ತಾಲೂಕಿನಲ್ಲಿ ಕೊರೊನಾ ಹೆಚ್ಚಳ ನಾಗರೀಕರಲ್ಲಿ ಕಳವಳ

ಕೋವಿಡ್ ಮಾರ್ಗಸೂಚಿ ಯಾರಿಗೂ ಬೇಕಿಲ್ಲ!

253

Get real time updates directly on you device, subscribe now.

ಚೇತನ್

ಚಿಕ್ಕನಾಯಕನಹಳ್ಳಿ: ಕೊರೊನಾ ಅರ್ಭಟ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಿನನಿತ್ಯ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಜನ ಇನ್ನೂ ಸಹ ಗಂಭೀರವಾಗಿ ಪರಿಗಣಿಸಿಲ್ಲ. ಕೋವಿಡ್ ರೋಗಿಗಳ ಮೇಲೆ ತಾಲೂಕು ಆಡಳಿತ ನಿಗವಹಿಸದಿದ್ದರೆ, ತಾಲೂಕಿನಲ್ಲಿ ಕೊರೊನಾ ಕೈಮೀರುವುದರಲ್ಲಿ ಅನುಮಾನವಿಲ್ಲ.
ತಾಲೂಕಿನಲ್ಲಿ 15 ದಿನಗಳ ಹಿಂದೆ ಐದಾರು ಇದ್ದ ಕೊರೊನಾ ಪಾಸಿಟಿವ್ ಪ್ರಸ್ತುತ 96 ದಾಟಿದೆ, ಪಾಸಿಟಿವ್ ಬಂದ ವ್ಯಕ್ತಿಯ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರಿಗೆ ಹೆಚ್ಚು ಕೊರೊನಾ ಪಾಸಿಟಿವ್ ದಾಖಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಕೊರೊನಾ ತಡೆಗಟ್ಟಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಅದರೇ ಸಾರ್ವಜನಿಕರ ಸಹಕಾರವಿಲ್ಲದ್ದೆ ಕಾರ್ಯಕ್ರಮ ಕಾರ್ಯರೂಪಕ್ಕೆ ಬರದಂತಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿಯೂ ಸಹ ಕೋವಿಡ್ ಮಾರ್ಗಸೂಚನೆಗಳನ್ನು ಪಾಲನೆ ಮಾಡಲಾಗುತ್ತಿಲ್ಲ. ಶುಕ್ರವಾರ ಬೆಸ್ಕಾಂ ಕಚೇರಿಯ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗಿದೆ.
96 ಕೋವಿಡ್ ಪಾಸಿಟಿವ್: ಶುಕ್ರವಾರ ಒಂದೇ ದಿನ 31 ಕೊರೊನಾ ಪಾಸಿಟಿವ್ ಕೇಸ್ಗಳು ದಾಖಲಾಗಿದ್ದು, ಒಟ್ಟು ತಾಲೂಕಿನಲ್ಲಿ 96 ಪಾಸಿಟಿವ್ ಕೇಸ್ಗಳಿವೆ , 12 ಜನ ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 79 ಜನ ಹೋಂ ಐಸೋಲೇಶನ್ನಲ್ಲಿ ಇದ್ದಾರೆ.
ಲಸಿಕೆ ಹಾಕಿಸಿಕೊಳ್ಳಲು ಮನಸ್ಸಿಲ್ಲ: ಸರ್ಕಾರ 45ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುತಿದ್ದು ಆದರೇ ಹಿರಿಯ ನಾಗರಿಕರು ಲಸಿಕೆ ಪಡೆಯಲು ಯಾಕೋ ಹಿಂಜರಿಯುತ್ತಿದ್ದಾರೆ. ಇದುವರೆಗೂ ಕೇವಲ ಶೇ 27ರಷ್ಟು ಜನ ಮಾತ್ರ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಹೋಂ ಐಸೋಲೇಶನ್ನಲ್ಲಿರುವವರ ಮೇಲೆ ನಿಗಾ ಅನಿವಾರ್ಯ: ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣವಿರುವುದರಿಂದ, ಪಾಸಿಟಿವ್ ರೋಗಿಗಳನ್ನು ಗುಣಮುಖವಾಗುವವರೆಗೆ ಜನರ ಜೊತೆ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವ ಅನಿವಾರ್ಯ ಉಂಟಾಗಿದೆ. ಪಾಸಿಟಿವ್ ರೋಗಿಗಳ ಜೊತೆಯಲ್ಲಿನ ವ್ಯಕ್ತಿಗಳಿಗೆ ಹೆಚ್ಚು ಪಾಸಿಟಿವ್ ಬರುತ್ತಿದ್ದು ಇದರಿಂದ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿದೆ.ಲಾಕ್ಡೌನ್, ಸೀಲ್ಡೌನ್ ಸಮಯದಲ್ಲಿ ಮನೆಯಲ್ಲಿ ಇರದೇ ಓಡಾಡುತ್ತಿದ್ದ ಪಾಸಿಟಿವ್ ರೋಗಿಗಳು, ಯಾವುದೇ ನಿರ್ಬಂಧವಿಲ್ಲದ ಸಮಯದಲ್ಲಿ ಐಸೋಲೇಶನ್ನಲ್ಲಿ ಇರುತಾರಾ? ಪಾಸಿಟಿವ್ ಕೇಸ್ಗಳಿಗೆ ನಿರ್ಭಂದ ಮಾಡದಿದ್ದರೆ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ.

ಕೊರೊನಾ ಪಾಸಿಟಿವ್ ದೃಢಪಟ್ಟಿರುವ ವ್ಯಕ್ತಿ ಕಟ್ಟುನಿಟ್ಟಾಗಿ ಐಸೋಲೇಶನ್ನಲ್ಲಿ ಇರದಿದ್ದರೆ, ವ್ಯಕ್ತಿ ಪ್ರೀತಿಸುವ, ಇಷ್ಟಪಡುವ ವ್ಯಕ್ತಿಗಳಿಗೇ ಹೆಚ್ಚು ತೊಂದರೆಯಾಗುವುದು, ಪಾಸಿಟಿವ್ ಬಂದರೆ ಭಯಬೇಡ 14 ದಿನ ಜನರ ಸಂಪರ್ಕದಿಂದ ದೂರವಿದ್ದು ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾರೆ ಮನೆಯಲ್ಲಿರುವ ತಂದೆ, ತಾಯಿ, ಹೆಂಡತಿ, ಮಕ್ಕಳು ನಿಮ್ಮಿಂದ ಕಷ್ಟ ಅನುಭವಿಸುತ್ತಾರೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.
ತೇಜಸ್ವಿನಿ ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ

ನಾಗರಿಕರು ಹೆಚ್ಚು ಕೊರೊನಾ ಲಸಿಕೆ ಪಡೆದುಕೊಳ್ಳಬೇಕಾಗಿದೆ. ಕೊರೊನಾ ಲಸಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ , ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾಸ್ಕ್, ಸಾಮಾಜಿಕ ಅಂತರದಿಂದ ಕೊರೊನಾ ತಡೆಗಟ್ಟಬಹುದಾಗಿದೆ.
ಡಾ.ನವೀನ್, ತಾ.ವೈದ್ಯಾಧಿಕಾರಿ

Get real time updates directly on you device, subscribe now.

Comments are closed.

error: Content is protected !!