ಪ್ಲಾಸ್ಟಿಕ್ ನಿಯಂತ್ರಿಸದಿದ್ದರೆ ಅಪಾಯ ಗ್ಯಾರಂಟಿ

ಸಿದ್ದಗಂಗಾ ಕಾಲೇಜು ವಿದ್ಯಾರ್ಥಿನಿಯರಿಂದ ಜಾಗೃತಿ ಕಾರ್ಯಕ್ರಮ

23

Get real time updates directly on you device, subscribe now.


ತುಮಕೂರು: ಪ್ಲಾಸ್ಟಿಕ್ ಎಂಬುದು ಧೈತ್ಯಾಕಾರವಾಗಿ ಮತ್ತೆ ಮತ್ತೆ ಹುಟ್ಟಿ ಬರುವ ವಸ್ತುವಾಗಿದೆ, ದಿನದಿಂದ ದಿನಕ್ಕೆ ಇದರ ಬಳಕೆಯ ಕಬಂದ ಬಾಹುಗಳು ಬೆಳೆಯುತ್ತಿವೆ, ಎಲ್ಲಾ ಕ್ಷೇತ್ರದಲ್ಲಿ ಇದರ ಬಳಕೆಯಾಗುತ್ತಿದ್ದು, ಮಾನವನ ಆರೋಗ್ಯದ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತಿದೆ, ಇದರಿಂದ ಕ್ಯಾನ್ಸರ್ ನಂತ ಭಯಾನಕ ರೋಗ ಉಂಟಾಗುತ್ತಿವೆ ಎಂದು ತುಮಕೂರು ವಿವಿ ಜೈವಿಕ ತಂತ್ರಜ್ಞಾನ- ಪರಿಸರ ವಿಜ್ಞಾನ ವಿಭಾಗಗಳ ಮುಖ್ಯಸ್ಥ ಡಾ.ದ್ವಾರಕನಾಥ್.ವಿ. ಹೇಳಿದರು.
ನಗರದ ಶ್ರೀಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸ್ವಯಂ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಪ್ರತಿಪಾದಿಸಿದರು.

ಪ್ಲಾಸ್ಟಿಕ್ ಬಗ್ಗೆ ಭಾರತ ಮತ್ತು ಇತರೆ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಪಿಪಿಟಿ ಮೂಲಕ ಮಕ್ಕಳಿಗೆ ವಿವರಿಸಿ, ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಸಂಯೋಜನಾಧಿಕಾರಿ ಪ್ರೊ.ಜಿ.ಎಸ್.ರೇಣುಕಪ್ಪ ಮಾತನಾಡಿ, ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಇದರಿಂದ ತೊಂದರೆ ಇದೆ, ಆದ್ದರಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವುದು ಮುಂದಿನ ಪೀಳಿಗೆಗೆ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್.ಪಿ. ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳ ಬದಲು ಪರ್ಯಾಯ ವಸ್ತುಗಳನ್ನು ಬಳಸಿ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆಸ್ಗರ್ ಬೇಗ್ ನೇತೃತ್ವದಲ್ಲಿ ಪ್ಲಾಸ್ಟಿಕ್ ಆರಿಸುವ ಮೂಲಕ ವಿದ್ಯಾರ್ಥಿನಿಯರು ಪ್ಲಾಸ್ಟಿಕ್ ಬ್ಯಾಗ್ ಮುಕ್ತಗೊಳಿಸುವ ಕುರಿತು ಜಾಗೃತಿ ಮೂಡಿಸಲಾಯಿತು.
ನಂತರ ಜಿಲ್ಲಾ ಆಸ್ಪತ್ರೆ ಆವರಣದಿಂದ ಮಹಾನಗರ ಪಾಲಿಕೆ ಕಚೇರಿ ವರೆಗೆ ಘೋಷಣಾ ಫಲಕ ಹಿಡಿದು ಜಾಥಾ ನಡೆಸಿದ ವಿದ್ಯಾರ್ಥಿನಿಯರು ಮಹಾ ನಗರ ಪಾಲಿಕೆಯ ಆಯುಕ್ತರ ಕಚೇರಿಯ ಪರಿಸರ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಸಮರ್ಥನೀಯ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು, ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ವಿಜೇತರಿಗೆ ಕಾಲೇಜಿನ ಸಂಯೋಜನಾಧಿಕಾರಿ ಪ್ರೊ.ಜಿ.ಎಸ್.ರೇಣುಕಪ್ಪ ಬಹಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಎನ್. ಸುಧಾಕರ್, ಉಪನ್ಯಾಸಕಿ ವಿನುತ.ಎಸ್.ಬಿ. ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!