ಸಜ್ಜನ ರಾಜಕಾರಣಿ ಎಸ್ ಪಿ ಎಂ ಗೆಲ್ಲಿಸಿ: ಜಮೀರ್

54

Get real time updates directly on you device, subscribe now.


ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುದ್ದ ಹನುಮೇಗೌಡ ಅವರು ಅತ್ಯಂತ ಕ್ರಿಯಾಶೀಲ, ಬುದ್ಧಿವಂತ ಸಂಸದರೆಂದು ಹೆಸರು ಮಾಡಿದವರು, ಇಂತಹವರು ಸಂಸದರಾಗಿ ಆಯ್ಕೆಯಾದರೆ ಕೇಂದ್ರದಲ್ಲಿ ಜನಪರ, ರೈತಪರ, ಬಡವರಪರ, ಅಲ್ಪಸಂಖ್ಯಾತರ ಪರ ಕಾಯ್ದೆ ಜಾರಿಯಾಗಲು ಸಾಧ್ಯ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ನಗರದ ಧಾನಾ ಫ್ಯಾಲೇಸ್ ನಲ್ಲಿ ಜಿಲ್ಲಾ ಕಾಂಗ್ರೆಸ್ ನ ಆಶ್ರಯದಲ್ಲಿ ಕೆಪಿಸಿಸಿ ಮೈನಾರಿಟಿ ಘಟಕದ ವತಿಯಿಂದ ಆಯೋಜಿಸಿದ್ದ ಅಲ್ಪ ಸಂಖ್ಯಾತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಎಲ್ಲಾ ಮುಸ್ಲಿಂರೂ ಪಾಲ್ಗೊಂಡು ಅತಿ ಹೆಚ್ಚಿನ ಮತಗಳನ್ನು ಮದ್ದಹನುಮೇ ಗೌಡ ರಿಗೆ ನೀಡುವ ಮೂಲಕ ಅವರನ್ನು ಲೋಕಸಭೆಗೆ ಕಳುಹಿಸುವ ಮೂಲಕ ನಮ್ಮೆಲ್ಲರ ರಕ್ಷಣೆಯ ಜೊತೆಗೆ ಸಂವಿಧಾನ ರಕ್ಷಣೆಗೂ ನಾವೆಲ್ಲರೂ ನಾಂದಿ ಹಾಡಬೇಕಾಗಿದೆ ಎಂದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ದೇಶಕ್ಕೆ ಮೋದಿ ಕೊಡುಗೆ ಏನು ಇಲ್ಲ, ಕಾಂಗ್ರೆಸ್ ಸ್ಥಾಪಿಸಿದ ನವರತ್ನ ಕಂಪನಿಗಳಲ್ಲಿ ಒಂದನ್ನು ಉಳಿಸದೆ ಮಾರಾಟ ಮಾಡಿರುವುದೇ ಬಿಜೆಪಿಯ ಸಾಧನೆ, ಇದರಿಂದ ಬಡವರು- ಶ್ರೀಮಂತರ ನಡುವಿನ ಕಂದಕ ಹೆಚ್ಚಾಗಿದೆ, ಕಾಂಗ್ರೆಸ್ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರೆ, ಬಿಜೆಪಿ ಉದ್ಯಮಿಗಳ 10 ಲಕ್ಷ ಕೋಟಿ ರೂ ಸಾಲ ಮನ್ನಾ ಮಾಡಿದೆ, ಹಾಗಾಗಿ ಬಡವರು, ದಲಿತರು, ರೈತರ ಪರವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಮುದ್ದಹನುಮೇ ಗೌಡರು ಸ್ಥಳೀಯರಾಗಿದ್ದು, ಪ್ರತಿ ದಿನ ನಮ್ಮ ಕೈಗೆ ಸಿಗಲಿದ್ದಾರೆ, ಒಂದು ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಜಯ ಗಳಿಸಿದರೆ ಅವರನ್ನು ನೋಡಲು 10 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ, ಭರಪೂರ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ವಿದೇಶದಲ್ಲಿರುವ ಕಪ್ಪು ಹಣ, ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಅಗತ್ಯ ವಸ್ತುಗಳ ಬೆಲೆ ಇಳಿಕೆ, ಇಂಧನ ಬೆಲೆಗಳ ಇಳಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳ ಸಾಧ್ಯವಾಯಿತೆ ಎಂದು ಪ್ರಶ್ನಿಸಬೇಕಿದೆ, ಸ್ಥಳೀಯರಾದ ಎಸ್.ಮುದ್ದಹನುಮೇ ಗೌಡರಿಗೆ ಮತ ನೀಡುವಂತೆ ಕೋರಿದರು.

ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಮಾತನಾಡಿ, ಮುಸ್ಲಿಂ ಸಮುದಾಯ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ, ನನ್ನ ಜೀವಿತಾವಧಿಯಲ್ಲಿ ಎಂದಿಗೂ ಧರ್ಮದ ಹೆಸರಿನಲ್ಲಿ ಜನರನ್ನು ಕಡೆಗಣಿಸಿಲ್ಲ, 2014- 19ರ ಅವಧಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸಂಸದರ ನಿಧಿಯನ್ನು ಬಳಸಿದ್ದೇನೆ, ಸಂಸತ್ತಿನಲ್ಲಿ ಎಲ್ಲಾ ಜಾತಿ, ಜನಾಂಗದ ಪರವಾಗಿಯೂ ಪ್ರಶ್ನೆಗಳನ್ನು ಕೇಳಿದ್ದೇನೆ, ವಿವಿಧ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ, ಜಿಲ್ಲೆಯಲ್ಲಿ ಶಾಂತಿ, ಸಹಬಾಳ್ವೆ ನೆಲೆಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ಡಾ.ರಫಿಕ್ ಅಹಮದ್, ಮುಖಂಡ ಮುರುಳೀಧರ ಹಾಲಪ್ಪ, ನಿಖೇತ್ರಾಜ್ ಮೌರ್ಯ, ರಾಮಕೃಷ್ಣ, ಗೋವಿಂದರಾಜು, ಇಲಾಯಿ ಸಿಖಂದರ್, ಪ್ರಭಾವತಿ, ಫರೀದಾ ಬೇಗಂ, ನಯಾಜ್ ಅಹಮದ್, ಮಹೇಶ್, ಜೆ.ಕುಮಾರ್, ಅಸ್ಲಾಂ ಪಾಷ, ಅನ್ವರ್ ಪಾಷ, ಫಯಾಜ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!