ಕಾನೂನು ಅರಿತರೆ ದೌರ್ಜನ್ಯ ತಡೆಯಲು ಸಾಧ್ಯ

ಪ.ಜಾತಿ, ಪ.ಪಂಗಡದ ಸಮುದಾಯ ಅರಿವು ಹೊಂದಲಿ

30

Get real time updates directly on you device, subscribe now.


ಕೊರಟಗೆರೆ: ಪ.ಜಾತಿ ಮತ್ತು ಪ.ಪಂಗಡಗಳ ಸಮುದಾಯದ ನೊಂದಂತಹ ವ್ಯಕ್ತಿಗಳಿಗೆ ಕಾನೂನಿನ ಬಗ್ಗೆ ತಿಳಿಸಿ ಧೈರ್ಯ ತುಂಬುವು ಕೆಲಸವನ್ನು ಈ ಕಾನೂನು ವೇದಿಕೆ ಮಾಡಿದೆ, ಕಾನೂನಿನ ಬಗ್ಗೆ ತಿಳಿಯದಿದ್ದರೆ ಕಷ್ಟ ಕಾಲದಲ್ಲಿ ನ್ಯಾಯ ಪಡೆದುಕೊಳ್ಳುವುದು ಅಸಾಧ್ಯ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಪರ್ಯಾಯ ಕಾನೂನು ವೇದಿಕೆಯಿಂದ ಎಸ್ಸಿ, ಎಸ್ಟಿ ಸಮುದಾಯಗಳ ಮೇಲಿನ ದೌರ್ಜನ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯಗಳ ಮೇಲೆ ಇತರೆ ಸಮುದಾಯಗಳಿಂದ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಸಿಗುವಂತೆ ಮಾಡಲು ಈ ವೇದಿಕೆ ಇರುವುದು, ಗ್ರಾಪಂ ಮಟ್ಟದಲ್ಲಿ ದಲಿತರನ್ನು ಜಾತಿಯ ಕಡೆಗಣನೆಯಿಂದ ಕಾಣುವುದನ್ನು ಸಮುದಾಯದ ಮುಖಂಡರು ಆರೋಪ ಮಾಡಿದ್ದಾರೆ, ಭ್ರಷ್ಟ ಅಧಿಕಾರಿಗಳಿಂದ ಸಮುದಾಯಕ್ಕೆ ನ್ಯಾಯ ಸಿಗದಂತಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಲ ಹೊರಲು ಗುತ್ತಿಗೆದಾರನ ಮುಖಾಂತರ ದಲಿತರನ್ನು ಹೆಚ್ಚಾಗಿ ಇಂತಹ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ, ಅಂತವರಿಗೆ ಕಾನೂನಿನ ರೀತಿಯ ಶಿಕ್ಷೆಗೆ ಒಳಪಡಿಸಿ ಸಮುದಾಯಗಳಿಗೆ ನ್ಯಾಯ ದೊರಕುವಂತೆ ಮಾಡುವುದೇ ನಮ್ಮ ಗುರಿ, ಆದ್ದರಿಂದ ಇತರೆ ಸಮುದಾಯಗಳ ಶೋಷಣೆಗೆ ಒಳಗಾಗದೆ ಸಂವಿಧಾನದ ಪ್ರತಿಯೊಂದು ಕಾನೂನಿನ ಬಗ್ಗೆ ಅರಿತು ಸಮಾಜದಲ್ಲಿ ಜೀವನ ನಡೆಸುವುದನ್ನು ಕಲಿಯಬೇಕು ಎಂದು ಹೇಳಿದರು.

ಹೈಕೋರ್ಟ್ ವಕೀಲ ನರಸಿಂಹಪ್ಪ ಟಿ.ವಿ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡಗಳ ಮೇಲೆ ಸಮಾಜದಲ್ಲಿ ದೌರ್ಜನ್ಯ ಹೆಚ್ಚಾಗುತ್ತಿವೆ, ಸರ್ಕಾರದ ವರದಿಯಲ್ಲಿ ಹೆಚ್ಚಾಗಿರುವುದೇ ಎಸ್ಸಿ, ಎಸ್ಟಿ ಪ್ರಕರಣ, ಸಮುದಾಯ ನ್ಯಾಯ ಸಿಗದಿರಲು ಅಧಿಕಾರಿಗಳ ಬೇಜಾವಬ್ದಾರಿತನ ಕಾರಣವಾಗಿದೆ, ಈ ಸಮುದಾಯಗಳಿಗೆ ಕಾನೂನಿನಲ್ಲಿರುವ ಎಲ್ಲಾ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ಜಿಲ್ಲೆಯಲ್ಲಿ ಸಂಬಂಧಿಸಿದ ಎಲ್ಲಾ ತಾಲೂಕಿನ ಮುಖಂಡರನ್ನು ಒಟ್ಟುಗೂಡಿಸಿ ವರ್ಷಕ್ಕೆ 2ರಿಂದ 3ಸಭೆ ನಡೆಸಬೇಕಾಗಿರುವುದು ಜಿಲ್ಲಾಧಿಕಾರಿಗಳ ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ದಲಿತ ಕುಟುಂಬದವರು ಇತರೆ ಸಮುದಾಯ ವ್ಯಕ್ತಿಗಳನ್ನು ಮದುವೆಯಾದರೆ, ದಲಿತರ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ದೌರ್ಜನ್ಯ ಪೊಲೀಸ್ ಠಾಣೆ ಮಟ್ಟಿಲೇರಿದರು ಪ್ರಭಾವಿ ವ್ಯಕ್ತಿಗಳಿಂದ ಕಾನೂನು ಅರಿಯದೆ ಇರುವಂತಹ ಮುಗ್ಧ ಜನರಿಗೆ ನ್ಯಾಯ ಸಿಗದಂತಾಗಿದೆ, ಎಲ್ಲಾ ತಾಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು, ಸಮುದಾಯಗಳು ಸಹ ಕಡ್ಡಾಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾನೂನಿನ ಬಗ್ಗೆ ಅರಿಯುವುದು ಸೂಕ್ತವಾಗಿದೆ ಎಂದರು.

ರೆಡ್ಸ್ ಸಂಸ್ಥೆ ಜಿಲ್ಲಾ ಸಂಯೋಜಕ ರಂಗಯ್ಯ ಮಾತನಾಡಿ, ಎಲ್ಲಿಯವರೆಗೂ ಕಾನೂನಿನ ಬಗ್ಗೆ ತಿಳಿಯುದಿಲ್ಲವೂ ಅಲ್ಲಿಯವರೆಗೂ ಇತರೆ ಸಮುದಾಯಗಳ ವ್ಯಕ್ತಿಗಳ ದೌರ್ಜನ್ಯ ನಡೆಯುತ್ತಲೇ ಇರುತ್ತದೆ, ಪ್ರತಿಯೊಬ್ಬರು ಕಾನೂನಿನ ಬಗ್ಗೆ ಕನಿಷ್ಟ ಅರಿವು ಹೊಂದಿರಬೇಕು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರ್ಯಾಯ ಕಾನೂನು ವೇದಿಕೆಯ ಸಿದ್ದಾರ್ಥ್ ಜೋಷಿ, ತಿರುಮಲಯ್ಯ, ಕೃಷ್ಣಮೂರ್ತಿ, ಮನೋಜ್ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!