ವಿದ್ಯಾರ್ಥಿಗಳು ಸಂಶೋಧನಯತ್ತ ಆಸಕ್ತರಾಗಲಿ

20

Get real time updates directly on you device, subscribe now.


ತುಮಕೂರು: ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯಕ್ರಮ ಕಲಿಕೆ ಸೀಮಿತವಾಗದೆ ಹೊಸ ಹೊಸ ಸಂಶೋಧನಾತ್ಮಕ ವಿಷಯಗಳ ಕಲಿಕೆ ತುಂಬಾ ಮುಖ್ಯ, ಅನಗತ್ಯ ವಿಷಯಗಳತ್ತ ಮನಸ್ಸು ಜಾರುವುದಕ್ಕೆ ಬಿಡದೆ ಸಾಧನೆ ಮಾಡುವತ್ತ ಗಮನಹರಿಸಿ ಎಂದು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕನ್ನಿಕ ಪರಮೇಶ್ವರಿ ಕರೆ ನೀಡಿದರು.

ನಗರದ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ತಾಂತ್ರಿಕ ಮಾದರಿ ಪ್ರದರ್ಶನ ಟೆಕ್ನೋಡಿಯಾ- 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧನೆ ಮಾಡುವಂತ ಪ್ರತಿಭಾವಂತ ವಿದ್ಯಾರ್ಥಿಗಳ ಬೆನ್ನಿಗೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಿಲ್ಲುತ್ತದೆ, ಹೊಸ ಆವಿಷ್ಕಾರ ಮಾಡುವ ಮನಸ್ಸಿದ್ದರೆ ಶಿಕ್ಷಕರೊಂದಿಗೆ ಹಂಚಿಕೊಳ್ಳಿ, ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ, ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯ ಕ್ರಮ ಕಲಿಕೆ ಮಾತ್ರವಲ್ಲಿ ಹೊಸ ಹೊಸ ವಿಷಯಗಳ ಕಲಿಕೆ ತುಂಬಾ ಮುಖ್ಯಎಂದು ಕನ್ನಿಕಾ ಪರಮೇಶ್ವರಿ ನುಡಿದರು.
ಕಾಲೇಜಿನಲ್ಲಿ ಇದ್ದಾಗ ಬೇರೆ ಬೇರೆ ವಿಷಯಗಳತ್ತ ಮನಸ್ಸು ಜಾರೋದು ಸಹಜ, ಆದರೆ ಅದೆಲ್ಲವನ್ನು ಬದಿಗೊತ್ತಿ ಸಾಧನೆ ಮಾಡಿದರೆ ಅದು ನಿಮ್ಮನ್ನ ಹುಡುಕಿಕೊಂಡು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯಅತಿಥಿಯಾಗಿದ್ದ ತುಮಕೂರು ಮಹಾ ನಗರ ಪಾಲಿಕೆ ಆಯುಕ್ತೆ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸಿಇಒ ಅಶ್ವಿಜ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿನ ಸಾಮಥ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ತುಮಕೂರು ಮಹಾ ನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಸದ್ಯದಲ್ಲೇ ಸೂಕ್ತ ವೇದಿಕೆ ಕಲ್ಪಿಸಲಿದ್ದು, ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಧನೆ ಎಂಬುದು ಯಾರ ಮನೆಯ ಸ್ವತ್ತಲ್ಲ, ಯಾರಿಗೆ ಏನನ್ನಾದರು ಸಾಧನೆ ಮಾಡಬೇಕು ಎಂಬ ಹಂಬಲವಿರುತ್ತದೋ ಅವರು ಸಾಧನೆ ಮಾಡುತ್ತಾರೆ, ವಿದ್ಯಾರ್ಥಿ ಜೀವನ ಸಾಧನೆ ಮಾಡಲು ಸೂಕ್ತ ಸಮಯ, ಈಗಿನಿಂದಲೇ ನಿಮ್ಮಲ್ಲಿರುವ ಆವಿಷ್ಕಾರಗಳತ್ತ ಗಮನ ಹರಿಸಿ ಮುನ್ನಡೆಯಬೇಕು ಎಂದು ಕಿವಿಮಾತು ತಿಳಿಸಿದರು.

ನಗರದ ಕುಂದು ಕೊರೆತೆ ಬಗೆಹರಿಸಲು ಸಾರ್ವಜನಿಕರು ಕೂಡ ಸಹಕಾರ ನೀಡಬೇಕು, ಅದೇ ರೀತಿ ವಿದ್ಯಾರ್ಥಿಗಳು ಕೂಡ ತಮ್ಮಲ್ಲಿರುವ ವಿಶಿಷ್ಟ ಆಲೋಚನೆಗಳನ್ನು ಮಹಾ ನಗರಪಾಲಿಕೆಯೊಂದಿಗೆ ಹಂಚಿಕೊಳ್ಳುವುದರಿಂದ ತುಮಕೂರಿನಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಶ್ವಿಜ ನುಡಿದರು.
ಸಿದ್ದಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಜಿಇ ಹೆಲ್ತ್ ಕೇರ್ನ ಸೀನಿಯರ್ ಮ್ಯಾನೇಜರ್ ಚೇತನ್ ಸಂಪಿಗೆ ಮಾತನಾಡಿ, ಅವಶ್ಯಕತೆಗಳು ಇದ್ದಾಗ ಮಾತ್ರ ಹೊಸ ಹೊಸ ಆವಿಷ್ಕಾರ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಸಿದ್ಧಾರ್ಥ ಸಂಸ್ಥೆಯು ವಿದ್ಯಾರ್ಥಿಗಳಲ್ಲಿನ ಆವಿಷ್ಕಾರಗಳಿಗೆ ಟೆಕ್ನೋಡಿಯಾ ರೀತಿಯ ಕಾರ್ಯಕ್ರಮಗಳಿಂದ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಹೇ ವಿವಿಯ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ. ಎಂ.ಝಡ್. ಕುರಿಯನ್, ಎಸ್ ಎಸ್ ಐಟಿಯ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಹಾಗೂ ಟೆಕ್ನೋಡಿಯಾ ಸಂಚಾಲಕ ಡಾ.ಎಲ್. ಸಂಜೀವ್ ಕುಮಾರ್, ಸಮಿತಿ ಸದಸ್ಯ ಡಾ.ಚಿದಾನಂದ ಮೂರ್ತಿ, ಡಾ.ಗುರುಪ್ರಸಾದ್, ಡಾ.ಪ್ರದೀಪ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಇದ್ದರು. ರಾಜ್ಯದ ನಾನಾ ಇಂಜಿನಯರಿಂಗ್ ಕಾಲೇಜಿನ ವಿಧ್ಯಾರ್ಥಿಗಳು ತಮ್ಮ ತಾಂತ್ರಿಕ ಮಾದರಿ ಪ್ರದರ್ಶಿಸಿದರು.

Get real time updates directly on you device, subscribe now.

Comments are closed.

error: Content is protected !!