7 ದಿನದೊಳಗೆ ಬೆಳೆ ನಷ್ಟ ಸಮೀಕ್ಷೆ ಮಾಡಿ

ರೈತರಿಗೆ ವಿಮಾ ಪರಿಹಾರ ನೀಡಲು ಕ್ರಮ ವಹಿಸಿ: ಜಿಲ್ಲಾಧಿಕಾರಿ

8

Get real time updates directly on you device, subscribe now.


ತುಮಕೂರು:ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಹೊಂದಿರುವ ಬೆಳೆ ನಷ್ಟದ ಸಮೀಕ್ಷೆಯನ್ನು 7 ದಿನಗಳೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆ ವಿಮೆಗೆ ನೋಂದಣಿಯಾಗಿ ಮಳೆಯಿಂದ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಕೂಡಲೇ ವಿಮಾ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ವಿಮೆಗೆ ನೋಂದಾಯಿಸಿದ ಬೆಳೆ ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳ ವಿವರವನ್ನು ವಿಮಾ ಕಂಪನಿ ಅಥವಾ ಕೃಷಿ ಇಲಾಖೆಗೆ 3 ದಿನದೊಳಗಾಗಿ ನೀಡುವಂತೆ ರೈತರಿಗೆ ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
ನಷ್ಟದ ಮಾಹಿತಿ ಸ್ವೀಕರಿಸಿದ ಮೇಲೆ ಬೆಳೆ ನಷ್ಟ ನಿರ್ಧರಿಸಲು ವಿಮಾ ಸಂಸ್ಥೆಯವರು ನಷ್ಟ ನಿರ್ಧಾರಕರನ್ನು ನೇಮಿಸಬೇಕು, ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಹಾಗೂ ತಾಲ್ಲೂಕು, ಹೋಬಳಿ ಮಟ್ಟದ ಕೃಷಿ ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟ ನಿರ್ಧರಿಸಬೇಕೆಂದು ನಿರ್ದೇಶನ ನೀಡಿದರು.

ಮಳೆ ನಷ್ಟ ವರದಿಯು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆಯಾದ ನಂತರ 15 ದಿನಗಳೊಳಗಾಗಿ ರೈತರಿಗೆ ಡಿಬಿಟಿ ಮೂಲಕ ಪರಿಹಾರ ಹಣ ಪಾವತಿಸಬೇಕು, ಮಳೆ ಹಾನಿಯಿಂದ ಬೆಳೆ ನಷ್ಟ ಹೊಂದಿರುವ ರೈತರಿಗೆ ಇದು ಸುವರ್ಣಾವಕಾಶವಾಗಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಮಾತನಾಡಿ, ಪೂರ್ಣ ವಿಮಾ ಕಂತು ಪಾವತಿಸಿದ ರೈತರಿಗೆ ಶೇ.100 ರಷ್ಟು ಬೆಳೆ ನಷ್ಟ ಹೊಂದಿರುವ ಅಧಿಸೂಚಿತ ಮಳೆಯಾಶ್ರಿತ ಬೆಳೆಗಳಿಗೆ ವಿಮಾ ಪರಿಹಾರ ನೀಡಲಾಗುವುದು, ಜಿಲ್ಲೆಯ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ ಬೆಳೆಗೆ ಪ್ರತಿ ಎಕರೆಗೆ 22865.55 ರೂ., ರಾಗಿ ಬೆಳೆಗೆ 17199.75 ರೂ. ಹಾಗೂ ಶೇಂಗಾ ಬೆಳೆಗೆ 22056.15 ರೂ. ವಿಮಾ ಪರಿಹಾರ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ವಿಮಾ ಕಂಪನಿಯಾಗಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲಾಗಿದ್ದು, ಬೆಳೆ ಹಾನಿಗೊಳಗಾದ ರೈತರು ತಮ್ಮ ಅರ್ಜಿಯನ್ನು ಕಂಪನಿಯ ಪ್ರತಿನಿಧಿಗಳಾದ ದಯಾನಂದ (ಕೊರಟಗೆರೆ ತಾಲ್ಲೂಕು- 9037581055) ಹಾಗೂ ಮಂಜುನಾಥ (ತುಮಕೂರು ಜಿಲ್ಲೆ- 8088528286) ಅವರನ್ನು ಅಥವಾ ಕೃಷಿ ಇಲಾಖೆಯಿಂದ ಸ್ಥಾಪಿಸಲಾಗಿರುವ ರೈತರ ಸಹಾಯವಾಣಿ ಸಂಖ್ಯೆ 0816- 2278474, ಮೊ.ಸಂ. 8884006306, 8884006308ನ್ನು ಸಂಪರ್ಕಿಸಿ ತಮ್ಮ ಬೆಳೆ ಹಾನಿ ಕುರಿತು ಮಾಹಿತಿ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ರೈತರು ತಮ್ಮ ಬೆಳೆ ನಷ್ಟ ವಿವರಗಳನ್ನು ಆಗಸ್ಟ್ 27ರಂದು ಹುಲಿಕುಂಟೆ ಗ್ರಾಮ ಪಂಚಾಯತಿಯಲ್ಲಿ ಬೆಳಗ್ಗೆ 10 ರಿಂದ 12 ಗಂಟೆ, ತುಂಬಾಡಿ ಪಂಚಾಯತಿಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆ ಹಾಗೂ ವಡ್ಡಗೆರೆ ಪಂಚಾಯತಿಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ, ಆಗಸ್ಟ್ 28ರಂದು ಬಿ.ಡಿ.ಪುರ ಪಂಚಾಯತಿಯಲ್ಲಿ ಬೆಳಗ್ಗೆ 10 ರಿಂದ 12 ಗಂಟೆ, ಕ್ಯಾಮೇನ ಹಳ್ಳಿಯಲ್ಲಿ ಮಧ್ಯಾಹ್ನ 12 ರಿಂದ 2 ಗಂಟೆ, ದೊಡ್ಡಸಾಗ್ಗೆರೆ ಪಂಚಾಯತಿಯಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಯೊಳಗಾಗಿ ಅಕ್ಕಿರಾಂಪುರ ಪಂಚಾಯತಿಯಲ್ಲಿ ಸಂಜೆ 4 ರಿಂದ 6 ಗಂಟೆವರೆಗೆ ಸಲ್ಲಿಸಬಹುದಾಗಿದೆ.
ಸಭೆಯಲ್ಲಿ ಉಪ ಕೃಷಿ ನಿರ್ದೇಶಕ ಡಾ.ಚಂದ್ರಕುಮಾರ್, ತೋಟಗಾರಿಕೆ ಉಪ ನಿರ್ದೇಶಕ ಶಾರದಮ್ಮ, ಕೊರಟಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ, ಓರಿಯಂಟಲ್ ಇನ್ಸೂರೆನ್ಸ್ ವಿಮಾ ಕಂಪನಿಯ ಪ್ರತಿನಿಧಿಗಳು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!