ಮಳೆಯ ಹೊಡತಕ್ಕೆ ನೆಲ ಕಚ್ಚಿದ ಟೊಮೊಟೋ

ಸೌತೆ, ಶುಂಠಿ, ಹೂವಿನ ಬೆಳೆ ಹಾನಿ- ರೈತರಿಗೆ ಅಪಾರ ನಷ್ಟ

3

Get real time updates directly on you device, subscribe now.


ಕುಣಿಗಲ್: ತಾಲೂಕಿನಾದ್ಯಂತ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತೇರೆದಕುಪ್ಪೆ ಗ್ರಾಪಂ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಟೊಮೊಟೋ, ಸೌತೆ, ಶುಂಠಿ, ಹೂವಿನ ಬೆಳೆ ಹಾನಿಯಾಗಿದ್ದು ಯಾವುದೇ ಅಧಿಕಾರಿ ಭೇಟಿ ನೀಡಿ ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಹೇಳಿದರು.

ಗುರುವಾರ ತಾಲೂಕಿನ ಕೊತ್ತಗೆರೆ ಹೋಬಳಿಯ ತೇರೆದಕುಪ್ಪೆ, ನರ್ಜನಕುಪ್ಪೆ, ಗಿಡದಪಾಳ್ಯ, ಎಸ್.ಕೆ.ಕಾವಲ್ ಇತರೆ ಗ್ರಾಮಗಳಲ್ಲಿ ಬೆಳೆ ಹಾನಿಯಾದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿಯಾದ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
ಗಿಡದಪಾಳ್ಯದ ನಂಜುಂಡೇಗೌಡ ಎರಡು ಎಕರೆ ಪ್ರದೇಶದಲ್ಲಿ ಟೊಮೊಟೋ, ಎರಡು ಎಕರೆ ಪ್ರದೇಶದಲ್ಲಿ ಚಂಡು ಹೂಬೆಳೆ ಬೋರ್ವೆಲ್ ನೀರಿನ ಆಶ್ರಯದಲ್ಲಿ ಬೆಳೆದಿದ್ದು 80 ದಿನಗಳ ಶ್ರಮ ಹಾಕಿ ಎರಡೂ ಬೆಳೆಯಿಂದ 12 ಲಕ್ಷ ರೂ. ವೆಚ್ಚ ಮಾಡಿದ್ದು ಬೆಳೆ ಕಟಾವಿನ ಸಮಯದಲ್ಲಿ ಸತತ ಮಳೆ ಹಿಡಿದ ಕಾರಣ 14 ಕೆಜಿ ಯಂತೆ ಮೂರು ಸಾವಿರ ಕ್ರೇಟ್ ಟೊಮೊಟೋ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು ಹಾಕಿದ ಬಂಡವಾಳವೆ ಇಲ್ಲದಂತಾಗಿದೆ, ಚೆಂಡು ಹೂ ಸುಮಾರು ಒಂದು ಟನ್ ಕೈ ಸೇರಬೇಕಿದ್ದು ಜಮೀನನಲ್ಲೆ ಕೊಳೆಯುತ್ತಿದೆ ಎಂದರೆ, ರೈತ ನಾಗಾರಾಜು ಒಂದು ಎಕರೆ ಸೌತೆಕಾಯಿ ಬೆಳೆ ಇಡಲು ಐವತ್ತು ಸಾವಿರ ವೆಚ್ಚ ಮಾಡಿದ್ದು ಕಟಾವಿನ ಸಮಯಕ್ಕೆ ಸತತ ಮಳೆ ಬಿದ್ದು ಇಡೀ ಬೆಳೆ ಹಾಳಾಗಿದೆ ಎಂದು ಅಳಲು ತೋಡಿಕೊಂಡರು.

ರೈತರು ಮನವಿ ನೀಡಲು ಹೋದರೂ ಕೇಳುತ್ತಿಲ್ಲ, ತಾಲೂಕು ಆಡಳಿತ ಕೂಡಲೆ ರೈತರ ನೆರವಿಗೆ ಧಾವಿಸಿ ಸೂಕ್ತ ಬೆಳೆ ಹಾನಿ ಪರಿಹಾರ ಕೊಡಿಸಲು ಮುಂದಾಗಬೇಕು, ಇಲ್ಲವಾದಲ್ಲಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಮುಖರಾದ ನಾಗರಾಜ, ಸಿದ್ದು, ದೀಪಕ್, ಮಂಜುನಾಥ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!