ಕಮಲಾ ಹಂಪನಾ ಬದುಕು, ವ್ಯಕ್ತಿತ್ವ ಮಾದರಿ

20

Get real time updates directly on you device, subscribe now.


ತುಮಕೂರು: ಕನ್ನಡಕ್ಕೆ ವಿಶಿಷ್ಟ, ಮೌಲಿಕವಾದ ಗಟ್ಟಿ ಬರೆವಣಿಗೆ ನೀಡಿದ ಕಮಲಾ ಹಂಪನಾ ಅವರ ಬದುಕು, ಪರಿಶುದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದುನಾಡೋಜ ಹಂ.ಪ. ನಾಗರಾಜಯ್ಯ ಹೇಳಿದರು.
ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಶನಿವಾರ ಆಯೋಜಿಸಿದ್ದ ನಾಡೋಜ ಪ್ರೊ.ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಮಲಾ ಹಂಪನಾ ಅವರು 6 ವರ್ಷ ಸಹಪಾಠಿಯಾಗಿ, 61 ವರ್ಷ ಸಹ ಧರ್ಮಿಣಿಯಾಗಿ ದಾಂಪತ್ಯ ಜೀವನದಲ್ಲಿ ಜೊತೆಯಾದರು, ಸಾಹಿತ್ಯ ಪಯಣದಲ್ಲಿ ವಿರಳವಾಗಿರುವ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ವಾಗ್ಮಿತೆಯ ದೃಷ್ಟಿಯಿಂದ ಪ್ರಬುದ್ಧ ವಿಷಯಗಳನ್ನು ಪ್ರಸ್ತಾಪಿಸಿ, ಸಂಶೋಧನೆ ನಡೆಸಿದರು, ಅವರ ಕಥೆಗಳು, ಕವನಗಳು, ವಚನಗಳು ವಿಮರ್ಶಾತ್ಮಕ ದೃಷ್ಟಿಯಿಂದ ಕೂಡಿವೆ ಎಂದು ತಿಳಿಸಿದರು.

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ಕಮಲಾ ಹಂಪನಾ ಅವರ ವ್ಯಕ್ತಿತ್ವದ ಪ್ರಭಾವ ಸಕಾರಾತ್ಮಕವಾಗಿ ಅವರ ಸಂಗಡಿಗರ ಮೇಲೆ ಪರಿಣಾಮ ಬೀರಿತು, 18 ಸಂಪುಟಗಳ ಅವರ ಆತ್ಮಚರಿತ್ರೆಯಲ್ಲಿ ವಾಸ್ತವ ಸತ್ಯಗಳಿವೆ, 60 ವರ್ಷಗಳು ಸುದೀರ್ಘ ಸಾಹಿತ್ಯ ಸೇವೆ ಸಲ್ಲಿಸಿದರು, ಅನುಭವಕ್ಕೆ ದಕ್ಕಿದ ವಸ್ತುವಿನಿಂದ ಬರಹದಲ್ಲಿ, ಭಾಷಣದಲ್ಲಿ ಪ್ರಭುತ್ವ ಸಾಧಿಸಿದರು ಎಂದು ತಿಳಿಸಿದರು.
ಸಮಕಾಲಿನ ಸಂದರ್ಭದ ಸಾಕ್ಷಿಪ್ರಜ್ಞೆಯ ಕಮಲಾ ಹಂಪನಾ ಅವರು ಕ್ರೂರ ಸಮಾಜದಲ್ಲಿ ಸಾಮಾಜಿಕ ಹೊಣೆಗಾರಿಕೆ ಹೊತ್ತು, ಶಿಕ್ಷಣದ ಮೂಲಕ ಸಮಾಜದ ಅನಿಷ್ಟ ಕಟ್ಟುಪಾಡುಗಳಿಂದ ಮುಕ್ತವಾಗಲು ಹೋರಾಡಿದರು, ಸ್ತ್ರೀ ಸಂವೇದನೆ ಕಥೆಗಳನ್ನು, ಬಂಡಾಯದ ಕವನಗಳನ್ನು ಬರೆದರು, ಈಗಿನ ಸಾಹಿತ್ಯಲೋಕ ಕೆಸರು ಗದ್ದೆಯಾಗಿದೆ ಎಂಬ ಅಸಮಾಧಾನ ಅವರಿಗಿತ್ತು ಎಂದು ತಿಳಿಸಿದರು.

ಜಾನಪದ ತಜ್ಞೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಾಹಿತ್ಯಾಭ್ಯಾಸ ಮಾಡುವ ಏಕೈಕ ಗುರಿ ಕಮಲಾ ಹಂಪನಾ ಅವರಿಗಿತ್ತು, ಕನ್ನಡಕ್ಕಾಗಿ ಯಾರನ್ನಾದರೂ ಎದುರು ಹಾಕಿಕೊಳ್ಳುವಂಥ ಧೈರ್ಯಗಾತಿ ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಸಾಹಿತ್ಯ ಲೋಕದ ಮಿನುಗುತಾರೆ ಕಮಲಾ ಹಂಪನಾ ಅವರನ್ನು ಕಳೆದುಕೊಂಡಿದ್ದೇವೆ, ಅವರ ಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ, ಜೈನ ಸಮುದಾಯದ ಕುರಿತು ಸಂಶೋಧನೆ ನಡೆಸಿ, ಸಂಪುಟಗಳನ್ನು ಪ್ರಕಟಿಸುವುದರಲ್ಲಿ ಅಗ್ರಗಣ್ಯರು ಎಂದರು.

ಕಾರ್ಯಕ್ರಮದ ಸಂಯೋಜಕಿ ಡಾ.ಗೀತಾ, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!