ಗುಬ್ಬಿ: ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.
ತಾಲೂಕಿನ ಹೇರೂರಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 137ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜದ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಸಮಾನತೆ ಹಾಗೂ ಮಾನವೀಯತೆಯ ಗುಣ ಕಲಿಸಲು ಅವಕಾಶವಿದೆ, ಶಿಕ್ಷಕರ ದೇಹಕ್ಕೆ ಬೆಲೆ ಇಲ್ಲ, ಆದರೆ ಅವರು ಕಲಿಸುವಂತಹ ಜ್ಞಾನಕ್ಕೆ ಅಪಾರ ಬೆಲೆ ಇದೆ ಎಂಬುದನ್ನು ತಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು, ಕೇವಲ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು, ಬ್ಯಾಡ್ಜ್ ಗಳನ್ನ ಹಾಕಿಕೊಂಡರೆ ಅದು ಕೇವಲ ಕಾರ್ಯಕ್ರಮವಾಗುತ್ತದೆ, ಅವರ ಆದರ್ಶ, ಕನಸುಗಳನ್ನ ತಾವೆಲ್ಲರೂ ಕೂಡ ಅರ್ಥ ಮಾಡಿಕೊಂಡು ಕೆಲಸ ಮಾಡಿದರೆ ಇಡೀ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನ ತಾವೆಲ್ಲರೂ ತರಬಹುದಾಗಿದ್ದು ಮಕ್ಕಳಿಗೆ ಆದರ್ಶ, ಮಾನವೀಯತೆ, ಉತ್ತಮ ನಡತೆಗಳನ್ನ ಕಲಿಸಿದಾಗ ಖಂಡಿತವಾಗಿ ಸಮಾಜದಲ್ಲಿ ನೀವು ಅವರಿಗೆ ದೇವರಾಗಿ ಕಾಣುತ್ತೀರಾ ಎಂದು ತಿಳಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಸಮಾಜದ ಪರಿವರ್ತನೆ ಬದಲಾವಣೆ ಆಗಬೇಕು ಅಂದರೆ ಅದು ಶಿಕ್ಷಕರಿಂದ ಶಿಕ್ಷಣದಿಂದ ಮಾತ್ರ ಸಾಧ್ಯ, ಆಧುನಿಕತೆ ಬೆಳೆದಂತೆ ಶಿಕ್ಷಣವು ಬದಲಾಗಬೇಕಾಗಿದ್ದು, ಇಂದಿನ ಮಾಹಿತಿ ತಂತ್ರಜ್ಞಾನಕ್ಕೆ ಶಿಕ್ಷಕರು ಹೊಂದಿಕೊಳ್ಳುವ ಮೂಲಕ ಮಕ್ಕಳ ಉತ್ತಮ ಭವಿಷ್ಯಕ್ಕೆ ದಾರಿಯಾಗಬೇಕು ಕಳೆದ ವರ್ಷ ತುಮಕೂರು ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿತ್ತು, ಈಗ 5ನೇ ಸ್ಥಾನಕ್ಕೆ ಹೋಗಿದೆ ಎಂದಾಗ ಬೇಸರವಾಗುತ್ತದೆ, ಈ ಬಾರಿ ಅದು ಆಗ ಕೂಡದು, ಶಿಕ್ಷಕರು ಕಾಯ, ವಾಚ ಮನಸ ಕೆಲಸ ಮಾಡಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರಿಗೆ, ಕ್ರೀಡೆಯಲ್ಲಿ ಗೆಲುವು ಪಡೆದ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಸಿ.ಶಿವಣ್ಣ, ಪಟ್ಟಣ ಪಂಚಾಯಿತಿಯ ಸದಸ್ಯರು, ತಾಲೂಕು ಕಾರ್ಯವಾಹಕ ಅಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು.ಎಂ.ಎಸ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ.ಪಿ, ಕ್ಷೇತ್ರ ಸಮನ್ವಯಾಧಿಕಾರಿ ಮಧುಸೂದನ್.ಕೆ.ಎಸ್, ತಾಲೂಕು ಶಿಕ್ಷಣಾಧಿಕಾರಿ ಸಂಘದ ಅಧ್ಯಕ್ಷ ಸಂಗಮೇಶ್.ಬಿ.ಕೆ, ಸಂಘದ ಎನ್.ಟಿ.ಪ್ರಕಾಶ್, ಕಸಾಪ ಅಧ್ಯಕ್ಷ ಯತೀಶ್.ಎಚ್.ಸಿ, ಯೋಗಾನಂದ.ಎಸ್, ಉಮೇಶ್ ಇತರರು ಇದ್ದರು.
Comments are closed.