ಪೆನ್ ಡ್ರೈವ್ ನ ನೀಚ ಕೃತ್ಯದ ಹಿಂದೆ ಡಿಕೆಶಿ ಕೈ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಪ್ರತಿಭಟನೆ

22

Get real time updates directly on you device, subscribe now.


ತುಮಕೂರು: ಪೆನ್ ಡ್ರೈವ್ ಹಾಗೂ ಅಶ್ಲೀಲ ವೀಡಿಯೋ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರ ಕುಟುಂಬದ ವರ್ಚಸ್ಸು ಕುಂದಿಸಿ, ಹೆಣ್ಣುಮಕ್ಕಳ ಮಾನ ಹರಾಜು ಹಾಕುತ್ತಿರುವ ಪ್ರಕರಣದ ಹಿಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಜೆಡಿಎಸ್ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಮುಖಂಡರು, ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಇತ್ತೀಚೆಗೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಲೈಂಗಿಕ ಹಗರಣ ಮತ್ತು ಅದನ್ನು ಪೆನ್ ಡ್ರೈವ್ ಹಾಗೂ ಅಶ್ಲೀಲ ವೀಡಿಯೋ ಮೂಲಕ ರಾಜ್ಯಾದ್ಯಂತ ಹಂಚುತ್ತಾ ಸಂತ್ರಸ್ತ ಹೆಣ್ಣುಮಕ್ಕಳು ಹಾಗೂ ಅವರ ಕುಟುಂಬದವರ ಮಾನ ಕಳೆಯುತ್ತಿರುವ ಪ್ರಕರಣದ ಹಿಂದಿನ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಹೆಣ್ಣು ಮಕ್ಕಳ ಅಶ್ಲೀಲ ವೀಡಿಯೋ, ಪೆನ್ ಡ್ರೈವ್ ಹಂಚಿರುವುದು ಶಿಕ್ಷಾರ್ಹ ಅಪರಾಧವಾಗಿದೆ, ಇದರ ಹಿಂದಿನ ರೂವಾರಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬುದು ಜಗಜ್ಜಾಹಿರಾಗಿದೆ, ಇದಕ್ಕೆ ಸಂಬಂಧಪಟ್ಟಂತೆ ವಕೀಲ ದೇವರಾಜೇಗೌಡರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಇಂತಹ ನೀಚ ಕೆಲಸಕ್ಕೆ ಇಳಿದಿರುವುದು ಖಂಡನೀಯ, ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ, ಅವರ ಮಾನ ಕಾಪಾಡಬೇಕಾದವರೇ ಅವರ ಮಾನ ಹರಾಜು ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ, ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಶಿಕ್ಷೆ ಆಗಬೇಕು ಎಂದು ಆರ್.ಸಿ.ಆಂಜನಪ್ಪ ಒತ್ತಾಯಿಸಿದರು.
ಈ ಚುನಾವಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರ ವರ್ಚಸ್ಸು ಕುಂದಿಸಿ, ಜೆಡಿಎಸ್ ಗೆ ಕಳಂಕ ತರುವುದು ಅವರ ಉದ್ದೇಶವಾಗಿದೆ, ಅಲ್ಲದೆ ಮೈತ್ರಿ ಪಕ್ಷವಾಗಿರುವ ಬಿಜೆಪಿಗೂ ಮುಜುಗರ ತರುವ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಲೈಂಗಿಕ ಹಗರಣವನ್ನು ಜೆಡಿಎಸ್ ನಾಯಕರ ತೇಜೋವಧೆಗೆ ಬಳಿಸಿಕೊಂಡು, ಸಂತ್ರಸ್ತ ಹೆಣ್ಣುಮಕ್ಕಳ ಮರ್ಯಾದೆ ಕಳೆಯುವ ಕೃತ್ಯದ ಹಿಂದಿರುವ, ಹೀನ ಕೃತ್ಯವೆಸಗಿರುವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಜೆಡಿಎಸ್ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತದೆ ಎಂದರು.

ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಪೆನ್ ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವೀಡಿಯೋಗಳನ್ನು ಹಂಚಿ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿದ ಕೃತ್ಯದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಲು ಪ್ರಕರಣ ಸಿಬಿಐಗೆ ವಹಿಸಬೇಕು, ದೇವೇಗೌಡರು, ಕುಮಾರ ಸ್ವಾಮಿಯವರ ಕುಟುಂಬವನ್ನು ತೇಜೋವಧೆ ಮಾಡುವ ನೀಚ ಕೆಲಸಕ್ಕಿಳಿದ ಡಿ.ಕೆ.ಶಿವಕುಮಾರ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ವಿಜಯ್ ಗೌಡ, ಮುಖಂಡರಾದ ಗುಬ್ಬಿ ನಾಗರಾಜು, ಎಸ್.ಆರ್.ಗೌಡ, ಸೋಲಾರ್ ಕೃಷ್ಣಮೂರ್ತಿ, ಕೊಂಡವಾಡಿ ಚಂದ್ರಶೇಖರ್, ಟಿ.ಕೆ.ನರಸಿಂಹ ಮೂರ್ತಿ, ಹೆಚ್.ಡಿ.ಕೆ.ಮಂಜುನಾಥ್, ಟಿ.ಜಿ.ನರಸಿಂಹರಾಜು, ಮುದಿಮಡು ರಂಗಸ್ವಾಮಯ್ಯ, ದೊಡೇರಿ ಬಸವರಾಜು, ಲಕ್ಷ್ಮಮ್ಮ, ಲೀಲಾವತಿ, ತಾಹಿರಾಬಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!