ಅರಸು ರಾಜಕೀಯ ಜೀವನ ಸ್ಫೂರ್ತಿದಾಯಕ

ಹಿಂದುಳಿದ ವರ್ಗದ ಆತ್ಮ ಗೌರವ ಹೆಚ್ಚಿಸಿದ್ದು ಅರಸು: ಜ್ಯೋತಿ ಗಣೇಶ್

11

Get real time updates directly on you device, subscribe now.


ತುಮಕೂರು: ಹಲವಾರು ವರ್ಷಗಳಿಂದ ಸಮಾಜದ ಮುನ್ನೆಲೆಗೆ ಬಾರದೆ ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗದ ಸಮುದಾಯಗಳ ಆತ್ಮ ಗೌರವ ಹೆಚ್ಚುವಂತೆ ಮಾಡಿದ್ದು ದೇವರಾಜ ಅರಸು ಎಂದು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು.
ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರ ಎಂದೆ ಹೆಸರು ಪಡೆದಿದ್ದ ಅರಸು ಅವರ ರಾಜಕೀಯ ಜೀವನ ಸ್ಫೂರ್ತಿದಾಯಕವಾದದ್ದು, ಇಂತಹ ಮಹಾನ್ ವ್ಯಕ್ತಿಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಅವರ ಸಾಧನೆಗಳ ಬಗ್ಗೆ ಪ್ರತಿಯೊಬ್ಬರಿಗು ತಿಳಿಯುವಂತೆ ಮಾಡಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ನ್ಯಾಯ ಒದಗಿಸಿಕೊಟ್ಟವರು ದೇವರಾಜು ಅರಸು ಅವರು, ಕರ್ನಾಟಕದಲ್ಲಿ ಭೂ- ಸುಧಾರಣೆ ಕಾಯ್ದೆಗಳು 1950 ರಿಂದ ಜಾರಿಗೆ ತಂದರೂ ಅವುಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ, ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತರುವ ಮೂಲಕ ಲಕ್ಷಾಂತರ ಹಿಂದುಳಿದ, ಬಡವ, ದಲಿತ ಸಮುದಾಯದ ಜನರ ಜೀವನ ಕಟ್ಟಿಕೊಟ್ಟಿದ್ದಾರೆ, ಇಂತಹ ಮೇರು ವ್ಯಕ್ತಿತ್ವದ ಅರಸು ಅವರನ್ನು ಒಂದು ದಿನ ನೆನೆದು ಸುಮ್ಮನಾಗದೆ ಸದಾ ನೆನೆಯಬೇಕು ಎಂದರು.

ದೇವರಾಜು ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲ ಹೊನ್ನಗೊಂಡನಹಳ್ಳಿ ಕರಿಯಣ್ಣ, ಕರ್ನಾಟಕದ ಮೊದಲ ದಲಿತ ಮುಖ್ಯಮಂತ್ರಿಯಾದ ದೇವರಾಜು ಅರಸು ಅವರು ರಾಷ್ಟ್ರಕವಿ ಕುವೆಂಪು ಅವರ ಬರವಣಿಗೆಗಳಿಂದ ಪ್ರೇರೇಪಿತರಾಗಿ ಅರಣ್ಯ ಸಂರಕ್ಷಣೆ ಕಾಯ್ದೆ, ಋಣ ಪರಿಹಾರ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಮಹತ್ವದ ಯೋಜನೆ ಜಾರಿಗೆ ತರುವ ಮೂಲಕ ದೂರದೃಷ್ಟಿ ನಾಯಕ ಎನಿಸಿಕೊಂಡರು, ಹಿಂದುಳಿದ ವರ್ಗದವರು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶ್ರಮಿಸಿದ ಅರಸು ಅವರು ತಾವು ಮಾಡಿದ ಕೆಲಸಗಳಿಂದ ನಮ್ಮ ಮಧ್ಯೆ ಸದಾ ಜೀವಂತವಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಜನ ಸಮುದಾಯ ಮುಖಂಡರಾದ ಹೆಬ್ಬೂರು ಶ್ರೀನಿವಾಸ್, ಲಕ್ಷ್ಮೀಕಾಂತರಾಜು, ಗುರು ಪ್ರಸಾದ್, ಅಶ್ವಥ್ ನಾರಾಯಣ್, ಸಿ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋನಿಯಾ ವೆರ್ಣೇಕರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ಹಾಲಸಿದ್ದಪ್ಪ ಪೂಜೇರಿ, ತುಮಕೂರು ಡಿಡಿಪಿಐ ಕೆ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಕೃಷ್ಣಪ್ಪ, ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀ ನರಸಿಂಹಯ್ಯ ಸೇರಿದಂತೆ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!