ಸಿದ್ದರಾಮಯ್ಯರ ತೇಜೋವಧೆ ಸಹಿಸುವುದಿಲ್ಲ

22

Get real time updates directly on you device, subscribe now.


ತುಮಕೂರು: ಸಾಮಾಜಿಕ ಹರಿಕಾರ, ರಾಜಕೀಯ ಧುರೀಣ ಹಿಂದುಳಿದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷಗಳು ಗುರುತರವಾದ ಷಡ್ಯಂತರ ರೂಪಿಸಿವೆ, 40 ವರ್ಷಗಳ ಕಾಲ ಕಪ್ಪು ಚುಕ್ಕೆ ಇಲ್ಲದೆ ಶುದ್ಧ ಹಸ್ತದ ಆಡಳಿತ ನೀಡಿದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವಿರೋಧ ಪಕ್ಷಗಳು ಹುನ್ನಾರ ನಡೆಸುತ್ತಿದ್ದು ಸಿದ್ದರಾಮಯ್ಯನವರ ವಿರುದ್ಧದ ಈ ತೇಜೋವಧೆಯನ್ನು ನಾವು ಸಹಿಸುವುದಿಲ್ಲ ಎಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ತಿಳಿಸಿದರು.

ಮುಡಾ ಹಗರಣ, ವಾಲ್ಮೀಕಿ ಹಗರಣಗಳಲ್ಲಿ ಸಿದ್ದರಾಮಯ್ಯ ಅವರ ಹೆಸರು ತರಲಾಗುತ್ತಿದೆ ಎಂಬ ಚರ್ಚೆಗಳು ನಡೆದ ಬೆನ್ನೆಲ್ಲೆ ಹಾಗೂ ರಾಜ್ಯಪಾಲರು ಸಿಎಂ ಅವರಿಗೆ ಪ್ರಾಸಿಕ್ಯೂಷನ್ ಗೆ ಹಾಜರಾಗುವಂತೆ ನೋಟಿಸ್ ನೀಡಿದ ಬೆನ್ನೆಲ್ಲೆ ನಗರದ ಬಿ.ಎಚ್.ರಸ್ತೆಯ ಸಂಘದ ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯನವರು ಬಡವರು, ದಲಿತರು, ಕಾರ್ಮಿಕರ ಪರ ಇದ್ದಾರೆ, ಹಿಂದುಳಿದ ಮತ್ತು ದಲಿತ ಸಮುದಾಯಗಳು ಅವರ ಪರವಾಗಿ ಬಂಡೆಯಂತೆ ನಿಂತಿವೆ, ಅಭಿವೃದ್ಧಿಯ ಉದ್ದೇಶವಿಲ್ಲದೆ ಕೇವಲ ಅವರ ತೇಜೋವಧೆಯ ಕಾರಣಕ್ಕಾಗಿ ಮೈತ್ರಿ ಪಕ್ಷಗಳು ಪಾದಯಾತ್ರೆ ನಡೆಸಿದರೆ ತುಮಕೂರು ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದಲೂ ಜನ ಸೇರಿಸಿ ಪ್ರತಿಕಾರದ ಪ್ರತಿಭಟನೆ ತೀರಿಸಿಕೊಳ್ಳಲಾಗುವುದು, ಇಂತಹ ದೊಡ್ಡ ಮಟ್ಟದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಮಾತನಾಡಿ ಕಪ್ಪು ಚುಕ್ಕೆ ಇಲ್ಲದ ಅಹಿಂದ ವರ್ಗಗಳ ನಾಯಕ ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ, ಅಸೂಯೆಯ ರಾಜಕಾರಣ ಮಾಡುವ ಬಿಜೆಪಿಗರು ತಮ್ಮ ಹಗರಣ ಮುಚ್ಚಿಕೊಳ್ಳುವ ಸಲುವಾಗಿ ರಾಜ್ಯಪಾಲರ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ, ಅಡ್ಡ ದಾರಿಯಲ್ಲಿ ಮೈತ್ರಿ ಮಾಡಿಕೊಂಡ ಜೆಡಿಎಸ್, ಬಿಜೆಪಿ ಇದೀಗ ದೂರದ ಮನಸ್ಸಿನಲ್ಲಿದ್ದು, ಎರಡು ಪಕ್ಷದ ನಾಯಕರುಗಳ ನಡುವೆ ಸರಿಯಾದ ಒಡಂಬಡಿಕೆ ಇಲ್ಲ, ಇಂತಹ ಸಂದರ್ಭದಲ್ಲಿ ಬಡವರ ಪರ, ದಲಿತರ ಪರ, ಹಿಂದುಳಿದವರ ಅಲ್ಪಸಂಖ್ಯಾತ ವರ್ಗದ ಪರವಾಗಿರುವ ಮುಖ್ಯಮಂತ್ರಿಗಳ ವಿರುದ್ಧ ಅವಹೇಳನ ಮಾಡುವ ವಿರೋಧ ಪಕ್ಷಗಳು ತೇಜೋವಧೆ ಮಾಡುತ್ತಿದ್ದು, ಒಬ್ಬ ಹಿಂದುಳಿದ ಸ್ವಚ್ಛ ನಾಯಕನ ಮೇಲೆ ಅಸೂಯೆಯ ಹೊಟ್ಟೆ ಹುರಿಯ ರಾಜಕಾರಣ ಮಾಡುತ್ತಿರುವುದು ಸರಿ ಇಲ್ಲ, ಹೀಗಾಗಿ ಕೂಡಲೇ ಬಿಜೆಪಿಗರು ತಮ್ಮ ನಿಲುವನ್ನ ವಾಪಸ್ ಪಡೆಯದೆ ಹೋದರೆ ನಾವು ಸುಮ್ಮನಿರಲ್ಲ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಟಿ.ರಘುರಾಮ್, ಕನಕ ಯುವ ಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು, ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಮಧುಕರ್, ಕವಿರತ್ನ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮರಾಜು, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!