ತುಮಕೂರು: ಪ್ರತಿಯೊಬ್ಬರೂ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ಹೊಂದಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ವಾಹನ ಚಲಾಯಿಸುವವರು ತಮ್ಮ ಸುರಕ್ಷತೆ ಜೊತೆಗೆ ರಸ್ತೆಯಲ್ಲಿ ಸಂಚರಿಸುವವರ ಸುರಕ್ಷತೆ ಬಗ್ಗೆಯೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಸಾರಿಗೆ ಇಲಾಖೆ, ರಸ್ತೆ ಸುರಕ್ಷತಾ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಗರದ ಆರ್ ಟಿ ಓ ಕಚೇರಿ ಆವರಣದಲ್ಲಿ ಸಂಚಾರ ಸುರಕ್ಷತಾ ಜಾಗೃತಿಯ ನಡಿಗೆಜಾಥಾಗೆ ಚಾಲನೆ ನೀಡಿ ಮಾತನಾಡಿ, ಸಂಚಾರ ನಿಯಮಗಳ ಜಾಗೃತಿ ನಿತ್ಯದ ಮಂತ್ರವಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಸಂಚಾರಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಗುರುನಾಥ್, ಮನಶಾಸ್ತ್ರಜ್ಞ ಡಾ.ಕುಮಾರ್, ಶಿಕ್ಷಕ ರೇಣುಕಾರಾಧ್ಯ ಅವರು ರಸ್ತೆ ಸುರಕ್ಷತೆ, ವಾಹನ ಚಾಲಕರ ಆರೋಗ್ಯಕರ ಮನಸ್ಥಿತಿ, ಸುರಕ್ಷತೆ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್, ಹಿರಿಯ ಮೋಟಾರ್ ನಿರೀಕ್ಷಕ ಶರೀಫ್, ಸಿದ್ಧಗಂಗಾ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಸ್.ಪರಮೇಶ್, ಜಿಲ್ಲಾ ಮೋಟಾರ್ ವಾಹನ ತರಬೇತಿ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಅಣ್ಣೆನಹಳ್ಳಿ ಶಿವಕುಮಾರ್, ರಾಜ್ಯ ಕಾರ್ಯದರ್ಶಿ ಟಿ.ಆರ್.ಸದಾಶಿವಯ್ಯ, ಐಎಂಎ ಜಿಲ್ಲಾ ಅಧ್ಯಕ್ಷ ಡಾ.ನಾಗಭೂಷಣ್, ಕಾರ್ಯದರ್ಶಿ ಡಾ.ಪ್ರದೀಪ್, ರೋಟರಿ ತುಮಕೂರು ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಅಬ್ದುಲ್ ಖಾದರ್, ನರಸಿಂಹಮೂರ್ತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ನಟರಾಜೇಗೌಡ ಮೊದಲಾದವರು ಭಾಗವಹಿಸಿದ್ದರು.
Comments are closed.