ಗ್ರಾಪಂ ಸದಸ್ಯನ ಮೇಲೆ ಹಲ್ಲೆ ಮಾಡಿಲ್ಲ ಎಂದು ಆಣೆ, ಪ್ರಮಾಣ

18

Get real time updates directly on you device, subscribe now.


ಕುಣಿಗಲ್: ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ ಪರ ಪ್ರಚಾರ ಮಾಡುತ್ತಿದ್ದ ಜೆಡಿಎಸ್ ಗ್ರಾಪಂ ಸದಸ್ಯನ ಮೇಲೆ ಹಲ್ಲೆ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದೇವರ ಗದ್ದಿಗೆ ಮುಂದೆ ಕರ್ಪೂರ ಹಚ್ಚಿ ಆಣೆ, ಪ್ರಮಾಣ ಮಾಡಿದ ಘಟನೆ ಶನಿವಾರ ನಡೆಯಿತು.

ತಾಲೂಕಿನ ಹುತ್ರಿದುರ್ಗಹೋಬಳಿಯ ಬಹುತೇಕ ಗ್ರಾಮದ ಜನರು ಬೆಟ್ಟಹಳ್ಳಿ ಮಠದಲ್ಲಿರುವ ಶ್ರೀಉರಿಲಿಂಗೇಶ್ವರ ಮಹಾ ಸ್ವಾಮಿಗಳ ಗದ್ದುಗೆಗೆ ನಡೆದುಕೊಳ್ಳುತ್ತಾರೆ, ಶನಿವಾರ ಬೆಳಗ್ಗೆ ಶ್ರೀಗದ್ದುಗೆ ಹೊರ ಆವರಣದಲ್ಲಿ ಹೋಬಳಿಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಆರೋಪಕ್ಕೆ ಒಳಗಾಗಿರುವ ಕಾಂಗ್ರೆಸ್ ಮುಖಂಡ ಬೋರೇಗೌಡ ಕರ್ಪೂರ, ಊದುಬತ್ತಿ ಹಚ್ಚಿ, ತಾವು ಗ್ರಾಪಂ ಸದಸ್ಯ ಮಂಜುನಾಥ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ, ಮಂಜುನಾಥ ಅವರು ಮೈತ್ರಿ ಅಭ್ಯರ್ಥಿ ಪರ ಪ್ರಚಾರನೂ ಮಾಡುತ್ತಿರಲಿಲ್ಲ, ಗ್ರಾಪಂ ಸದಸ್ಯನೊಂದಿಗೆ ಹಣಕಾಸಿನ ವ್ಯವಹಾರ ಇದ್ದು ಮೊಬೈಲ್ ಗಿರವಿ ಇಟ್ಟಿದ್ದು ಬಿಡಿಸಿಕೊಳ್ಳುವ ವಿಷಯದಲ್ಲಿ ತಗಾದೆ ನಡೆದು ಮೊದಲೆ ಅವರು ಹಲ್ಲೆ ಮಾಡಿ ಜಗಳ ಮಾಡಿದ್ದಾರೆ, ಇದರಲ್ಲಿ ಸಣ್ಣಪುಟ್ಟ ಗಾಯವಾಗಿದ್ದು, ಮಂಜುನಾಥ್ ಅವರು ನಾನು ಚಾಕುವಿನಿಂದಹಲ್ಲೆ ನಡೆಸಿದೆ ಎಂದು ಸುಳ್ಳು ಹೇಳಿದ್ದಾರೆ, ಯಾವುದೆ ರೀತಿಯಲ್ಲೂ ರಾಜಕೀಯವಾಗಿ ಹಲ್ಲೆ ಮಾಡಿಲ್ಲ ಹಾಗೆ ಮಾಡಿದ್ದರೆ ನನ್ನ ಮನೆ ಹಾಳಾಗಿ ಹೋಗಲಿ ಎಂದು ಆಣೆ, ಪ್ರಮಾಣ ಮಾಡಿದರಲ್ಲದೆ ನಿಜವಾಗಿಯೂ ರಾಜಕಾರಣಕ್ಕೆ ಹಲ್ಲೆ ಮಾಡಿದ್ದಲ್ಲಿ ಗ್ರಾಪಂ ಸದಸ್ಯ ಮಂಜುನಾಥ ಸಹ ಶ್ರೀಸ್ವಾಮಿ ಗದ್ದುಗೆ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಮುಖಂಡ ಹಾಲುವಾಗಿಲು ಸ್ವಾಮಿ ಮಾತನಾಡಿ, ಕೆಂಪನಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಇದು ಸಂಪೂರ್ಣ ವೈಯಕ್ತಿಕ ವಿಷಯವಾಗಿದೆ, ಇದನ್ನು ರಾಜಕೀಯಗೊಳಿಸಿ ಇಡೀ ರಾಜ್ಯಾದ್ಯಂತ ಸುದ್ದಿ ಮಾಡಿಸಿದ ವಿರೋಧ ಪಕ್ಷಗಳ ನಡೆ ಖಂಡನೀಯ, ಈ ಘಟನೆಯಿಂದ ಶಾಸಕ ಡಾ.ರಂಗನಾಥ್, ಸಂಸದ ಡಿ.ಕೆ.ಸುರೇಶ್ ಅವರಿಗೂ ಬೇಸರವಾಗಿದೆ, ವಿರೋಧ ಪಕ್ಷದವರು ವೈಯಕ್ತಿಯ ವಿಷಯವನ್ನು ರಾಜಕೀಯಗೊಳಿಸಿ ಲಾಭ ಪಡೆಯುತ್ತಿರುವುದು ಖಂಡನೀಯ ಎಂದರು. ಮುಖಂಡರಾದ ವಿ ಎಸ್ ಎಸ್ ಎನ್ ಬೋರೇಗೌಡ, ಸೈಯದ್ ಹಮೀದ್, ಕುಮಾರ, ಹುಚ್ಚೇಗೌಡ, ಹನುಮಂತ, ಆನಂದ, ನಾರಾಯಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!