ಆಧುನಿಕ ಚಿಕಿತ್ಸಾ ವಿಧಾನಗಳ ಅಗತ್ಯವಿದೆ

ರಾಜ್ಯ ಮಟ್ಟದ ಇ ಎನ್ ಟಿ ಸಮ್ಮೇಳನದಲ್ಲಿ ಸಚಿವ ಪರಮೇಶ್ವರ್ ಹೇಳಿಕೆ

3

Get real time updates directly on you device, subscribe now.


ತುಮಕೂರು: ಬದಲಾದ ಕಾಲಘಟ್ಟದಲ್ಲಿ ವಾತಾವರಣದಲ್ಲಿ ದಿನೇ ದಿನೇ ಹೊಸ ಕಾಯಿಲೆ ಹೆಚ್ಚುತ್ತಿದ್ದು, ಮನುಷ್ಯನ ಬಹು ಮುಖ್ಯ ಅಂಗಗಳಾದ ಕಿವಿ, ಮೂಗು, ಗಂಟಲಿನ ಅನೇಕ ಖಾಯಿಲೆಗಳು ಸೃಷ್ಟಿಯಾಗುತ್ತಿವೆ, ಇವುಗಳಲ್ಲಿ ಬ್ಯಾಕ್ಟೀರಿಯಲ್ – ವೈರಲ್ ರೋಗ ಲಕ್ಷಣಗಳು ಹೆಚ್ಚಾಗಿದ್ದು, ಇವುಗಳಿಗೆ ಸಮರ್ಪಕವಾದ ಆಧುನಿಕ ಚಿಕಿತ್ಸಾ ವಿಧಾನ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಗೃಹ ಸಚಿವ ಹಾಗೂ ಸಾಹೇ ವಿವಿಯ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರ ಹೊರ ವಲಯದ ಅಗಳಕೋಟೆಯ ಶ್ರೀಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಆವರಣದಲ್ಲಿರುವ ಶಿಕ್ಷಣ ಭೀಷ್ಮ ಡಾ.ಎಂ.ಗಂಗಾಧರಯ್ಯನವರ ಸ್ಮಾರಕ ಭವನದಲ್ಲಿ ಶುಕ್ರವಾರ ನಡೆದ 41ನೇ ರಾಜ್ಯ ಮಟ್ಟದ ಇ ಎನ್ ಟಿ ಸಮ್ಮೇಳನ ಅಯೋಕ್ಕಾನ್-24ನ್ನು ಉದ್ಘಾಟಿಸಿ ಮಾತನಾಡಿ, ವಿವಿಧ ರೀತಿಯಲ್ಲಿ ಕಂಡು ಬರುವ ಕಿವಿ ಮೂಗು ಗಂಟಲುಗಳಿಗೆ ಸಂಬಂಧಿತ ಕಾಯಿಲೆಗಳಿಗೆ ಹೊಸ ವಿಧಾನಗಳ ಮೂಲಕ ಆವಿಷ್ಕಾರ ತಾಂತ್ರಿಕ ವ್ಯವಸ್ಥೆಗಳನ್ನು ವೈದ್ಯರು ಅಳವಡಿಸಿಕೊಂಡು ಚಿಕಿತ್ಸೆ ನೀಡಬೇಕಾಗಿದೆ ಎಂದರು.

ಅಯೋಕ್ಕಾನ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಶಂಕರ್ ಬಿ ಮೇದಿಕೇರಿ ಮಾತನಾಡಿ, ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ ಇ ಎನ್ ಟಿ ನುರಿತ ವೈದ್ಯರು ಆಗಮಿಸಿದ್ದು, ತುಮಕೂರಿನಲ್ಲಿಯೇ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿರುವುದು ಪ್ರಶಂಸನೀಯವಾಗಿದೆ. ಸಮ್ಮೇಳನದ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯರಲ್ಲಿ ವಿನಂತಿಸಿದರು.

ಸಮಾರಂಭದಲ್ಲಿ ಸಾಹೇ ವಿವಿಯ ಉಪ ಕುಲಪತಿ ಡಾ.ಬಿ.ಕೆ.ಲಿಂಗೇಗೌಡ, ಸಿದ್ದಾರ್ಥ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಉಪ ಪ್ರಾಂಶುಪಾಲ ಡಾ.ಪ್ರಭಾಕರ್, ಸಮ್ಮೇಳನ ಸಮಿತಿ ಸಂಚಾಲಕರಾದ ಡಾ.ಜ್ಯೋತಿ ಸ್ವರೂಪ್, ಡಾ.ರಾಘವೇಂದ್ರ.ಕೆ.ಜಿ, ಡಾ.ಇಂದುಶೇಖರ್ ಸಿಂಗ್.ಬಿ.ಎಸ್, ಡಾ.ರವಿಕುಮಾರ್.ಸಿ.ಜಿ, ಡಾ.ಮುನೀಶ್ವರ.ಜಿ.ಬಿ. ಸೇರಿದಂತೆ ರಾಜ್ಯದ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ತಂಡ ಹಾಗೂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!