಿಓಗಳು ಕ್ರಮ ವಹಿಸಬೇಕು, ಇಓಗಳು ಈ ಕುರಿತು ಗಮನ ಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!