ಜನರಿಗೆ ಒಂದು ಚೊಂಬು ಕುಡಿವ ನೀರು ಕೊಡಿ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅರವಿಂದ ಲಿಂಬಾವಳಿ ವಾಗ್ದಾಳಿ

30

Get real time updates directly on you device, subscribe now.


ತುಮಕೂರು: ಬಿಜೆಪಿ ಸರ್ಕಾರ ಟೀಕಿಸಿ ಚುನಾವಣೆಯಲ್ಲಿ ಮತ ಪಡೆಯಲು ರಾಜ್ಯ ಕಾಂಗ್ರೆಸ್ ನಾಯಕರು ಬೊಂಬಿನ ಜಾಹೀರಾತು ನೀಡಿರುವುದು ಹಾಸ್ಯಾಸ್ಪದ, ಬರಗಾಲದಲ್ಲಿ ಜನರಿಗೆ ಒಂದು ಚೊಂಬು ಕುಡಿಯುವ ನೀರು ನೀಡುವ ಯೋಗ್ಯತೆಯಿಲ್ಲ ಇವರಿಗಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಲಜೀವನ್ ಮಿಷನ್ ನಲ್ಲಿ ಹಳ್ಳಿಹಳ್ಳಿಗಳ ಮನೆ ಮನೆಗಳಿಗೆ ಕುಡಿಯುವ ನೀರು ನೀಡುತ್ತಿದೆ, ಕಾಂಗ್ರೆಸ್ ಕಾರ್ಯಕ್ರಮಗಳಿಗೂ ಮೋದಿ ಸರ್ಕಾರದ ಕಾರ್ಯಕ್ರಮಗಳಿಗೂ ಇರುವ ವ್ಯತ್ಯಾಸವಿದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಎನ್ ಡಿ ಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಶನಿವಾರ ನಗರದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಅನ್ನಭಾಗ್ಯ ಯೋಜನೆ ನೀಡಿ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ, ಇವರು ಒಂದು ಕೆಜಿಯಷ್ಟೂ ಅಕ್ಕಿ ಕೊಡುತ್ತಿಲ್ಲ, ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಮೋದಿ ಸರ್ಕಾರದ ಕೊಡುಗೆ, ಅಕ್ಕಿ ಮೋದಿಯವರದ್ದು, ಚೀಲ ಸಿದ್ದರಾಮಯ್ಯ ಅವರದ್ದು ಎಂದರು.

ಈ ದೇಶದ ಅಭಿವೃದ್ಧಿ, ಶಾಂತಿ, ಸಮೃದ್ಧಿ, ಸರ್ವಜನರ ರಕ್ಷಣೆಗೆ ಮೋದಿಯವರು ಅನಿವಾರ್ಯವಾಗಿದ್ದಾರೆ ಎಂದು ದೇಶದ ಜನರಿಗೆ ಮನವರಿಕೆಯಾಗಿದೆ, ಈ ಚುನಾವಣೆಯಲ್ಲಿ ಮತದಾರರು ಎನ್ ಡಿ ಎ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುತ್ತಾರೆ, ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸೈನಿಕರ ಮೇಲೆ ಕಲ್ಲು ಎಸೆಯುತ್ತಿದ್ದ ಪರಿಸ್ಥಿತಿ ಇತ್ತು, ಅಲ್ಲಿ ಆರ್ಟಿಕಲ್ 370 ರದ್ದಾದ ಮೇಲೆ ಶಾಂತ ಪರಿಸ್ಥಿತಿ ಇದೆ, ಅಲ್ಲಿನ ಹಿಂದುಗಳಿಗೆ ಇಷ್ಟು ವರ್ಷ ಸಿಗದಿದ್ದ ಸರ್ಕಾರಿ ಸೌಲಭ್ಯ ದೊರೆಯುತ್ತಿವೆ, ಇದು ಮೋದಿಯವರ ಶಕ್ತಿ, ದೇಶದ ಬಗ್ಗೆ ಒಬ್ಬ ನೇತಾರನಿಗೆ ಇರಬೇಕಾದ ಜವಾಬ್ದಾರಿ ಎಂದರು.

ಹೆಣ್ಣು ಮಕ್ಕಳ ಸುರಕ್ಷತೆ, ಮಹಿಳಾ ಸಬಲೀಕರಣ, ಅಭಿವೃದ್ಧಿಯಲ್ಲೂ ಮೋದಿ ಸರ್ಕಾರ ಮುಂದಿದೆ, ದೇಶದ ಆರ್ಥಿಕ ಸ್ಥಿತಿ ಹೆಚ್ಚು ಮಾಡಲು, ನಾಗರಿಕ ಸೌಕರ್ಯ ಹೆಚ್ಚಿಸಲು ಮೋದಿಯವರು ಶ್ರಮ ವಹಿಸಿದ್ದಾರೆ, ಜಗತ್ತಿನ ಬಲಿಷ್ಠ ರಾಷ್ಟ್ರಗಳೆದುರು ಭಾರತ ಹೆಮ್ಮೆ ಪಡೆಉವ ರೀತಿಯಲ್ಲಿ ದೇಶ ಮುನ್ನಡೆಸುತ್ತಿದ್ದಾರೆ, ದೇಶ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಮೋದಿಯವರು ಮತ್ತೆ ಪ್ರಧಾನಿಯಾಗಲು ಚುನಾವಣೆಯಲ್ಲಿ ವಿ.ಸೋಮಣ್ಣ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಅರವಿಂದ ಲಿಂಬಾವಳಿ ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪ್ರಧಾನಿ ಮೋದಿಯವರು ಭಾರತಕ್ಕೆ ಘನತೆ, ಗೌರವ ತಂದು ಕೊಟ್ಟಿದ್ದಾರೆ, ಓಬಿಸಿ, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಕ್ತಿ ತುಂಬಿದ್ದಾರೆ, ಇವತ್ತಿನ ಪರಿಸ್ಥಿತಿಯಲ್ಲಿ ದೇಶಕ್ಕೆ ಮೋದಿಯವರು ಅನಿವಾರ್ಯ, ಅವರನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿಯ ಬರ್ಬರ ಹತ್ಯೆ ಅಮಾನವೀಯ, ಹಿಂದುಗಳಿಗೆ ಈ ರಾಷ್ಟ್ರ ಬಿಟ್ಟರೆ ಬೇರೆ ಜಾಗ ಇಲ್ಲ, ದೇಶದ ಜನರ ರಕ್ಷಣೆಗೆ, ಗೌರವವಾಗಿ ಬದುಕಲು ಮೋದಿಯವರು ಇರಲೇಬೇಕು ಎಂದ ಶಾಸಕರು, ಮೋದಿಯವರನ್ನು ಉಳಿಸಿಕೊಳ್ಳಲು ತುಮಕೂರಿನಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಬೇಕು, ಸೋಮಣ್ಣನವರು ಪಾದರಸದಂತೆ ಸದಾ ಕ್ರಿಯಾಶೀಲರಾಗಿರುತ್ತಾರೆ, ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದರು.

ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಓಂಕಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರ ವಿಚಾರವಿರಲಿ ಜನನಾಯಕರಿಗೂ ರಕ್ಷಣೆಯಿಲ್ಲ, 2020ರಲ್ಲಿ ನಮ್ಮ ಭೋವಿ ಸಮಾಜದ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಅಲ್ಪಸಂಖ್ಯಾತ ದುಷ್ಕರ್ಮಿಗಳು ನುಗ್ಗಿ ಬೆಂಕಿ ಹಚ್ಚಿದರು, ತಮ್ಮದೇ ಪಕ್ಷದ ಶಾಸಕರನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಲಿಲ್ಲ, ಆರೋಪಿಗಳ ಪರವಾಗಿ ಪಕ್ಷದ ಅಧ್ಯಕ್ಷರು ಮಾತನಾಡಿದರು, ಇಂತಹ ಕಾಂಗ್ರೆಸ್ ಪಕ್ಷಕ್ಕೆ ಭೋವಿ ಸಮಾಜದವರು ಒಂದು ವೋಟನ್ನೂ ಹಾಕಬಾರದು ಎಂದರು.

ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಮುನಿರಾಜು, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗಂಗಮ್ಮ ಆನಂದ್ ಕುಮಾರ್, ಧನಲಕ್ಷ್ಮಿ ನಟರಾಜು, ಮುಖಂಡರಾದ ಶಿವಕುಮಾರ್, ಆಶಾ ತ್ರಿಲೋಚನ್, ಮಂಜುನಾಥ್, ವಿಶ್ವನಾಥ್, ಜಯಚಂದ್ರಪ್ಪ, ಪುರುಷೋತ್ತಮ್, ಮುನೇಶ್, ಕೃಷ್ಣಮೂರ್ತಿ, ರಂಗಸ್ವಾಮಿ, ಚಂದ್ರಣ್ಣ, ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!