ಸಾಹಿತ್ಯ ಕ್ಷೇತ್ರಕ್ಕೆ ಕಮಲಾ ಕೊಡುಗೆ ಅಪಾರ

ನಾಡೋಜ ಡಾ.ಕಮಲಾ ಹಂಪನಾಗೆ ನುಡಿನಮನ

30

Get real time updates directly on you device, subscribe now.


ತುಮಕೂರು: ನಾಡೋಜ ಡಾ.ಕಮಲಾ ಹಂಪನಾ ಅವರಿಗೆ ಜಿಲ್ಲಾ ಕಸಾಪದಿಂದ ನುಡಿನಮನ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಕಮಲಾ ಹಂಪನಾ ಅವರು ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದು, ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ, ಅವರ ಧೀರ್ಘ ಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು ಮೂಡು ಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಎಂದರು.

ಸರ್ಕಾರದ ಪುರಸ್ಕಾರವಾದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿ ಡಾ.ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು, ಅವರ ಸಮರ್ಗ ಸಾಹಿತ್ಯ ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರ ಬಂದಿವೆ, ಸಂಶೋಧನೆ ಅವರ ಮೊದಲ ಆಯ್ಕೆ, ಪ್ರಕಟವಾದ 60 ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನ ಕೃತಿಗಳೂ ಸೇರಿವೆ, ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿ ಶಕ್ತಿಯ ವಿನ್ಯಾಸ ಕೆನೆ ಕಟ್ಟಿದೆ, ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು, ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ ಎಂದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಸುಮಾರು 80ಕ್ಕೂ ಹೆಚ್ಚು ವಿದ್ವತ್ ಪೂರ್ಣ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಡಾ. ಕಮಲಾ ಹಂಪನಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಸಂಶೋಧನೆ, ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ಆಳವಾಗಿ ಅಧ್ಯಯನ ನಡೆಸಿರುವ ಇವರು ಅಗಣಿತ ಸ್ನೇಹ ವಿದ್ಯಾರ್ಥಿ ಬಳಗದ ಒಡತಿಯಾಗಿದ್ದರು, ಲೇಖಕಿ, ಅನುವಾದಕಿ, ವಾಗ್ಮಿ, ಹೋರಾಟಗಾರ್ತಿ, ಆಶಾವಾದಿ, ಸುಸಂಸ್ಕೃತೆ, ಸಜ್ಜನ ಮೃದು ಮಾತಿನ, ದಿಟ್ಟ ನಿಲುವಿನ ಹೆಣ್ಣು ಮಗಳಾಗಿದ್ದ ಕಮಲಾ ಹಂಪನಾ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದವರಾಗಿರುವುದು ಹೆಮ್ಮೆಯ ವಿಷಯ ಎಂದರು.

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಮಾತನಾಡಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕರಾಗಿ ಲೇಖಕಿಯರಿಗೆ ಸ್ಫೂರ್ತಿ ತುಂಬಿದ್ದಾರೆ, ಹಂಪನಾ ಮತ್ತು ಕಮಲಾ ಹಂಪನಾ ದಂಪತಿ ಮುದ್ದಣ ಮನೋರಮೆಯರಂತೆ ಮಾದರಿಯಾಗಿದ್ದರು, ಜೈನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿ, ಅಮೂಲ್ಯ ಕೃತಿಗಳ ರಚನೆ ಮಾಡಿದ್ದಾರೆ, ಕಮಲಾ ಹಂಪನಾ ನೆನಪಿನ ವಿಚಾರ ಸಂಕಿರಣ ಏರ್ಪಡಿಸಿ, ಮತ್ತಷ್ಟು ವಿಷಯಗಳನ್ನು ಸಾಹಿತ್ಯಾಸಕ್ತರು ಮೆಲುಕು ಹಾಕುವಂತೆ ಮಾಡಬೇಕೆಂದರು.

ಜೈನ ಸಮಾಜದ ಅಧ್ಯಕ್ಷ ನಾಗರಾಜ್ ನುಡಿನಮನ ಸಲ್ಲಿಸಿ ಕಳೆದ ಆರು ತಿಂಗಳ ಹಿಂದೆ ತುಮಕೂರಿಗೆ ಭೇಟಿ ತಮ್ಮೊಂದಿಗೆ ಕಾಲ ಕಳೆದ ನೆನಪನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೆ.ಎಸ್.ಉಮಾ ಮಹೇಶ್, ಚಿಕ್ಕಬೆಳ್ಳಾವಿ ಶಿವಕುಮಾರ್, ಕೆಂಕೆರೆ ಮಲ್ಲಿಕಾರ್ಜುನ್, ಜಿ.ಹೆಚ್.ಮಹದೇವಪ್ಪ, ರಾಣಿ ಚಂದ್ರಶೇಖರ್, ನಟರಾಜ್, ಜಲದಿ ರಾಜು, ಚೆಲುವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!