ಕುಣಿಗಲ್: ಕಂದಾಯ ಇಲಾಖೆಯಲ್ಲಿ ಇ-ಆಫೀಸ್ ಜಾರಿಗೊಳಿಸಲು ಎಲ್ಲಾ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ, ಮುಂದಿನ ಆರು ತಿಂಗಳ ಒಳಗೆ ಕಂದಾಯ ಇಲಾಖೆ ಸಂಪೂರ್ಣ ಇ-ಆಫೀಸ್ ನಿರ್ವಹಿಸಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿ ಮಾತನಾಡಿ, ಯಾವುದೇ ಕಡತ ಗ್ರಾಮ ಆಡಳಿತಾಧಿಕಾರಿ, ರಾಜಸ್ವ ನಿರೀಕ್ಷಕ, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ವಿಭಾಗೀಯ ಆಯುಕ್ತರ ಕಚೇರಿಯಿಂದ ರಾಜ್ಯಮಟ್ಟಕ್ಕೆ ತಲುಪಲು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಿದ್ದರಿಂದ ಇ-ಆಫೀಸ್ಗೆ ಹೆಚ್ಚು ಒತ್ತು ನೀಡಲಾಗಿದೆ, ಈಗಾಗಲೆ ಜಿಲ್ಲಾಧಿಕಾರಿ ಕಚೇರಿವರೆಗೂ ಆಗಿದೆ, ತಾಲೂಕು ಕಚೇರಿ, ರಾಜಸ್ವ ನಿರೀಕ್ಷಕ, ಗ್ರಾಮ ಆಡಳಿತಾಧಿಕಾರಿ ಕಚೇರಿಯಿಂದ ಇ- ಆಫೀಸ್ ಆಗಲು ಸಂಬಂಧಪಟ್ಟ ಸಿಬ್ಬಂದಿಗೆ ಟ್ಯಾಬ್ (ಕ್ರೋಮ್), ಲ್ಯಾಪ್ ಟಾಪ್, ಕಂಪ್ಯೂಟರ್ ವ್ಯವಸ್ಥೆ ಮಾಡುವ ಮೂಲಕ ಇ-ಆಫೀಸ್ ಕಾರ್ಯ ನಿರ್ವಹಿಸ ಲಾಗುವುದು. ಇ-ಆಫೀಸ್ ಕಾರ್ಯ ನಿರ್ವಹಣೆಯಿಂದ ಕೆಲಸದಲ್ಲಿ ಶೀಘ್ರಗತಿಯ ಜೊತೆ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂದರು.
ಆಡಳಿತಸೌಧಕ್ಕೆ ಭೇಟಿ ನೀಡಿದಾಗ ಉಪ ನೋಂದಣಾಧಿಕಾರಿ ಕಚೇರಿ ಇನ್ನು ಆಡಳಿತಸೌಧಕ್ಕೆ ವರ್ಗಾವಣೆ ಆಗದಿರುವ ಬಗ್ಗೆ ಪ್ರಶ್ನಿಸಿ ಶೀಘ್ರವೆ ಅಗತ್ಯಕ್ರಮಕೈಗೊಳ್ಳುವಂತೆ, ಹೆಚ್ಚಿನ ಜನರು ಭೇಟಿ ನೀಡುವ ಕಾರಣ ನೆಲಅಂತಸ್ತಿನಲ್ಲೆ ಜಾಗ ನೀಡುವಂತೆ ಸೂಚಿಸಿದರು, ಸರ್ವೇ ಭೂದಾಖಲೆಗಳ ಅಭಿಲೇಖಾಲಯದ ಸಿಬ್ಬಂದಿಗೆ ಎಬಿಸಿಡಿಇ ಗ್ರೇಡ್ ದಾಖಲೆಗಳ ಬಗ್ಗೆ ಕೇಳಿದಾಗ ಸಿಬ್ಬಂದಿ ಉತ್ತರ ನೀಡದೆ ಮೌನಕ್ಕೆ ಶರಣಾದರು, ಇದಕ್ಕೆ ಆಕ್ಷೇಪಿಸಿ ಸಿಬ್ಬಂದಿಗೆ ಕಾರ್ಯಾಗಾರ ನಡೆಸಿ ಅರಿವು ಮೂಡಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ರಶ್ಮಿ ಇತರರು ಇದ್ದರು.
Comments are closed.