ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿ ಪಾದಚಾರಿ ಮಾರ್ಗ: ಶಾಸಕ

24

Get real time updates directly on you device, subscribe now.


ತುಮಕೂರು: ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ರೈಲ್ವೆ ಹಳಿ ದಾಟಿ ಮತ್ತೊಂದು ಪ್ರದೇಶಕ್ಕೆ ಹೋಗಿ ಬರಲು ತೊಂದರೆಯಾಗಿದೆ, ಈ ಭಾಗದಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಅಗತ್ಯವಿದೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಪ್ರದೇಶದಲ್ಲಿ ತಾಂತ್ರಿಕವಾಗಿ ಸೂಕ್ತ ಜಾಗದಲ್ಲಿ ಪಾದಚಾರಿಗಳ ಸಂಚಾರಕ್ಕಾಗಿ ಅಂಡರ್ ಪಾಸ್ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ನಾಗರಿಕರ ಸಮಸ್ಯೆ ಆಲಿಸಿದರು, ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ನಲ್ಲಿ ವಾಹನ ಸಂಚಾರದ ಒತ್ತಡವಿದೆ, ಇಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲಾಗುತ್ತಿಲ್ಲ, ಶಾಲಾ ಮಕ್ಕಳು, ವಯೋವೃದ್ಧರು ಅಂಡರ್ ಪಾಸ್ ನಲ್ಲಿ ಓಡಾಡಲಾಗುತ್ತಿಲ್ಲ, ಹೀಗಾಗಿ ದೈನಂದಿನ ಕೆಲಸ ಕಾರ್ಯಗಳಿಗೆ ರೈಲ್ವೆ ಹಳಿ ದಾಟಿ ಇನ್ನೊಂದು ಭಾಗಕ್ಕೆ ಹೋಗಿ ಬರುವುದು ತೊಂದರೆಯಾಗಿದೆ ಎಂದು ನಾಗರಿಕರು ಶಾಸಕರಲ್ಲಿ ಸಮಸ್ಯೆ ಹೇಳಿಕೊಂಡರು.

ಈ ಭಾಗದಲ್ಲಿ ರೈಲ್ವೆ ಇಲಾಖೆಯವರು ಹಳಿಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ, ಇದರಿಂದ ವಿಜಯ ನಗರ ಸುತ್ತಮುತ್ತಲ ಪ್ರದೇಶದ ಎಸ್.ಎಸ್.ಪುರಂ, ಎಸ್ ಐಟಿ ಪ್ರದೇಶಗಳಿಗೆ ಹೋಗಲಾಗುತ್ತಿಲ್ಲ, ಹೀಗಾಗಿ ಈ ಭಾಗದಲ್ಲಿ ರೈಲ್ವೆ ಹಳಿ ದಾಟಿ ಹೋಗಲು ಪಾದಚಾರಿ ಮಾರ್ಗ ನಿರ್ಮಾಣ ಮಾಡುವಂತೆ ನಾಗರಿಕರು ಶಾಸಕರಿಗೆ ಮನವಿ ಮಾಡಿದರು.
ರೈಲ್ವೆ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಭಾಗದ ಸೂಕ್ತ ಸ್ಥಳದಲ್ಲಿ ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ನಿರ್ಮಿಸಿರುವ ಅಂಡರ್ ಪಾಸ್ ಮಾದರಿಯಲ್ಲಿ ಇಲ್ಲಿಯೂ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕರು ಹೇಳಿದರು.

ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ನಲ್ಲಿರುವ ಫುಟ್ ಪಾತ್ ಸುಸಜ್ಜಿತಗೊಳಿಸಿ ಗ್ರಿಲ್ ಅಳವಡಿಸಿ ಪಾದಚಾರಿಗಳು ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಿಕೊಡುವುದಾಗಿಯೂ ಶಾಸಕರು ಭರವಸೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮುಖಂಡರಾದ ದೇವರಾಜು, ದೊಡ್ಡಯ್ಯ, ಶೈಲಾ ನಾಗರಾಜು, ಮರಳಿ, ಪುಟ್ಟರಾಜು, ಮೂರ್ತಿ, ಹೆಚ್ ಎಂಎಸ್ ಕುಮಾರ್, ಹೆಚ್ ಎಂಟಿ ಜಗದೀಶ್, ಚಂದ್ರಶೇಖರ್, ನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ವಿನಯ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!