ದೇಶಕ್ಕೆ ರಾಜೀವ್ ಗಾಂಧಿ ಕೊಡುಗೆ ಅಪಾರ

20

Get real time updates directly on you device, subscribe now.


ತುಮಕೂರು: ಯುವ ಜನತೆಯೇ ದೇಶದ ಭವಿಷ್ಯ ಎಂದು ನಂಬಿದ್ದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸುವ ಮೂಲಕ ಈ ದೇಶದ ಯುವಕರಿಗೆ ಎಲ್ಲಾ ರೀತಿಯ ಅವಕಾಶ ಕಲ್ಪಿಸಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಯುವ ಜನತೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಮೋದಿ, ಮೋದಿ ಅಂತ ಹೋಗಿ ದುಡಿಯಲು ಉದ್ಯೋಗವೂ ಇಲ್ಲದೆ ಅಬ್ಬೆಪಾರಿಗಳಂತೆ ಅಲೆಯುವಂತಹ ಸ್ಥಿತಿ ತಂದುಕೊಂಡಿರುವುದು ದುರ್ದೈವದ ಸಂಗತಿ ಎಂದರು.

ಕಾಂಗ್ರೆಸ್ ಪಕ್ಷದ ಇಂದಿನ ಹೀನಾಯ ಸ್ಥಿತಿಗೆ ಕಾಂಗ್ರೆಸ್ ಪಕ್ಷದವರೇ ಕಾರಣ, ಪಕ್ಷದಲ್ಲಿ ಯುವ ಘಟಕಗಳಿಗೆ ಹೆಚ್ಚು ಒತ್ತು ನೀಡದ ಪರಿಣಾಮ ಎನ್ ಎಸ್ ಯುಐ ಮತ್ತು ಯುವ ಕಾಂಗ್ರೆಸ್ ಘಟಕಗಳು ನಾಮಕಾವಸ್ಥೆಗೆ ಅಸ್ಥಿತ್ವದಲ್ಲಿವೆ, ಬಿಜೆಪಿಯಲ್ಲಿ ಯುವ ಮೋರ್ಚಾ ಮತ್ತು ಎಬಿವಿಪಿಗೆ ಒತ್ತು ನೀಡುವಂತೆ, ಯುವಕರಿಗೆ ಹೆಚ್ಚಿನ ಅವಕಾಶ ದೊರೆಯಬೇಕು, ಆಗ ಮಾತ್ರ ಪಕ್ಷವನ್ನು ತಳಮಟ್ಟದಲ್ಲಿ ಬಲವಾಗಿ ಕಟ್ಟಲು ಸಾಧ್ಯ, ಈ ನಿಟ್ಟಿನಲ್ಲಿ ಎಲ್ಲಾ ನಾಯಕರು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದೆ ಎಂದು ಕೆಂಚಮಾರಯ್ಯ ನುಡಿದರು.
ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಹಲವಾರು ಯೋಜನೆ ಜಾರಿಗೆ ತಂದು ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದು ರಾಜೀವ್ ಗಾಂಧಿ, ಆದರೆ ಇಂದು ಕೇವಲ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಹೆಸರು ಬದಲಾಯಿಸಿ ಪ್ರಚಾರ ಪಡೆದುಕೊಂಡಿತ್ತು, ದೇಶವನ್ನು ವೈಜ್ಞಾನಿಕವಾಗಿ ಕಟ್ಟಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ರಾಜೀವ್ ಗಾಂಧಿ ಶೋಷಿತ ಸಮುದಾಯಗಳಿಗೆ ಅಧಿಕಾರ ಸಿಗಬೇಕು ಎಂಬ ಕಾರಣಕ್ಕೆ 73/74ನೇ ಸಂವಿಧಾನ ತಿದ್ದುಪಡಿ ತಂದು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು, ಇಂತಹ ಮಹಾನ್ ವ್ಯಕ್ತಿ ಮಾನವ ಬಾಂಬ್ಗೆ ಬಲಿಯಾಗಿದ್ದು ದುರ್ದೈವದ ಸಂಗತಿ, ಅವರ ಆದರ್ಶಗಳನ್ನು ನಾವು ಪಾಲಿಸಬೇಕಿದೆ ಎಂದರು.

ಹಿರಿಯ ಮುಖಂಡ ರೇವಣಸಿದ್ದಯ್ಯ ಮಾತನಾಡಿ, ನೆಹರು, ಇಂದಿರಾಗಾಂಧಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ, ಪಂಚ ವಾರ್ಷಿಕ ಯೋಜನೆಗಳ ಮೂಲಕ ನಿರುದ್ಯೋಗ ನಿರ್ಮೂಲನೆಗಾಗಿ ಕೈಗಾರಿಕೆಗಳ ಬೆಳವಣಿಗೆ, ಭಾರತೀಯ ಸೈನ್ಯ ಬಲಪಡಿಸುವ ಕೆಲಸಕ್ಕೆ ಮುಂದಾದವರು ರಾಜೀವ್ಗಾಂಧಿ, ಅಂದು ಆರಂಭವಾದ ಕೈಗಾರಿಕೆಗಳನ್ನು ಮಾರಾಟ ಮಾಡಿ, ವಿಶ್ವಗುರು ಎನಿಸಿಕೊಳುತ್ತಿರುವ ಮೋದಿಯ ನಡೆಯನ್ನು ಯುವ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಡಾ.ರಫಿಕ್ ಅಹಮದ್ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕು, ಅವರು ದೇಶದ ಅಭಿವೃದ್ಧಿಯ ಪಾಲು ಪಡೆಯಬೇಕು ಎಂಬ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದು ಶೇ.33ರ ಮೀಸಲಾತಿ ಕಲ್ಪಿಸಿದ್ದು ರಾಜೀವ್ ಗಾಂಧಿ, ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಬಲ ಪಡಿಸಿ ಹೆಚ್ಚಿನ ಸೀಟು ಗೆದ್ದು ಅಧಿಕಾರ ಹಿಡಿಯುವತ್ತ ಮುನ್ನೆಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಮಂತ್ರಿ ಹುದ್ದೆಯ ಜವಾಬ್ದಾರಿ ಪಡೆದು ದೇಶಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ದಿ.ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶವನ್ನು ಬೆಳೆಸಬೇಕೆಂಬ ಆಶಯದ ದೊಂದಿಗೆ ಕಂಪ್ಯೂಟರ್ ತಂತ್ರಜ್ಞಾನದ ಜೊತೆಗೆ ಮೊಬೈಲ್ ಗೂ ಒತ್ತು ನೀಡಿದ ಪರಿಣಾಮ ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಯನ್ನು ಕ್ಷಣಾರ್ಧದಲ್ಲಿ ನೋಡುವಂತಾಗಿದೆ, ಐಟಿ, ಬಿಟಿಗೆ ಉತ್ತೇಜನ ನೀಡಿದ ಪರಿಣಾಮ ಭಾರತೀಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ಎಸ್ ಟಿ ಘಟಕ ಕುಮಾರ ಸ್ವಾಮಿ, ಬ್ಲಾಕ್ ಅಧ್ಯಕ್ಷ ಫಯಾಜ್, ಮಹೇಶ್, ಉಪಾಧ್ಯಕ್ಷ ನ್ಯಾತೇಗೌಡ, ಮಾರುತಿ ಗಂಗಹನುಮಯ್ಯ, ಆಡಿಟರ್ ಸುಲ್ತಾನ್ ಮಹಮದ್, ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ಪಾಲಿಕೆ ಮಾಜಿ ನಯಾಜ್ ಅಹಮದ್, ಮರಿಚನ್ನಮ್ಮ, ಭಾಗ್ಯಮ್ಮ, ಸುಜಾತ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!