ಈದ್ ಮಿಲಾದ್ ಪ್ರಯುಕ್ತ ಚಾಂದಿನಿ ಮೆರವಣಿಗೆ

7

Get real time updates directly on you device, subscribe now.


ತುಮಕೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪ್ರಯುಕ್ತ ಶಾಂತಿನಗರದ ಗೂಡ್ ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆ ನಡೆಸಲಾಯಿತು.
ನಗರದ ಗೂಡ್ ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಆರಂಭವಾದ ಚಾಂದಿನಿ ಮೆರವಣಿಗೆಯು ಬನಶಂಕರಿ, ಸದಾಶಿವನಗರ, ನಜರಾಬಾದ್, ಚಾಂದಿನಿ ಸರ್ಕಲ್, ಪಿ.ಹೆಚ್. ಕಾಲೋನಿ, ಬಿ.ಜಿ. ಪಾಳ್ಯ ವೃತ್ತದ ಮುಖೇನ ಸಂತೆಪೇಟೆಯಲ್ಲಿ ಸಾಗಿತು.
ನಂತರ ಮೆರವಣಿಗೆಯು ಮಂಡಿಪೇಟೆ ಮುಖ್ಯ ರಸ್ತೆಯಿಂದ ಗುಂಚಿ ಸರ್ಕಲ್, ಬಾರ್ ಲೈನ್ ಮಸೀದಿ ಮುಖೇನ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.

ಚಾಂದಿನಿ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹಮದ್ ಪೈಗಂಬರ್ ಹುಟ್ಟುಹಬ್ಬವನ್ನು ಈದ್ ಮಿಲಾದ್ ಹೆಸರಿನಲ್ಲಿ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ, ಹಾಗೆಯೇ ನಗರದಲ್ಲಿಯೂ ಅತ್ಯಂತ ಶಾಂತಿಯಿಂದ ಈ ಆಚರಣೆ ಮಾಡಲಾಗಿದೆ ಎಂದರು.
ಐದು ನಿಯಮಗಳಾದ ದೇವರಲ್ಲಿ ಪ್ರಾರ್ಥನೆ, ನಂಬಿಕೆ, ದುಡಿಮೆಯ ಒಂದು ಭಾಗ ದಾನ ನೀಡುವ ಜಕಾತ್ ಇವುಗಳನ್ನು ಅಳವಡಿಸಿಕೊಂಡರೆ ಅದೇ ನಾವು ಪ್ರವಾದಿಗಳಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.

ಚಾಂದಿನಿ ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್.ಷಫಿ ಅಹಮದ್, ಇಕ್ಬಾಲ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಡಿವೈಎಸ್ಪಿ ಕೆ.ಆರ್.ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯರಾದ ನಯಾಜ್ ಅಹಮದ್, ಇನಾಯತ್, ಹೆಚ್.ಡಿ.ಕೆ ಮಂಜುನಾಥ್, ಜೆ.ಕುಮಾರ್ ಮಹಮದ್ಪೀರ್, ಇಮ್ರಾನ್ ಪಾಷ, ಇಸ್ಮಾಯಿಲ್, ಎಲ್ಲಾ ಮಸೀದಿಗಳ ಮುತ್ತುವಲ್ಲಿಗಳು, ಇಮಾಮ್ ಗಳು ಪಾಲ್ಗೊಂಡಿದ್ದರು.
ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!